ಬ್ಯಾಂಕಾಕ್ (ಪಿಟಿಐ): ಪೊಲೀಸರು ಬಿಗಿಭದ್ರತೆ ಸಡಿಲಿಸಿದ್ದರಿಂದ ಥಾಯ್ಲೆಂಡ್ ಪ್ರಧಾನಿ ಯಿಂಗ್ಲುಕ್ ಶಿನವಾತ್ರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಮಂಗಳವಾರ ಸರ್ಕಾರದ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವಲ್ಲಿ ಯಶಸ್ವಿಯಾದರು.
ಇದೇ ವೇಳೆ, ಮೂರು ದಿನಗಳಲ್ಲಿ ನಾಲ್ಕು ಜನರನ್ನು ಬಲಿ ತೆಗೆದುಕೊಂಡಿರುವ ಪ್ರತಿಭಟನೆಯ ಉದ್ವಿಗ್ವತೆಯೂ ಕಡಿಮೆಯಾಗಿದೆ. ಸರ್ಕಾರದ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿರುವವರ ವಿರುದ್ಧ ಬಲ ಪ್ರಯೋಗಿಸುವುದಿಲ್ಲವೆಂದು ಸ್ಪಷ್ಟಪಡಿಸಿದ ಪೊಲೀಸರು ಬ್ಯಾರಿಕೇಡ್ಗಳನ್ನು ತೆಗೆಯುತ್ತಿದ್ದಂತೆಯೇ ನೂರಾರು ಪ್ರತಿಭಟನಾಕಾರರು ಕಚೇರಿ ಆವರಣದ ಹುಲ್ಲುಹಾಸಿನ ಮೇಲೆ ಜಮಾಯಿಸಿದರು.
ಗುರುವಾರ ರಾಷ್ಟ್ರದ ದೊರೆ ಭೂಮಿಬಲ್ ಅದುಲ್ಯದೇಜ್ ಅವರ 86ನೇ ಹುಟ್ಟುಹಬ್ಬದ ದಿನವಾಗಿದ್ದು, ಪೊಲೀಸರು ಭದ್ರತೆ ಸಡಿಲಿಸಲು ಇದೇ ಕಾರಣವೆನ್ನಲಾಗಿದೆ. ಥಾಯ್ಲೆಂಡ್ನಲ್ಲಿ ದೊರೆ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರನ್ನು ರಾಷ್ಟ್ರದ ಏಕತೆಯ ಪ್ರತೀಕವೆಂದು ನೋಡಲಾಗುತ್ತದೆ. ಅವರ ಜನ್ಮ ಜಯಂತಿವನ್ನು ಸಾಂಪ್ರದಾಯಿಕವಾಗಿ ಪ್ರಾರ್ಥನೆ ಮತ್ತು ಸಡಗರದ ದಿನವಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರತಿಭಟನಾಕಾರರು ಈ ವೇಳೆ ಚಳವಳಿ ಮುಂದುವರಿಸುವ ಸಾಧ್ಯತೆ ಇಲ್ಲವೆನ್ನಲಾಗಿದೆ.
ಪ್ರತಿಭಟನಾಕಾರರ ನೇತೃತ್ವ ವಹಿಸಿರುವ ಸುಥೆಪ್ ತಾಗ್ಸುಬಾನ್ ಅವರು, ‘ಸರ್ಕಾರವನ್ನು ಕೆಳಕ್ಕಿಳಿಸುವ ಹೋರಾಟ ಇನ್ನೂ ಕೊನೆಗೊಂಡಿಲ್ಲ’ ಎಂದಿದ್ದಾರೆ.
ಈ ಮಧ್ಯೆ ಸೇನಾ ಮುಖ್ಯಸ್ಥ ಜನರಲ್ ಪ್ರಯೂಥ್ ಚನೋಚ ಅವರು, ಸರ್ಕಾರದ ಕೇಂದ್ರ ಕಚೇರಿಯ ಆವರಣದಿಂದ ಹೊರ ಹೋಗುವಂತೆ ಪ್ರತಿಭಟನಾಕಾರರಿಗೆ ಸೂಚಿಸಿದ್ದು, ಸರ್ಕಾರದ ಕಟ್ಟಡಗಳು ರಾಷ್ಟ್ರದ ಆಸ್ತಿಯಾಗಿದ್ದು, ಪ್ರತಿಭಟನಾಕಾರು ಅವುಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಬಾರದು ಎಂದು ಎಚ್ಚರಿಸಿದ್ದಾರೆ.