ಬೆಂಗಳೂರು: ‘ನೂತನ ಸಂಸತ್ ಭವನ ದೇಶದ ಆಸ್ತಿ. ಅದು ಯಾರೊಬ್ಬರ ವೈಯಕ್ತಿಕ ವಿಷಯವಲ್ಲ. ಹೀಗಾಗಿ ಸಂಸತ್ ಭವನದ ಉದ್ಘಾಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ‘ಸಂಸತ್ ಭವನವು ಬಿಜೆಪಿ ಅಥವಾ ಆರ್ಎಸ್ಎಸ್ ಕಚೇರಿಯಲ್ಲ. ದೇಶದ ಜನರ ತೆರಿಗೆಯ ಹಣದಿಂದ ನಿರ್ಮಿಸಿದ ಭವನ ಅದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಅದು ಅವರ ವೈಯಕ್ತಿಕ ಕಾರ್ಯಕ್ರಮವಲ್ಲ. ದೇಶದ ಕಾರ್ಯಕ್ರಮ’ ಎಂದರು.
‘ಸಂಸತ್ತಿನ ಎರಡೂ ಸದನಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಈಗಲೂ ರಾಜ್ಯಸಭೆಯ ಸದಸ್ಯನಾಗಿದ್ದೇನೆ. ಅಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಸಂವಿಧಾನದ ವಿಷಯದಲ್ಲಿ ರಾಜಕೀಯ ತರಲು ಬಯಸುವುದಿಲ್ಲ. ಬಿಜೆಪಿಯನ್ನು ವಿರೋಧಿಸಲು ನನಗೆ ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ’ ಎಂದು ಹೇಳಿದರು.
‘ಅನೇಕ ಪಕ್ಷಗಳು ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿವೆ. ನೀವು ಭಾಗವಹಿಸುತ್ತೀರಾ? ಎಂದು ಹಲವರು ಕೇಳುತ್ತಿದ್ದಾರೆ. ನಾನು ಸಂವಿಧಾನಕ್ಕೆ ಬದ್ಧನಾಗಿದ್ದೇನೆ. ಈ ಕಾರಣಕ್ಕಾಗಿಯೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ’ ಎಂದರು.