ಕಠ್ಮಂಡು: ಉತ್ತರ ನೇಪಾಳದ ಮನಾಸ್ಲು ಪರ್ವತದ ಇಳಿಜಾರಿನ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಭಾರಿ ಹಿಮಕುಸಿತ ಸಂಭವಿಸಿದೆ. ಪರಿಣಾಮ ಕೆಳಗೆ ಇರುವ ಬೀರೇಂದ್ರ ಸರೋವರದಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಈವರೆಗೆ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಸರೋವರದಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುನ್ನೆಚ್ಚರಿಕೆಯಾಗಿ ತಗ್ಗು ಪ್ರದೇಶದಲ್ಲಿರುವ ಹಳ್ಳಿಗಳ ಜನರಿಗೆ ಎಚ್ಚರಿಕೆಯಿಂದಿರಲು ಗೃಹ ಸಚಿವಾಲಯ ಸೂಚನೆ ನೀಡಿದೆ.
ಪ್ರವಾಹ ಸ್ಥಿತಿ ಎದುರಾದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಸಮಯಕ್ಕೆ ಸರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಲ್ಲಿನ ಪ್ರದೇಶಗಳಲ್ಲಿನ ಜನರಿಗೆ ನಾವು ಮನವಿ ಮಾಡಿದ್ದೇವೆ. ತಕ್ಷಣದ ಪ್ರತಿಕ್ರಿಯೆಯಾಗಿ ಆ ಪ್ರದೇಶಕ್ಕೆ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರ ನಾರಾಯಣ ಪ್ರಸಾದ್ ಭಟ್ಟಾರೈ ಮಾಹಿತಿ ನೀಡಿದ್ದಾರೆ.