ಇಸ್ಲಾಮಾಬಾದ್ : ಭಾರತದ ಜೊತೆಗಿನ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರ ನಡೆಸಿದ ಪ್ರಯತ್ನಕ್ಕಾಗಿ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂದು ಪಾಕಿಸ್ತಾನ ಸಂಸತ್ತಿಗೆ ಶನಿವಾರ ನಿರ್ಣಯವೊಂದನ್ನು ಕಳುಹಿಸಲಾಗಿದೆ.
ಮಾಹಿತಿ ಖಾತೆ ಸಚಿವ ಫವಾದ್ ಚೌಧರಿ ಅವರು ಪಾಕಿಸ್ತಾನ ಸಂಸತ್ತಿನ ಕೆಳಮನೆಯಾದ ಸೆಕ್ರೆಟರಿಯಟ್ ಅವರಿಗೆ ನಿರ್ಣಯವೊಂದನ್ನು ಸಲ್ಲಿಸಿದ್ದಾರೆ.
‘ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆಗೊಳಿಸುವ ಮೂಲಕ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನ ಸ್ಥಿತಿ ತಿಳಿಯಾಗಿದೆ. ಈಗಿನ ಸ್ಥಿತಿಗೆ ಕಾರಣವಾದ ಖಾನ್ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಪುರಸ್ಕೃತರಾಗಲು ಅರ್ಹರು’ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.
ಸೋಮವಾರದಿಂದ ಸಂಸತ್ತಿನ ಅಧಿವೇಶನ ಮತ್ತೆ ಆರಂಭಗೊಳ್ಳಲಿದ್ದು, ಇಲ್ಲಿ ಈ ವಿಷಯ ಚರ್ಚೆಗೆ ಬರುವ ನಿರೀಕ್ಷೆಯಿದೆ. ಸರ್ಕಾರ ಬಹುಮತ ಹೊಂದಿರುವ ಈ ನಿರ್ಣಯಕ್ಕೆ ಪೂರ್ಣ ಬೆಂಬಲ ದೊರಕುವ ಸಾಧ್ಯತೆಯಿದ್ದು, ವಿರೋಧ ಪಕ್ಷಗಳ ನಡೆಯೂ ಸಾಕಷ್ಟು ಕುತೂಹಲ ಕೆರಳಿಸಿದೆ.