ಇಸ್ಲಾಮಾಬಾದ್ (ಪಿಟಿಐ): ‘ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ಹಿಂದೆ ಭಾರತದ ಗುಪ್ತಚರ ಸಂಸ್ಥೆ ‘ರಾ’ ದ ಕೈವಾಡ ಇದೆ’ ಎಂದು ಆರೋಪಿಸುತ್ತಿರುವ ಪಾಕಿಸ್ತಾನ ಈ ವಿಷಯವನ್ನು ಅಮೆರಿಕದ ಗಮನಕ್ಕೆ ತರಲು ನಿರ್ಧರಿಸಿದೆ.
‘ಪಾಕ್ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹ್ಮದ್ ಚೌಧರಿ ಅಮೆರಿಕ ಭೇಟಿಯಲ್ಲಿದ್ದು, ಈ ವೇಳೆ ಅಲ್ಲಿನ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ’ ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
‘ರಾ’ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪವನ್ನು ಪಾಕ್ ಉನ್ನತ ಅಧಿಕಾರಿಗಳು ಮಾಡುತ್ತಲೇ ಬಂದಿದ್ದಾರೆ. ಆದರೆ ಭಾರತ ಇಂತಹ ಆರೋಪಗಳನ್ನು ನಿರಾಕರಿಸಿದೆ.
ಚೌಧರಿ ನೇತೃತ್ವದ ಪಾಕ್ ಅಧಿಕಾರಿಗಳ ನಿಯೋಗ ವಾಷಿಂಗ್ಟನ್ನಲ್ಲಿ ಮಂಗಳವಾರ ಅಮೆರಿಕದ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವಿನ ಸಂಬಂಧ ಅಲ್ಲದೆ ಶಸ್ತ್ರಾಸ್ತ್ರ ನಿಯಂತ್ರಣ, ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಚೌಧರಿ ಇದೇ ವೇಳೆ ಅಮೆರಿಕದ ಉನ್ನತ ಅಧಿಕಾರಿಗಳನ್ನೂ ಭೇಟಿ ಮಾಡಲಿದ್ದಾರೆ. ‘ಭಾರತವು ಪಾಕ್ನಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬ ವಿಷಯವನ್ನು ಒಬಾಮ ಆಡಳಿತದ ಗಮನಕ್ಕೆ ತರಬೇಕು ಎಂಬ ಸೂಚನೆಯನ್ನು ಪಾಕ್ ಸರ್ಕಾರ ಚೌಧರಿಗೆ ನೀಡಿದೆ’ ಎಂದು ಪತ್ರಿಕೆ ತಿಳಿಸಿದೆ.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಕೂಡಾ ಪಾಕ್ ಅಮೆರಿಕದ ಗಮನಕ್ಕೆ ತರುವ ಸಾಧ್ಯತೆಯಿದೆ ಎನ್ನಲಾಗಿದೆ. ‘ಭಯೋತ್ಪಾದಕರನ್ನು ಭಯೋತ್ಪಾದಕರಿಂದಲೇ ಎದುರಿಸಬೇಕು’ ಎಂದು ಪರಿಕ್ಕರ್ ಹೇಳಿದ್ದರು. ಇದಕ್ಕೆ ಪಾಕಿಸ್ತಾನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.
‘ಭಾರತವು ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವುದು ಪರಿಕ್ಕರ್ ಹೇಳಿಕೆಯಿಂದ ಸಾಬೀತಾಗಿದೆ’ ಎಂದು ಪಾಕ್ ಹೇಳಿತ್ತು. ‘ಭಯೋತ್ಪಾದನಾ ದಾಳಿಗಳಲ್ಲಿ ಭಾರತದ ಕೈವಾಡ ಇದೆ ಎಂಬ ವಿಷಯವನ್ನು ಲಭ್ಯವಿರುವ ಎಲ್ಲ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಪ್ರಸ್ತಾಪ ಮಾಡಲಿದೆ’ ಎಂದು ಪಾಕ್ ಪ್ರಧಾನಿಯ ಸಲಹೆಗಾರ ಸರ್ತಾಜ್ ಅಜೀಜ್ ಇತ್ತೀಚೆಗೆ ಹೇಳಿದ್ದರು.