ಬೆಂಗಳೂರು: ನಗರದ ಆರ್ಎಂವಿ ಬಡಾವಣೆಯಲ್ಲಿರುವ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ನಿವಾಸಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ‘ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾದ ಕಾಲಕ್ಕೆ ನಾನು ಇಲ್ಲಿರಲು ಇಷ್ಟಪಡುವುದಿಲ್ಲ’ ಎಂದು ಅನಂತಮೂರ್ತಿ ಅವರು ಲೋಕಸಭಾ ಚುನಾವಣೆಗೂ ಮುನ್ನ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆಯನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದರು.
‘ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಅನಂತಮೂರ್ತಿ ಅವರ ಕುಟುಂಬ ಸದಸ್ಯರೊಬ್ಬರು ಮೌಖಿಕ ದೂರು ನೀಡಿದ್ದಾರೆ. ಆ ದೂರು ಆಧರಿಸಿ ಮುಂಜಾಗ್ರತಾ ಕ್ರಮವಾಗಿ ಅವರ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ’ ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆ ದೂರಿನ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದು ಅವರು ಹೇಳಿದ್ದಾರೆ. ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಒಂದು ತುಕಡಿ, ಎಸ್ಐ, ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ ಸೇರಿದಂತೆ ಸುಮಾರು 25 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅನಂತಮೂರ್ತಿ ಅವರ ಮನೆಯ ಬಳಿ ಕಳೆದ ಐದು ದಿನಗಳಿಂದ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೆ, ಸಂಜಯನಗರ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮನೆಯ ಬಳಿ ಹಗಲು ರಾತ್ರಿ ಗಸ್ತು ನಡೆಸುತ್ತಿದ್ದಾರೆ.
‘ಕರಾಚಿಗೆ ಎಂದು ಹೋಗುತ್ತಾರೆ’
ಲೋಕಸಭಾ ಚುನಾವಣೆ ಫಲಿತಾಂಶ ಬಂದ ದಿನದಿಂದ ಮನೆಯ ಸ್ಥಿರ ದೂರವಾಣಿಗೆ ಕರೆ ಮಾಡುತ್ತಿರುವ ಕೆಲ ವ್ಯಕ್ತಿಗಳು ಅನಂತಮೂರ್ತಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ‘ಅನಂತಮೂರ್ತಿ ಕರಾಚಿಗೆ ಎಂದು ಹೋಗುತ್ತಾರೆ ತಿಳಿಸಿ.
ಅವರು ಇಲ್ಲಿರುವುದು ಅಷ್ಟು ಸೂಕ್ತವಲ್ಲ. ನಾವು ಯಾರು ಎಂಬುದು ಅವರಿಗೆ ಗೊತ್ತಿದೆ’ ಎಂದು ಹೇಳುತ್ತಿದ್ದಾರೆ. ಕರೆ ಮಾಡುವವರು ಹೆಸರು ಹೇಳಿಕೊಳ್ಳುತ್ತಿಲ್ಲ. ಈ ಬಗ್ಗೆ ಸದಾಶಿವನಗರ ಠಾಣೆಗೆ ಮೇ 16ರಂದು ಮೌಖಿಕ ದೂರು ನೀಡಲಾಗಿತ್ತು. ಅಂದಿನಿಂದಲೇ ಪೊಲೀಸರು ಭದ್ರತೆ ಒದಗಿಸಿದ್ದಾರೆ