ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಾಯಕವಾಗಿರುವ ತಾಲಿಬಾನ್ ಮತ್ತು ಲಿಬಿಯಾ ನಿರ್ಬಂಧ ಸಮಿತಿ ಮತ್ತು ಭಯೋತ್ಪಾದನಾ ವಿರೋಧಿ ಸಮಿತಿಯ ನೇತೃತ್ವವನ್ನು ಭಾರತ ತನ್ನ ಅಧಿಕಾರವಧಿಯಲ್ಲಿ ವಹಿಸಲಿದೆ.
15 ಸದಸ್ಯ ರಾಷ್ಟ್ರಗಳಿರುವ ಭದ್ರತಾ ಮಂಡಳಿಯ ಶಾಶ್ವತಯೇತರ ಸದಸ್ಯ ರಾಷ್ಟ್ರವಾಗಿ ಭಾರತದ ಅವಧಿ ಇದೇ ತಿಂಗಳು ಆರಂಭವಾಗಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ಎರಡು ವರ್ಷಗಳ ಅವಧಿಗೆ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರವಾಗಿ ಕಾರ್ಯನಿರ್ವಹಿಸಲಿದೆ. ನಿರ್ಬಂಧ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಾಮರ್ಶಿಸಲು ಭದ್ರತಾ ಮಂಡಳಿಯು ವಿವಿಧ ಉಪ ಸಮಿತಿಗಳನ್ನು ರಚಿಸಿದೆ.
‘ಮೂರು ಪ್ರಮುಖ ಸಮಿತಿಗಳ ನೇತೃತ್ವ ವಹಿಸಲು ಭಾರತವನ್ನು ಕೋರಿರುವುದು ನಮಗೆ ಸಂತಸ ಮೂಡಿಸಿದೆ’ ಎಂದು ವಿಶ್ವಸಂಸ್ಥೆ ರಾಯಭಾರ ಕಚೇರಿಯ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ನಿರ್ಬಂಧ ಸಮಿತಿಯನ್ನು 1988ರ ನಿರ್ಬಂಧ ಸಮಿತಿ ಎಂದೂ ಗುರುತಿಸಲಾಗುತ್ತದೆ. ಇದು, ಭಾರತ ಉನ್ನತ ಪ್ರಾತಿನಿಧ್ಯ ನೀಡುವ ಸಮಿತಿಯಾಗಿದ್ದು, ಆಫ್ಗಾನಿಸ್ತಾನದಲ್ಲಿ ಶಾಂತಿ, ಭದ್ರತೆ, ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ಹೇಳಿದೆ.
ಭಯೋತ್ಪಾದನಾ ವಿರೋಧಿ ಸಮಿತಿಯ ಅಧ್ಯಕ್ಷರಾಗಿ ತಿರುಮೂರ್ತಿ ಅವರು 2022ರಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ಅದೇ ವರ್ಷ ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ.
ಅಂತರರಾಷ್ಟ್ರೀಯು ಗಮನವು ಲಿಬಿಯಾ ಮತ್ತು ಶಾಂತಿ ಪ್ರಕ್ರಿಯೆಯ ಮೇಲೆ ಇರುವ ಈ ನಿರ್ಣಾಯಕ ಹೊತ್ತಿನಲ್ಲಿ ಭಾರತ ಈ ಸಮಿತಿಯ ನೇತೃತ್ವವನ್ನು ವಹಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.