ಚಂಡೀಗಡ: ಪಾಕಿಸ್ತಾನದ ನನಕಾನಾ ಸಾಹಿಬ್ ಗುರುದ್ವಾರದಲ್ಲಿ ಸಿಲುಕಿ ಹಾಕಿಕೊಂಡಿರುವ ಸಿಖ್ಖರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರ ಒತ್ತಾಯಿಸಿದೆ. ಅಲ್ಲದೆ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ಖಾನ್ ಅವರಿಗೆ ಈ ಕುರಿತು ಮನವಿ ಮಾಡಿದ್ದಾರೆ.
ಈ ವಿಷಯವಾಗಿ ಕೂಡಲೇ ಇಮ್ರಾನ್ ಖಾನ್ ಅವರೊಂದಿಗೆ ಸಮಾಲೋಚಿಸಿ, ಸಿಖ್ಖ ಸಮುದಾಯದವರ ರಕ್ಷಣೆಗೆ ಮುಂದಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆಶಿರೋಮಣಿ ಅಕಾಲಿ ದಳ (ಎಸ್ಎಡಿ) ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮನವಿ ಮಾಡಿದ್ದರು.
ನನಕಾನಾ ಸಾಹಿಬ್, ಸಿಖ್ ಧರ್ಮ ಸ್ಥಾಪಕ ಗುರುನಾನಕ್ ದೇವ್ ಅವರ ಜನ್ಮಸ್ಥಳ. ಇಲ್ಲಿನ ಗುರುದ್ವಾರವನ್ನು ಶುಕ್ರವಾರ ಸುತ್ತುವರಿದಿದ್ದ ಗುಂಪೊಂದು, ಸಿಖ್ಖರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
‘ಕಳೆದ ವರ್ಷ ಸಿಖ್ ಬಾಲಕಿಯನ್ನು ಅಪಹರಿಸಿ, ಮತಾಂತರಗೊಳಿಸಲಾಗಿತ್ತು. ಗುಂಪೊಂದು ಕಲ್ಲು ತೂರಾಟ ನಡೆಸಿರುವುದು ಸಿಖ್ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಮುಂದುವರಿದಿರುವುದರ ದ್ಯೋತಕ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
‘ನಗರದ ಹೆಸರು ನನಕಾನಾ ಸಾಹಿಬ್ ಎಂಬುದನ್ನು ಗುಲಾಮ್ ಅಲಿ ಮುಸ್ತಫಾ ಎಂದು ಬದಲಿಸುವಂತೆ ಈ ಗುಂಪು ಒತ್ತಾಯಿಸಿದೆ’ ಎಂದು ಬಾದಲ್ ಆರೋಪಿಸಿದ್ದಾರೆ.