ತಂದೆ ಮಗುವಿಗೆ ಜನ್ಮವನ್ನು ಮಾತ್ರ ಕೊಡುತ್ತಾನೆ. ಆದರೆ, ಗುರು ಅವನನ್ನು ‘ಜನ್ಮ ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾನೆ. ಆದ್ದರಿಂದಲೇ ತಂದೆಗಿಂತಲೂ ಗುರುವನ್ನು ಶ್ರೇಷ್ಠವೆಂದು ಹೇಳಲಾಗಿದೆ.
ಒಂದು ಬದ್ದ ಜೀವ ಇನ್ನೊಂದು ಬದ್ದ ಜೀವನವನ್ನು ಉದ್ದಾರ ಮಾಡಲಾರದು. ಗುರುಗಳು ಮುಕ್ತರಾಗಿರುವುದರಿಂದಲೇ ಶಿಷ್ಯನ ಉದ್ದಾರವನ್ನು ಮಾಡಬಲ್ಲರು. ಶ್ರೀ ಗುರುವು ದೊರೆಯದೇ ಮೋಕ್ಷಕ್ಕೆ ಹೋಗುವ ಮಾರ್ಗವು ಸಿಗುವುದಿಲ್ಲ. ಆದ ಕಾರಣ ಮೊದಲು ಶ್ರೀಗುರುವಿನ ಚರಣಗಳನ್ನು ಹಿಡಿಯಬೇಕು.
‘ಕಂಡುದ ಹಿಡಿಯಲೊಲ್ಲದೆ ಕಾಣದುದನರಿಸಿ ಹಿಡಿದಿಹೆನೆಂದರೆ ಸಿಕ್ಕದೆಂದು ಬಳಲಿಕೆ ನೋಡಾ! ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು ಗುಹೇಶ್ವರ’ ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಗುರುವಿನ ಮಹತ್ವದ ಕುರಿತು ತಿಳಿಸಿಕೊಟ್ಟಿದ್ದಾರೆ.
ಗುರು ಕೃಪಾದೃಷ್ಠಿ ಪ್ರಾಪ್ತವಾಗಲು ಪ್ರಯತ್ನಿಸಬೇಕು. ಗುರುವು ಕ್ಷಣಾರ್ಧದಲ್ಲಿ ತಮ್ಮಂತೆ ಮೋಕ್ಷದ ಅಧಿಕಾರಿಯನ್ನಾಗಿ ಮಾಡುತ್ತಾನೆ. ಅವರಿಗೆ ಕಾಲ, ಸಮಯದ ಅವಶ್ಯಕತೆ ಇರುವುದಿಲ್ಲ. ಗುರುವಿನ ಮಹಿಮೆ ಎಷ್ಟಿದೆ ಎಂದರೆ ಅವರಿಗೆ ಸ್ಪರ್ಶಮಣಿಯ ಉಪಮೆ ಕೊಡಲು ಸಾಧ್ಯವಿಲ್ಲ.
ಒಬ್ಬನೇ ಸಾಧನೆ ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಬಹಳ ಕಠಿಣವಾದುದ್ದು. ಆದ್ದರಿಂದ ಆಧ್ಯಾತ್ಮದ ಗುರುವಿನ ಮಾರ್ಗದರ್ಶನ ಪಡೆದರೆ ಈಶ್ವರಪ್ರಾಪ್ತಿಯು ಸಾಧ್ಯವಾಗುತ್ತದೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಬೋಧಿಸಿದ್ದಾರೆ. ಅದಕ್ಕಾಗಿ ಗುರುವಿನ ಉಪದೇಶದಿಂದ ನಾವೆಲ್ಲ ಅಜ್ಞಾನದ ಕತ್ತಲೆ ಕಳೆದುಕೊಂಡು ಜ್ಞಾನಿಗಳಾಗೋಣ…