ಕಠ್ಮಂಡು: ‘ತಂತ್ರಜ್ಞಾನದ ಕ್ಷಿಪ್ರ ವಿಕಾಸದ ನಡುವೆ ಮಕ್ಕಳನ್ನು ಒಳಗೊಂಡಂತೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿಭಾಯಿಸಲು ಅಂತರರಾಷ್ಟ್ರೀಯ ಸಹಕಾರ ಅಗತ್ಯ. ವಿವಿಧ ದೇಶಗಳಲ್ಲಿನ ಅತ್ಯುತ್ತಮ ನ್ಯಾಯದಾನ ವಿಧಾನಗಳನ್ನು ಬಾಲನ್ಯಾಯ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು.
ನೇಪಾಳದ ಮುಖ್ಯ ನ್ಯಾಯಮೂರ್ತಿ ಬಿಶ್ವಂಬರಪ್ರಸಾದ್ ಶ್ರೇಷ್ಠ ಅವರ ಆಹ್ವಾನದ ಮೇರೆಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಶನಿವಾರ ಹಮ್ಮಿಕೊಂಡಿದ್ದ ಬಾಲನ್ಯಾಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.
‘ಬಾಲನ್ಯಾಯದ ಕುರಿತಂತೆ ಚರ್ಚಿಸುವಾಗ, ಕಾನೂನು ಸಂಘರ್ಷದಲ್ಲಿ ಸಿಲುಕಿದ ಮಕ್ಕಳ ದೌರ್ಬಲ್ಯ ಮತ್ತು ವಿಶಿಷ್ಟ ಅಗತ್ಯತೆಗಳನ್ನು ನಾವು ಗುರುತಿಸಬೇಕು. ನಮ್ಮ ನ್ಯಾಯ ವ್ಯವಸ್ಥೆಯು ಸಹಾನುಭೂತಿ, ಪುನರ್ವಸತಿ ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರುವುದನ್ನು ಖಾತರಿಪಡಿಸಿಕೊಳ್ಳಬೇಕು’ ಎಂದರು.
‘ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವುದರಿಂದ ಬಾಲಾಪರಾಧಿಗಳು ಹ್ಯಾಕಿಂಗ್, ಸೈಬರ್ ಬೆದರಿಕೆ, ಆನ್ಲೈನ್ ವಂಚನೆ ಮತ್ತು ಡಿಜಿಟಲ್ ಕಿರುಕುಳದಂತಹ ಸೈಬರ್ ಅಪರಾಧಗಳಿಗೆ ಒಳಗಾಗುತ್ತಿದ್ದಾರೆ’ ಎಂದು ಚಂದ್ರಚೂಡ್ ಹೇಳಿದರು.