ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ರಾಜ್ ಗುರು ಫುಡ್ ನ ಮೆಕ್ಕೆಜೋಳ ತುಂಬಿರುವ ಟ್ಯಾಂಕ್ ನ ಸರಣಿ ಪಿಲ್ಲರ್ ಗಳು ಕುಸಿದು ಬಿದ್ದು ಸಾವಿಗೀಡಾದ ಬಿಹಾರದ ಏಳು ಕಾರ್ಮಿಕರ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಘೋಷಣೆ ಮಾಡಿದರು.
ರಾಜಗುರು ಫುಡ್ಸ್ ನ ಮಾಲೀಕ ಕಿಶೋರ್ ಜೈನ್ ಅವರು ಸಾವಿಗೀಡಾದ ಕಾರ್ಮಿಕರಿಗೆ ತಲಾ ₹5 ಲಕ್ಷ ಪರಿಹಾರ ಕೊಡಲು ಒಪ್ಪಿದ್ದಾರೆ. ರಾಜ್ಯ ಸರ್ಕಾರ ತಲಾ ₹ 2 ಲಕ್ಷ ಪರಿಹಾರ ನೀಡಲಿದೆ ಎಂದು ತಿಳಿಸಿದರು.
ಗಾಯಗೊಂಡಿರುವ ಒಬ್ಬ ಕಾರ್ಮಿಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾರೆ. ಅವರಿಗೆ ಸಹ ₹50 ಸಾವಿರ ಪರಿಹಾರ ನೀಡಲಾಗುವುದು ಎಂದರು.
ವಿಮಾನದ ಮೂಲಕ ರವಾನೆ:
ಕಾರ್ಮಿಕರ ಶವಗಳನ್ನು ಸಮೀಪದ ಬೆಳಗಾವಿ ಅಥವಾ ಕುಲಬುರ್ಗಿ ವಿಮಾನ ನಿಲ್ದಾಣದಿಂದ ಬಿಹಾರ ರಾಜ್ಯದ ರಾಜಧಾನಿ ಪಟ್ನಾಕ್ಕೆ ವಿಮಾನದ ಮೂಲಕ (ಏರ್ ಲಿಫ್ಟ್) ಸಾಗಿಸಿ, ಕಾರ್ಮಿಕರ ಮನೆಗೆ ತಲುಪಿಸಲಾಗುವುದು ಎಂದರು.
ಘಟನೆಯಲ್ಲಿ ಒಟ್ಟು 50 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್, ಅಗ್ನಿಶಾಮಕ, ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸಚಿವರು ಧನ್ಯವಾದ ಸಲ್ಲಿಸಿದರು.
ಅಗತ್ಯ ಕ್ರಮ:
ರಾಜ್ಯದ ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ ಇದ್ದರು.