ಕೋಮುಗಲಭೆ ಹತ್ತಿಕ್ಕಲು ಜಾತ್ಯತೀತ ಪಕ್ಷಗಳ ಸಹಕಾರಕ್ಕೆ ಚವಾಣ್ ಕರೆ
ನವದೆಹಲಿ, ಮೇ 12– ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸಂಭವಿಸಿದಂಥ ಕೋಮುಗಲಭೆಗಳನ್ನು ಹತ್ತಿಕ್ಕುವುದಕ್ಕಾಗಿ ಎಲ್ಲ ಪ್ರಜಾಸತ್ತಾತ್ಮಕ ಜಾತ್ಯತೀತ ಪಕ್ಷಗಳ ಸಹಕಾರವನ್ನು ಕೇಂದ್ರ ಗೃಹ ಮಂತ್ರಿ ಶ್ರೀ ವೈ.ಬಿ.ಚವಾಣ್ ಅವರು ಇಂದು ಕೋರಿದರು.
ಮಹಾರಾಷ್ಟ್ರದಲ್ಲಿ ಸಂಭವಿಸಿದ ಕೋಮುಗಲಭೆ ಬಗ್ಗೆ ನಿನ್ನೆ ಲೋಕಸಭೆಯಲ್ಲಿ ತಾವು ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೇಳಿದ ಸದಸ್ಯರಿಗೆ ಉತ್ತರ ಕೊಡುತ್ತಿದ್ದ ಚವಾಣ್ ಅವರು ಮುಸ್ಲಿಂ ಕುಟುಂಬಗಳ ಮೇಲೆ ಅಮಾನುಷ ಹಲ್ಲೆ ನಡೆಯಿತೆಂಬುದು ವಾಸ್ತವಿಕ ಸಂಗತಿ ಎಂದರು.
ವಾರ, ಚಿನ್ನ ಅರಿಯದ ಜನಾಂಗ
ಹೈದರಾಬಾದ್, ಮೇ 12– ಅಂಡಮಾನ್ ದ್ವೀಪದಲ್ಲಿ ಪುಟ್ಟದೊಂದು ಗುಂಪಿದೆ. ಈ ಗುಂಪು ‘ಓಂಗ್’ ಜನಾಂಗಕ್ಕೆ ಸೇರಿದ್ದು. ಈ ಜನಾಂಗದಲ್ಲಿ ಈಗಿರುವುದು ಕೇವಲ 129 ಜನ. ನಶಿಸಿಹೋಗುತ್ತಿರುವ ಜನಾಂಗವಿದು.
ಈ ಜನಾಂಗಕ್ಕೆ ಕಾಲ, ದೂರಗಳ ಅಳತೆಯ ಅರಿವಿಲ್ಲ. ಚಿನ್ನವನ್ನು ಕಂಡರಿಯದ ಜನ. ಪೌಷ್ಟಿಕಾಂಶ ರಾಷ್ಟ್ರೀಯ ಸಂಸ್ಥೆಯ ತಂಡವೊಂದು ಈ ಜನಾಂಗದ ಬಗ್ಗೆ ಸಮೀಕ್ಷೆ ನಡೆಸಿದೆ. ‘ಓಂಗ್’ ಜನಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪೌಷ್ಟಿಕಾಂಶಗಳ ಕೊರತೆ ಕಾರಣವಲ್ಲವೆಂದು ಇದು ಹೇಳಿದೆ.