ಕಠ್ಮಂಡು: ‘ನೇಪಾಳದ ಸಂಸತ್ತನ್ನು ವಿಸರ್ಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್ನ ಹೊಸ ಸಾಂವಿಧಾನಿಕ ಪೀಠವನ್ನು ಭಾನುವಾರ ರಚಿಸಲಾಗಿದೆ’ ಎಂದು ಮಾಧ್ಯಮ ವರದಿಗಳು ಹೇಳಿವೆ.
ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶಂಷೇರ್ ರಾಣಾ ಅವರು, ಹಿರಿತನ ಮತ್ತು ಪರಿಣಿತಿಯ ಆಧಾರದ ಮೇರೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೊಳಗೊಂಡ ನೂತನ ಸಾಂವಿಧಾನಿಕ ಪೀಠವನ್ನು ರಚಿಸಿದ್ದಾರೆ.
‘ಈ ಪೀಠವು ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ, ನ್ಯಾಯಮೂರ್ತಿಗಳಾದ ದೀಪಕ್ ಕುಮಾರ್ ಕರ್ಕಿ, ಆನಂದ್ ಮೋಹನ್, ಮೀರಾ ಧುಂಗಾನಾ, ಈಶ್ವರ್ ಪ್ರಸಾದ್ ಖತಿವಾಡಾ ಅವರನ್ನೊಳಗೊಂಡಿದೆ’ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ಮೇ 22ರಂದು ರಾಷ್ಟ್ರಪತಿ ವಿದ್ಯಾದೇವಿ ಅವರು 275 ಸದಸ್ಯರನ್ನೊಳಗೊಂಡ ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿದರು. ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಲಹೆಯ ಮೇರೆಗೆ ನವೆಂಬರ್ನಲ್ಲಿ ಸಾರ್ವತ್ರಿಕ ಚುನಾವಣೆಯನ್ನೂ ಅವರು ಘೋಷಿಸಿದರು.
ಸಂಸತ್ ವಿಸರ್ಜನೆಯನ್ನು ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲು ಈ ಹಿಂದೆಯೂ ಸಂವಿಧಾನಿಕ ಪೀಠವನ್ನು ರೂಪಿಸಲಾಗಿತ್ತು. ಆದರೆ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ಉಂಟಾದ ವಿವಾದದಿಂದಾಗಿ ವಿಚಾರಣೆಯಲ್ಲಿ ಅಡಚಣೆ ಉಂಟಾಗಿತ್ತು. ಇದೀಗ ಹೊಸ ಸಂವಿಧಾನಿಕ ಪೀಠವನ್ನು ರಚಿಸಲಾಗಿದೆ.