ಸುವರ್ಣಸೌಧ (ಬೆಳಗಾವಿ): ಹತ್ತು ದಿನಗಳ ಅಧಿವೇಶನ ಮುಗಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಹಲವು ಶಾಸಕರು ವಿಶ್ರಾಂತಿಗಾಗಿ ಗೋವಾಗೆ ತೆರಳಿದ್ದಾರೆ.
ಶಾಸಕರಾದ ಜಮೀರ್ಅಹಮದ್, ಎನ್.ಚೆಲುವರಾಯಸ್ವಾಮಿ ಗೋವಾ ಯಾತ್ರೆ ಆಯೋಜಿಸಿದ್ದಾರೆ. ಪಕ್ಷ ಸಂಘಟನೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸ ಹಮ್ಮಿಕೊಳ್ಳುವುದು, ಕೆಲ ಶಾಸಕರಲ್ಲಿ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಶಮನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಕೆಲವು ತಿಂಗಳಿಂದ ಈಚೆಗೆ ಜಮೀರ್ ಅಹಮದ್ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಇದ್ದಾರೆ. ‘ಸಕ್ರಿಯ ರಾಜಕೀಯದಿಂದ ದೂರ ಇರುತ್ತೇನೆ. ಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗಿರುತ್ತೇನೆ’ ಎಂಬ ಮಾತನ್ನು ಅವರೇ ಆಡಿದ್ದರು.
ಇನ್ನೂ ಕೆಲ ಶಾಸಕರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುತ್ತಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಗೋವಾದಲ್ಲೇ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಜೆಡಿಎಸ್ನ ಅನೇಕ ಶಾಸಕರು ಕಲಾಪದಲ್ಲಿ ಭಾಗವಹಿಸಿರಲಿಲ್ಲ. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಉಪ ನಾಯಕ ವೈ.ಎಸ್.ವಿ.ದತ್ತ, ಎಚ್.ಡಿ.ರೇವಣ್ಣ, ಬಿ.ಬಿ.ನಿಂಗಯ್ಯ, ಎಚ್.ಕೆ.ಕುಮಾರಸ್ವಾಮಿ, ಮಧು ಬಂಗಾರಪ್ಪ, ಎಚ್.ಎಸ್.ಶಿವಶಂಕರ್, ಎಂ.ಕೃಷ್ಣಾರೆಡ್ಡಿ, ಎನ್.ಎಚ್. ಕೋನರೆಡ್ಡಿ ಮಾತ್ರವೇ ಸದನದಲ್ಲಿ ಹಾಜರಿದ್ದರು.
‘ಇದರಲ್ಲಿ ಯಾವುದೇ ವಿಶೇಷ ಇಲ್ಲ. ಮಧ್ಯಾಹ್ನ ಧಾರವಾಡದ ನಮ್ಮ ಮನೆಯಲ್ಲಿ ಊಟ ಮಾಡಿ ಸಂಜೆ ಗೋವಾಗೆ ತೆರಳುತ್ತೇವೆ. ಕೆಲವು ಶಾಸಕರು ಗುರುವಾರ ಸಂಜೆಯೇ ಹೋಗಿದ್ದಾರೆ. ಪಕ್ಷ ಸಂಘಟನೆ, ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಇದೆಲ್ಲ ಊಹಾಪೋಹ ಅಷ್ಟೆ’ ಎಂದು ಕೋನರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗೋವಾ ನೋಡುವ ಆಸೆ ಇದ್ದವರು, ಮುಖಂಡರು ಹೋಗಿದ್ದಾರೆ. ನಾವು ಹತ್ತು ದಿನಗಳಿಂದ ಊರಿಗೆ ಹೋಗಿಲ್ಲ. ನಮಗೆ ಕ್ಷೇತ್ರಗಳಲ್ಲಿ ಕೆಲಸ ಇದೆ. ಹೀಗಾಗಿ ಗೋವಾಗೆ ತೆರಳುತ್ತಿಲ್ಲ’ ಎಂದು ಎಚ್.ಎಸ್.ಶಿವಶಂಕರ್ ಮತ್ತು ಸುಧಾಕರ ಲಾಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.