ಬೀಜಿಂಗ್ (ಪಿಟಿಐ): ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ ಒಳಗೊಂಡ ಹೊಸ ಭೂಪಟವನ್ನು ಬಿಡುಗಡೆ ಮಾಡಿರುವ ತನ್ನ ಕ್ರಮವನ್ನು ಚೀನಾ ಬುಧವಾರ ಸಮರ್ಥಿಸಿಕೊಂಡಿದೆ.
‘ಇದು ತನ್ನ ಕಾನೂನಿನ ಅನ್ವಯ ಕೈಗೊಂಡಿರುವ ರೂಢಿಗತ ಕ್ರಮವಾಗಿದೆ. ಈ ವಿಚಾರವಾಗಿ ಭಾರತ ವಸ್ತುನಿಷ್ಠವಾಗಿ ಹಾಗೂ ಶಾಂತಚಿತ್ತದಿಂದ ವರ್ತಿಸಬೇಕು. ಅತಿರೇಕದ ವ್ಯಾಖ್ಯಾನ ಕೈಬಿಡಬೇಕು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆಬ್ಬಿನ್ ಹೇಳಿದ್ದಾರೆ.
ಚೀನಾ ಬಿಡುಗಡೆ ಮಾಡಿದ್ದ ಹೊಸ ಭೂಪಟಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿ, ಮಂಗಳವಾರ ಪ್ರತಿಭಟನೆ ದಾಖಲಿಸಿತ್ತು.
‘ಇಂಥ ನಡೆಗಳು ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮತ್ತಷ್ಟು ಜಟಿಲಗೊಳಿಸುತ್ತವೆ’ ಎಂದೂ ಭಾರತ ಹೇಳಿತ್ತು.