ಕೊಲಂಬೊ: ಶ್ರೀಲಂಕಾದ ಪೂರ್ವ ಪ್ರಾಂತ್ಯದ ಜೊತೆಗೆ ಭಾರತವು ವಿಶೇಷ ಬಾಂಧವ್ಯ ಹೊಂದಿದ್ದು, ಉಭಯ ರಾಷ್ಟ್ರಗಳ ಸಂಪರ್ಕದಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ ಎಂದು ಭಾರತೀಯ ರಾಯಭಾರಿ ಸಂತೋಷ್ ಝಾ ಹೇಳಿದರು.
ಈ ಪ್ರಾಂತ್ಯದ ಮೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದ ಅವರು, ಭಾರತ ಸರ್ಕಾರದ ನೆರವಿನಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾರ್ಯಗಳು, ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದರು.
ಈ ಪ್ರಾಂತ್ಯದ ಮೂರು ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ 33 ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಅಲ್ಲದೆ, ತ್ರಿಂಕೋಮಾಲಿ ಸಮಗ್ರ ಅಭಿವೃದ್ಧಿಗಾಗಿ ಉಭಯ ಸರ್ಕಾರಗಳ ನಡುವೆ ಮಾತುಕತೆ ನಡೆದಿದೆ ಎಂದು ಹೇಳಿದರು.
‘ಭಾರತ ಸರ್ಕಾರವು ಜಾರಿಗೊಳಿಸುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಝಾ ಪರಿಶೀಲಿಸಿದರು. ಈ ಪ್ರಾಂತ್ಯದಲ್ಲಿರುವ ಹಲವು ಐತಿಹಾಸಿಕ, ಸಾಂಸ್ಕೃತಿಕ, ವಾಣಿಜ್ಯ ಮಹತ್ವದ ಸ್ಥಳಗಳಿಗೂ ಭೇಟಿ ನೀಡಿದ್ದರು’ ಎಂದು ಈ ಬಗ್ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.