ಅವರಿರುವ ಸ್ಥಳವೇ ಪವಿತ್ರಸ್ಥಳ. ಅದು ಕೈಲಾಸಕ್ಕಿಂತ ಶ್ರೇಷ್ಠ. ಅವರಿರುವಲ್ಲಿಯೇ ಇಹ, ಪರ, ಮೇರು, ಮಂದರ, ಗಗನ, ಸ್ವರ್ಗ ಎಲ್ಲವೂ ನೆಲೆಸಿವೆ. ಅಷ್ಟೇ ಏಕೆ ಅವರ ಕಾಯವೇ ಕೈಲಾಸವೆನ್ನುತ್ತಾರೆ ಬಸವಣ್ಣನವರು. ಶರಣರು-ಸಂತರು ಮರಣವನ್ನು ಗೆದ್ದವರು. ಆದ್ದರಿಂದ ಮೋಳಿಗೆಯ ಮಾರಯ್ಯನವರು- ‘ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಯನೊಲ್ಲೆ, ಕೈಲಾಸವೆಂಬ ಭವಸಾಗರವನೊಲ್ಲೆ. ನೀ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ ನಿನ್ನಲ್ಲಿಗೆ ಕೂಟಸ್ಥವ ಮಾಡು ನಿಃಕಳಂಕ ಮಲ್ಲಿಕಾರ್ಜುನಾ ಎನ್ನುತ್ತಾರೆ. ಶಿವಶರಣರ ದೃಷ್ಟಿಯಲ್ಲಿ ದೇವಲೋಕ, ಮರ್ತ್ಯಲೋಕ ಎಂಬವು ಬೇರೆ ಬೇರೆ ಅಲ್ಲ. ಆಯ್ದಕ್ಕಿ ಮಾರಯ್ಯ ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು ಎಂದು ಹೇಳುವ ಮೂಲಕ ಸತ್ಯಶುದ್ಧಕಾಯಕದಿಂದ ನಾವಿರುವಲ್ಲಿಯೇ ಕೈಲಾಸವನ್ನು ಸೃಷ್ಟಿಸಿಕೊಳ್ಳಬೇಕೆನ್ನುತ್ತಾರೆ.