ಕನ್ನಡಿಗರಿಗೆ ಮಾತ್ರ ಸಿಇಟಿ ಬೆಂಗಳೂರು, ಏ. 28– ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ನೀಡಲು ಕರ್ನಾಟಕ, ಗಡಿನಾಡು ಹಾಗೂ ಹೊರನಾಡ ಕನ್ನಡಿಗ ವಿದ್ಯಾರ್ಥಿ ಗಳಿಗೆ ಮಾತ್ರ ಅನ್ವಯಿಸುವಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಸರ್ಕಾರ ಇಂದು ನಿರ್ಧರಿಸಿತು.
ಹೊರರಾಜ್ಯದ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಲಿಗೆ ಕಳೆದ ವರ್ಷ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಕೋಟಾದಲ್ಲಿ ಪ್ರವೇಶ ಪಡೆಯಬೇಕಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಶೇಕಡ 10 ಹಾಗೂ ಎಂಜಿನಿಯರಿಂಗ್ ಶಿಕ್ಷಣ ಪ್ರವೇಶದಲ್ಲಿ ಶೇಕಡ 5ರಷ್ಟು ಸೀಟುಗಳನ್ನು ಬಿಟ್ಟುಕೊಡಲಾಗಿತ್ತು. ಈ ಸೀಟುಗಳನ್ನೂ ಅರ್ಹತೆಯ ಆಧಾರದ ಮೇಲೆಯೇ ತುಂಬಬೇಕಾಗಿದೆ.
ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಬೆಂಗಳೂರು, ಏ. 28– ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಗಳ ಒಂದರಿಂದ ನಾಲ್ಕನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿ– ಬುಡಕಟ್ಟಿನ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಯೋಜನೆ ಜಾರಿಗೆ ತರಲು ಸರ್ಕಾರ ಇಂದು ನಿರ್ಧರಿಸಿತು.
ಸರ್ಕಾರದ ‘ಸಿ’ ಮತ್ತು ‘ಡಿ’ ಗುಂಪಿನ ಹುದ್ದೆಗಳಿಗೆ ನೇಮಕ ಮಾಡುವಾಗ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಕೃಪಾಂಕ ನೀಡಲೂ ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಅಭ್ಯರ್ಥಿಗಳು ಶೈಕ್ಷಣಿಕ ಕೋರ್ಸ್ಗಳಲ್ಲಿ ಪಡೆದ ಅಂಕಗಳ ಒಟ್ಟು ಮೊತ್ತದಲ್ಲಿ ಶೇಕಡ 5ರಷ್ಟು ಅಥವಾ ಕನಿಷ್ಠ 15 ಹೆಚ್ಚಿನ ಅಂಕಗಳನ್ನು ನೀಡಲಾಗುವುದು.