ವಾಷಿಂಗ್ಟನ್ : ಅಮೆರಿಕದಲ್ಲಿ ಹಿಂದೂಗಳ ವಿರುದ್ಧ ದಾಳಿಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ‘ಹಿಂದೂಗಳ ವಿರೋಧ ಸಂಘಟಿತ ದಾಳಿಯ ಆರಂಭ’ದಂತಿದೆ ಎಂದು ಭಾರತೀಯ– ಅಮೆರಿಕನ್ ಕಾಂಗ್ರೆಸ್ಸಿಗ ಶ್ರೀ ಥಾನೇದಾರ್ ಹೇಳಿದ್ದಾರೆ.
ದ್ವೇಷದ ಅಪರಾಧಗಳ ವಿರುದ್ಧ ಭಾರತೀಯ ಸಮುದಾಯದ ಸದಸ್ಯರು ಒಂದಾಗಿರುವಂತೆ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಅಮೆರಿಕದಲ್ಲಿ ಹಿಂದೂ ಧರ್ಮ ಮತ್ತು ಧರ್ಮೀಯರ ಮೇಲೆ ದಾಳಿಗಳು ಹೆಚ್ಚಾಗಿರುವುದನ್ನು ನಾನು ಗಮನಿಸಿದ್ದೇನೆ. ಹಿಂದೂಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಆನ್ಲೈನ್ ಮೂಲಕ ಬಿತ್ತರಿಸಲಾಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇತ್ತೀಚೆಗೆ ಹಿಂದೂ ದೇವಾಲಯಗಳು ಮತ್ತು ಪೂಜಾ ಸ್ಥಳಗಳ ಮೇಲಿನ ದಾಳಿಯನ್ನು ಖಂಡಿಸಿ ಭಾರತೀಯ–ಅಮೆರಿಕನ್ ಕಾಂಗ್ರೆಸ್ ಸದಸ್ಯರಾದ ಶ್ರೀ ಥಾನೇದಾರ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಅಮಿ ಬೇರಾ, ಪ್ರಮೀಳಾ ಜೈಪಾಲ್ ಅವರು ತನಿಖೆಗೆ ಆಗ್ರಹಿಸಿ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದರು.
‘ಈ ದಾಳಿಗಳಿಗೆ ಸಂಬಂಧಿಸಿದಂತೆ ಯಾರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ ಮತ್ತು ಯಾರನ್ನೂ ಬಂಧಿಸಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.