ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕಸ್ಥರ ನಾಯಿಪಾಡು!

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಮತದಾರರ ಗುರುತಿನ ಚೀಟಿಗಳ ಸಗಟು ಖರೀದಿಯ ಆರೋಪದ ಹೊರತಾಗಿಯೂ ಭರ್ಜರಿ ಗೆಲುವು ಸಾಧಿಸಿದ ‘ಮನಿರತ್ನ’ನ ವಿಜಯೋತ್ಸವದ ಮೆರವಣಿಗೆಯನ್ನ ಟಿ.ವಿ.ಯಲ್ಲಿ ನೋಡುತ್ತ ಕುಂತವನಿಗೆ, ಪ್ರಭ್ಯಾ ಓಡಿ ಬರೋದು ಕಿಡಿಕ್ಯಾಗಿಂದ್‌ ಕಾಣುಸ್ತು. ಅಂವಾ ಬಾಗ್ಲ ಹತ್ರ ಬಂದಾಗ ಅವ್ನ ಮಾರಿ ಮ್ಯಾಗಿನ ಗಾಬರಿ ನೋಡಿ, ‘ಯಾಕೊ ಏನಾಯ್ತು, ಬೀದಿ ನಾಯಿ ಏನರ್‌ ಬೆನ್ನ ಹತ್ತೇದ ಏನ್‌’ ಎಂದು ಕೇಳಿದೆ. ಅದಕ್ಕ ಏದುಸಿರು ಬಿಡುತ್ತಲೇ ಉತ್ರಾ ಕೊಡಾಕ್‌ ಹೋದ ಪ್ರಭ್ಯಾ, ‘ಮೊದ್ಲ ಆ ಗೇಟ್‌ ಹಾಕ್‌. ಆ ಮುಧೋಳ್‌ ನಾಯಿ ನನ್ನ ಬೆನ್‌ ಬಿದ್ದು ಅಟ್ಟಿಸಿಕೊಂಡ್‌ ಬರಾಕತ್ತದ’ ಅಂದ. ಪ್ರಭ್ಯಾನ ಓಡಿಸಿಕೊಂಡು ಬಂದಿದ್ದ ನಾಯಿ ಗೇಟಿನಾಚೆಗೆ ನಿಂತು ಬೊಗಳುತ್ತಲೇ ಇತ್ತು.

‘ಅಲ್ಲೋ, ನಮ್ಮ ಮುದ್ದೇಬಿಹಾಳ್‌ದಾಗ್‌ ಮುಧೋಳ್‌ ನಾಯಿಗೇನ್‌ ಕೆಲ್ಸಲೇ. ನಮ್ಮ ಊರಾಗ್‌ ನಾಯಿ, ಹಂದಿಗಳಿಗೇನ್‌ ಬರಾ ಬಿದ್ದದ ಏನ್‌. ಬೊಗಳು ನಾಯಿ ಕಚ್ಚುದಿಲ್ಲ ಏಳ್‌, ಹೆದರ್‌ಬ್ಯಾಡ್‌’ ಅಂತ ಧೈರ್ಯ ತುಂಬಿದೆ.

‘ಹೆಂಡಿ ಸಾರ್ಸು ಕೆಲ್ಸ ಬ್ಯಾಡಾ. ಮೊದ್ಲ ಆ ಮುಧೋಳ್ನಾ‌ಯಿನಾ ಕಟ್ಹಾಕೊ ಮಾರಾಯಾ’ ಅಂತ ಬೇಡ್ಕೊಂಡ.

‘ಕಟ್ಟಿ ಹಾಕಾಕ್‌  ಅದೇನ್‌ ನರೇಂದ್ರ ಮೋದಿ ಅವರ ಅಶ್ವಮೇಧ ಯಾಗದ ಕುದುರಿ ಅಂದ್ಕೊಂಡಿ ಏನ್‌. ಅದು ಬ್ಯಾಟಿ ಆಡೋ ನಾಯಿ. ಅದ್ನ ಕಟ್ಟಿ ಹಾಕಾಕ್‌ ಬರುದಿಲ್ಲ. ಆರಿಸಿ ಬಂದವರನ್ನ ರೆಸಾರ್ಟ್‌ನ್ಯಾಗ್ ಕಟ್ಟಿ ಹಾಕ್ದಂಗ್ ಅಲ್ಲಲೇ ಅದು ಸ್ವಲ್ಪು ತಿಳ್ಕೊ. ಆ ನಾಯಿಗೆ ಬ್ಯಾಟಿ ಆಡೊ ನಿಯತ್‌ ಐತಿ’ ಅಂತ ಅಂವ್ಗ ಬುದ್ಧಿ ಹೇಳಾಕ್‌ ನೋಡ್ದೆ.

‘ಮುಧೋಳ್‌ ನಾಯಿಗೆ ಇರೋ ನಿಯತ್ತು ಹಸ್ತ ಗುರುತಿನ ಪಕ್ಷದವ್ರಿಗೆ ಇಲ್ಲ ಅಂತ ಮೋದಿ ಸಾಹೇಬ್ರು ದೊಡ್ಡದಾಗಿ ಹೇಳಿದ್ರು. ಅಧಿಕಾರದ ಹಪಹಪಿಗೆ ಬಿದ್ದವ್ರು ‘ಖಳನಾಯಕ’ನ ನೆರವನ್ನೂ ಕೇಳುವಾಗ ಎಲ್ಲಿ ಹೋಗಿತ್ತಪ್ಪ ನಿಯತ್ತು. ಇನ್ನೂ ಕೆಲವರಿಗೆ ರಾಜ್ಯದ ಪಾಲನೆ ಹೊಣೆ ಒಪ್ಪಿಸಿದ್ರೂ, ಪಕ್ಷಾತೀತವಾಗಿ ಇರೋದು ಬಿಟ್ಟು ಪಕ್ಷ ನಿಷ್ಠೆನೇ ಅವ್ರಿಗೆ ಮುಖ್ಯವಾಗಿತ್ತು. ಕೊನಿಗೆ ಕೋರ್ಟ್‌ನಿಂದ ಮಂಗಳಾರತಿ ಮಾಡ್ಸಿಕೊಂಡಿರೋದು ಹ್ವಾದ ವಾರಾ ಇಡೀ ದೇಶಕ್ಕs ಗೊತ್ತಾಗೇತಿ. ರೆಸಾರ್ಟ್‌ನ್ಯಾಗ್‌ ಕೂಡಿ ಹಾಕಿ, ಕುರಿ ದೊಡ್ಡಿ ಒಳಗ್‌ ತುಂಬಿದ್ಹಂಗ್‌ ಬಸ್‌ನ್ಯಾಗ್‌ ತಿರುಗಾಡಿಸಿದ್ದು ನೋಡಿದಾಗ ನಾಯಿ ಪಾಡು ಅಂದ್ರ ಏನ್‌ ಅನ್ನೋದು ಖಾತ್ರಿ ಆತು. ನನ್ನ ವೈರಿಗೂ ಅಂಥಾ ಪರಿಸ್ಥಿತಿ ಬರಬಾರ್ದು ಅಂತ ಅನುಸ್ತು. ಅವರನ್ನ ಹಗಲು ರಾತ್ರಿ ಕಾದಿದ್ದಕ್ಕs ಹಸಿದ ತೋಳ್‌ಗಳು ಹತ್ರಾ ಸುಳೀಲಿಲ್ಲ. ಹೀಂಗಾಗಿ ತೆನೆಹೊತ್ತ ಮಹಿಳೆಗೆ ಹಸ್ತ ಸಾಥ್‌ ನೀಡೈತಿ. ಸಮ್ಮಿಶ್ರ ಸರ್ಕಾರ ಬಂದೈತಿ, ಕುಮಾರ ಪರ್ವ ಚಾಲು ಆಗೇತಿ, ಕಮಲ ಕಂಗಾಲಾಗೇತಿ’ ಅಂತ ರಾಗಬದ್ಧವಾಗಿ ಹೇಳ್ದೆ.

‘ಡಿಕೆಶಿ ಅಂಥವ್ರು ‘ಖಳನಾಯಕ’ ಎನ್ನುವ ಟೀಕೆಗಳನ್ನೂ ಎದುರಿಸಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮುಧೋಳ್‌ ನಾಯಿ ಹಂಗ್‌ ನಿಷ್ಠೆಯಿಂದ ಕಾದಿದ್ದಕ್ಕ ತ್ವಾಳಗೋಳು ವಾಪಸ್‌ ಹೋದ್ವು. ರಾಜ್ಯಾನ ಐದು ವರ್ಷ ಆಳುವ ತೀನ್‌ ದಿನ್‌ ಕಾ ಸುಲ್ತಾನನ ಕನ್ಸು ಮೂರೇ ದಿನಕ್ಕ ಮೂರಾಬಟ್ಟೆ ಆಯ್ತು. ಎಂಟು ಅನ್ನೋದು ಕನ್ನಡಿ ಒಳಗಿನ ಗಂಟ್‌ ಆಯ್ತು, ಖರೆ ಹೌದಲ್ಲ’ ಅಂತ ಇನ್ನಷ್ಟು ಕಿಚಾಯಿಸಿದೆ.

‘ಆಯ್ತು ಬಿಡಪಾ. ನಿನ್ನ ಹತ್ರ ನಾಯಿ ವಿಷ್ಯಾ ಹೇಳಿದ್ದ ತಪ್ಪಾಯ್ತು. ಯಡವಟ್‌ ಆಸಾಮಿ, ಮುಖ್ಯಮಂತ್ರಿ ಪಟ್ಟ ಎಲ್ಲಿ ಕೈ ಜಾರಿ ಹೋಗ್ತದ ಅಂತ ಭಾಳ್‌ ಅವ್ಸರಾ ಮಾಡ್ತು. ಬಹುಮತ ಸಾಬೀತಿಗೆ ಎಂಟ್‌ ದಿನಾ ಕೇಳಿದ್ದಕ್ಕ, ಹದಿನೈದು ದಿನಾ ಕೊಟ್ಟಾಂವ ಕೂಡ... ಅನ್ನೋದೂ ಸಾಬೀತಾತು’ ಬಿಡು ಅಂದ.

‘ಎಂಥಾ ಮುತ್ತಿನಂತಹ ಮಾತ್‌ ಆಡ್ದಿ. ಅದ್ಕ ವ್ಹಾವ್ಹಾ ಅನಬೇಕ ಏನ್‌ ‘ವವಾ’ ಅನಬೇಕೊ ಗೊತ್ತಾಗ್ತಾ ಇಲ್ಲ‌. ವಫಾದಾರಿ (ನಂಬಿಕಸ್ಥ) ನಾಯಿಗೆ ಇನ್ಮುಂದೆ ‘ವವಾ’  ಹೆಸರs ಇಡಬೇಕ್‌ ಅಂತ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ನಿರೂಪ್ ಕೊಟ್ಟಾನ್‌ ಕೇಳಿ ಇಲ್ಲ’ ಎಂದೆ.

‘ದೇಶ ನಿಷ್ಠೆ, ರಕ್ಷಣೆ ವಿಷಯದಾಗ್‌ ಕಾಂಗ್ರೆಸ್‌ಗೆ, ಮುಧೋಳ್‌ ನಾಯಿಗೆ ಇರುವ ನಿಯತ್‌ ಇಲ್ಲ ಅಂತ ಮೋದಿ ಹೇಳ್ಯಾರ್‌. ಅದ್ನ ನೀ ನಿನಗ್‌ ತಿಳಿದ್ಹಂಗ್‌ ತಿರುಚಿ ಹೇಳಿ ನಾಯಿಗಳಿಗೆ ಅವಮಾನ ಮಾಡಬ್ಯಾಡಪಾ’ ಎಂದ.

‘ನಾನು ನಾಯಿಗಳಿಗೆ ಅಪಮಾನ ಮಾಡಿದ್ರ ನಾಯಿ ಬಂದ್‌ ನನ್ಗ ಕಚ್ಚಲಿ. ನಾಯಿ ಹಂಗ್‌ ಬೊಗಳಿ ಇತರರ ನಿದ್ದಿ ಹಾಳ್‌ ಮಾಡಾಕತ್ತಾರಲ್ಲ. ಅವ್ರ ಬಗ್ಗೆ ನಂಗ್‌ ಸಿಟ್‌ ಅದಲೆ. ಸಮ್ಮಿಶ್ರ ಸರ್ಕಾರದವ್ರ ನಿದ್ದಿ ಹಾಳ್‌ ಮಾಡ್ತೀನಿ ಅಂತ ಶ್ರೀರಾಮುಲು ಗುಡುಗ್ಯಾನ್‌ ನೋಡಿ ಇಲ್ಲ. ಕಾಂಗ್ರೆಸ್‌ನೋರು ಭಾಳ ಹುಷಾರ್‌ದಾಗ್‌ ಇರ್ಬೆಕಾಗೇದ್‌. ಬಳ್ಳಾರಿ ರಿಪಬ್ಲಿಕ್‌ ಮತ್‌ ತನ್ನ ಕೈಚಳಕ ತೋರ್ಸಾಕ್‌ ಚಾಲು ಮಾಡಿದ್ಹಂಗ್ ಕಾಣಸ್ತದ. ನನ್ನ ನಿದ್ದಿಗೆಡಸಾಕ್‌ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ನಿದ್ದೆಗೆಡುವಂತೆ ನಾನೂ ಮಾಡ್ತೇನೆ ಅಂತ ಹಾಲಿ ‘ಮರ್ಜಿ ಮುಖ್ಯಮಂತ್ರಿ’, ಭಾವಿ (!?) ಉ‍ಪ ಮುಖ್ಯಮಂತ್ರಿಗೆ ತಿರುಗೇಟ್‌ ಕೊಟ್ಟಿದ್ದು ನಿಂಗೂ ನೆನಪ್ ಇರ್ಲಿ’ ಎಂದೆ. 

‘ನೀ ಏನರ್ ಹೇಳ್‌. ಯಡಿಯೂರಪ್ನೋರು ಮುಹೂರ್ತ ಫಿಕ್ಸ್‌ ಮಾಡ್ದಂಗ್‌s ಪ್ರಮಾಣ ವಚ್ನಾ ಸ್ವೀಕರಿಸಿದ್ದು ನೋಡಿ ಭಲೆ ಅನಿಸ್ತು’ ಎಂದ.

‘ಭಪ್ಪರೆ ಮಗ್ನ. ಹೌದ್‌ ಅನ್ಬೇಕ್‌ ನೋಡ್‌ ನಿಂಗ್‌. ಅಲ್ಲಲೇ ತೀನ್‌ ದಿನ್‌ ಕಾ ಸುಲ್ತಾನ್‌ ಆಗುವಂತಹ ಮುಹೂರ್ತದ ವ್ಯಾಳೆ ಹೇಳಿ ಕೊಟ್ಟಾಂವಾ ಖರೇನ್‌ ದೀಡ್‌ ಪಂಡಿತನs ಇರಬೇಕಲೆ’ ಎಂದೆ.

ನನ್ನ ಮಾತಿಗೆ ಸಿಟ್‌ ಮಾಡ್ಕೊಂಡ್ ಪ್ರಭ್ಯಾ ಧಡಕ್ಕನೆ ಎದ್ದ ಹೊಂಟಾ. ಅವ್ನ ಕಾಲಾಗ್‌ ಚಪ್ಲಿ ಕಾಣ್ಲಾರ್ದಕ್ಕ, ‘ಎಲ್ಲಿ ನಿನ್ನ ಚಪ್ಲಿ’ ಎಂದೆ. ಯಡಿಯೂರಪ್ನೋರು ಮತ್‌ ಮುಖ್ಯಮಂತ್ರಿ ಆಗೂ ತನಕ ಬರಿಗಾಲಲ್ಲಿ ತಿರುಗಬೇಕು ಅಂತ ಯಡಿಯೂರೇಶನ ಹರಿಕಿ ಹೊತ್ತೀನಿ’ ಅಂದ.

‘ಏನ್‌ ಮಳ್ಳ ಅದೀಲೇ, ...ಬರಿಗಾಲಲ್ಲಿ ತಿರುಗುವವನ ಕರೆದು ಕೆರವಿಲೆ ಹೊಡೆ ಎಂದ ಸರ್ವಜ್ಞನ ತ್ರಿಪದಿ ನೆನಪದ ಇಲ್ಲ’ ಎಂದೆ.

‘ಬರಿಗಾಲಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು ಅಂತ ಹೇಳಿದ ಜ್ಯೋತಿಷಿಗೆ, ಅಂವಾ ಹೇಳ್ದಂಗ್‌ ನಡ್ಕೊಂಡಿರೊರಿಗೆ ಯಾವ ಸನ್ಮಾನ ಮಾಡ್ಬೇಕಪಾ’ ಅಂತ ಪ್ರಭ್ಯಾ ಮಗುಮ್ಮಾಗಿ ಕೇಳ್ದ.

‘ಅದ್ಕ ಹೊಸಾ ತ್ರಿಪದಿ ಹೊಸಿಬೇಕ್‌. ಅದು ಇರ್ಲಿ ಬಿಡು, ನೀ ಏನs ಹೇಳ್‌, ಈಗ ಚಪ್ಪಲೀನ್‌ ಭಾಳ್‌ ಸುದ್ದಿ ಮಾಡಾಕತ್ತಾವ್‌ ನೋಡ್‌. ಹುಚ್‌ ವೆಂಕಟೇಶ್‌ ಚಪ್ಪಲಿ ಚಿಹ್ನೆ ತಗೊಂಡಿದ್ರ, ಕುಮಾರಣ್ಣ ಬರಿಗಾಲಲ್ಲಿ ಪ್ರಮಾಣ ವಚನ ಸ್ವೀಕಾರ್ ಮಾಡ್ಯಾನ್‌. ಉತ್ತರ ಪ್ರದೇಶದ ‘ಮುಮ’ ಚಪ್ಲಿ ಮೆಟ್ಕೊಂಡು ಇನ್ನೊಂದ್‌ ವಿವಾದ ಮೈಮ್ಯಾಲ್‌ ಹಾಕ್ಕೊಂಡಾನ್‌. ಚಪ್ಪಲಿ ಹಾಕ್ಕೊಂಡ್‌ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿರೋದಕ್ಕ ಯೋ(ಭೋ)ಗಿ ಧರಿಸಿದ್ದ ಚಪ್ಪಲಿಲೇ ಪೂಜೆ ಮಾಡ್ಬೇಕ್‌ ಅಂತ ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಹೇಳ್ಯಾನ್’ ಎಂದೆ.

‘ಇದನ್ನೆಲ್ಲ ಕೇಳಿ– ನೋಡಿ, ಚ‍ಪ್ಲಿ ಉಸಾಬರೀನ ಬ್ಯಾಡ್‌ ಅಂತ ಮನಸ್‌ ಮಾಡೀನಿ ನೋಡಪ’ ಅಂತ ಹೇಳಿ ಪ್ರಭ್ಯಾ ತನ್ನ ಮಾತಿನ ದಿಕ್‌ ಬದಲಿಸಿ, ‘ಗರಡಿ ಮನಿಗ್‌ ಬರ್ತಿ ಏನ್‌’ ಅಂದ. ‘ಏನ್‌ ಅದಪಾ ಅಂಥಾ ಗರ್ದಿ ಗಮ್ಮತ್‌ ಅಲ್ಲಿ’ ಎಂದೆ.

‘ಗರ್ದಿ ಗಮ್ಮತ್‌ ನೋಡಾಕ್‌ ಗರಡಿ ಮನಿಗ್‌ ಹೋಗ್ತಾರೇನೊ ಮಳ್ಳ. ವ್ಯಾಯಾಮ ಮಾಡಾಕ, ಕುಸ್ತಿ ಹಿಡ್ಯಾಕ್‌ ಹೋಗಾಕತ್ತೀನಿ. ಮೋದಿ ಸಾಹೇಬ್ರು ಕೂಡ ವಿರಾಟ್‌ ಕೊಹ್ಲಿಯ ಫಿಟ್ನೆಸ್‌ ಸವಾಲ್‌ ಒಪ್ಗೊಂಡಾರ್‌. ದೇಹ ಗಟ್ಟಿ ಇದ್ರ, ದೇಶ ಗಟ್ಟಿ ಅಂತ ಕೇಳಿ ಇಲ್ಲ’ ಅಂದ.

ಅವ್ನ ಮಾತ್‌ ಕೇಳಿ ನಗು ತಡೆಯಲಾರದೆ ಪಕಪಕನೆ ನಕ್ಕೆ. ‘ಹುಚ್ಚುಚ್ಚಾರ ಯಾಕ್‌ ನಗಾಕತ್ತಿ, ನಾಯಿ ಕಡ್ದದೇನ್‌’ ಅಂದ.

‘ಅಲ್ಲಲೇ, ಪೆಟ್ರೋಲ್‌ ಬೆಲೆ ಇಳಿಸ್‌ಬೇಕೆಂಬ ‘ರಾಗಾ’ ಸವಾಲ್‌ ಒಪ್ಪಿಕೊಳ್ಳದ 56 ಇಂಚು ಎದೆಯ ‘ನಮೋ’ ಪೈಲ್ವಾನ್‌, ಕೊಹ್ಲಿ ಸವಾಲ್‌ ಒಪ್ಕೊಂಡಿರೋದು ನೋಡಿ ನಗಲಾರ್ದ, ಅಳಬೇಕೇನ್‌. ಪೆಟ್ರೋಲ್‌ ದರಾನ ಬರೀ ಒಂದು ಪೈಸೆ ಇಳಿಸಿರೋದು ನೋಡಿ ಇಡೀ ದೇಶಾನ ಬಿದ್‌ ಬಿದ್‌ ನಗಾಕತ್ತೇತಿ. ನಗಚಾಟ್ಕಿಗೂ ಒಂದು ಮಿತಿ ಇರ್ತದಲೆ. ಇಂಥಾ ಜೋಕರ್‌ನ ಎಲ್ಲೂ ನೋಡಿಲ್ಲ. ಸವಾಲ್‌ ಹಾಕಿರೋ ಕೊಹ್ಲಿ ಕತ್ ಉಳ್ಕಿಸಿಕೊಂಡಿರೋದು ಗೊತ್ತದ ಇಲ್ಲ. ನೀ ಏನ್‌ ಉಳ್ಕಿಸಿಕೊಳ್ತಿ ನೋಡ್‌’ ಅನ್ನುತ್ತಿದ್ದಂತೆ ಟಿ.ವಿ. ಒಳಗಿಂದ ಸಂಪತ್ತಿಗೆ ಸವಾಲ್‌ ಚಿತ್ರದ ...ನಗುವುದೋ, ಅಳುವದೋ ನೀವೇ ಹೇಳಿ.. ಈ ಜನರ ನಡುವೆ ನಾನು ಹೇಗೆ ಬಾಳಲಿ... ಹಾಡು ಕೇಳಿಬರಾಕತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT