ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಸಬಿತಾ ಬನ್ನಾಡಿ ಲೇಖನ: ಊರುಕೇರಿಗಳೂ ಒಂಟಿ ನಿಲ್ದಾಣಗಳೂ

ವ್ಯಕ್ತಿಗಳು ಶ್ರೀಮಂತರಾಗುತ್ತಾ ಸಂಸ್ಥೆಗಳು ಬಡವಾದ ವರ್ತಮಾನದಲ್ಲಿ ವಿಮಾನಗಳು ರಾರಾಜಿಸುತ್ತವೆ
Last Updated 27 ಮಾರ್ಚ್ 2023, 20:56 IST
ಅಕ್ಷರ ಗಾತ್ರ

ಮೊನ್ನೆ ಮೊನ್ನೆ ಉಕ್ಕಿನ ಹಕ್ಕಿಯೊಂದು ಹಾರಿ ಬಂದುದನ್ನು ದೊಡ್ಡ ಸಂಭ್ರಮವಾಗಿಸಲು ಎಲ್ಲ ಅಂಗಗಳು ಬಹು ಶ್ರಮಿಸಿ
ದುವು. ಆದರೆ ಆ ಹಕ್ಕಿಯು ಅಲ್ಲೇ ಪಕ್ಕದಲ್ಲಿದ್ದ ಉಕ್ಕಿನ ನಗರಿಯನ್ನು ನೋಡಲೇ ಇಲ್ಲ. ಶಿವಮೊಗ್ಗ ಜಿಲ್ಲೆಯ ಈ ಉಕ್ಕಿನ ನಗರಿಯ ತುಂಬ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರೇ ರಾರಾಜಿಸುತ್ತಿರುತ್ತದೆ. ಆದರೆ ಉಕ್ಕಿನ ಹಕ್ಕಿ ಬಂದಾಗ ವಿಶ್ವೇಶ್ವರಯ್ಯನವರ ಹೆಸರು ಎಲ್ಲೂ ಕಾಣಲೇ ಇಲ್ಲ. ಇದು ಕಾಲದ ಮಹಿಮೆಯೋ? ಅಥವಾ ಜನರನ್ನು ಮರೆವಿಗೆ ಸರಿಸುವ ಪರಿಯೋ?

‘ಗ್ರೀನ್‍ಬುಕ್’ ಎಂಬ ಸಿನಿಮಾದಲ್ಲಿ ಪ್ರಸಿದ್ಧ ಪಿಯಾನೊ ವಾದಕನಾಗಿ ಶ್ರೀಮಂತನಾಗಿದ್ದ ಕರಿಯ ವರ್ಣದ ಶೆರ್ಲಿ ತನ್ನ ವೈಭವೋಪೇತ ಕಾರಿನಲ್ಲಿ ಬಿಳಿಯನನ್ನು ಡ್ರೈವರನನ್ನಾಗಿಸಿಕೊಂಡು ಪಯಣಿಸುವಾಗ ದಾರಿ ಮಧ್ಯದಲ್ಲಿ ಕಾರು ನಿಲ್ಲುತ್ತದೆ. ಅಲ್ಲೇ ಪಕ್ಕದ ಹೊಲದಲ್ಲಿ ಕರಿಯ ಜೀತದಾಳುಗಳು ಅಚ್ಚರಿಯಿಂದ ಈ ದೃಶ್ಯ ನೋಡುತ್ತಾ ಮೂಕವಾಗಿ ನಿಂತುಬಿಡುತ್ತಾರೆ. ಶೆರ್ಲಿ ಅವರನ್ನು ನೋಡಿಯೂ ನೋಡದಂತೆ ನಟಿಸಿ ಮುಂದಕ್ಕೆ ಹೋಗುತ್ತಾನೆ. ಗೊತ್ತಿದ್ದೂ ಆಗುವ ಈ ಅಂತರಗಳು ಪರಸ್ಪರರ ನಡುವಿನ ಒಡನಾಟವನ್ನು ಒಡೆಯುವ ಜೀವನ ಕ್ರಮವೊಂದರ ಪರಿಣಾಮವೂ ಹೌದು.

ಕಾರ್ಖಾನೆಯೊಂದು ಜನಸಮುದಾಯಗಳನ್ನು ತನ್ನ ಒಡಲಿನಿಂದಲೇ ಬೆಳೆಸುತ್ತಾ ಚಿಗುರಿಸುತ್ತಾ ನೆರಳಾಗುತ್ತಾ ಹೋಗುತ್ತದೆ. ಅದರ ಸುತ್ತಲೂ ಏನೇನೆಲ್ಲಾ ಬೆಳೆಯುತ್ತಾ ಹೋಗುತ್ತದೆ. ಯಾಕೆಂದರೆ ಕಾರ್ಖಾನೆಗಳು ಜನರನ್ನೇ ಕೇಂದ್ರವಾಗಿಸಿಕೊಂಡಿರುತ್ತವೆ. ಜಗತ್ತಿನಾದ್ಯಂತ ಹುಟ್ಟಿದ ಪ್ರಜಾಪ್ರಭುತ್ವದ ಕಲ್ಪನೆಗೂ ಇಂತಹ ಕಾರ್ಖಾನೆಗಳ ಹುಟ್ಟಿಗೂ ಹೊಕ್ಕುಳಬಳ್ಳಿಯ ಸಂಬಂಧ ಇರುವಂತಿದೆ. ಭದ್ರಾವತಿಯೆಂಬ ನದಿದಡದ ಪಟ್ಟಣವನ್ನು ಬೆಳೆಸಿದ ವಿ.ಐ.ಎಸ್.ಎಲ್. ಕಾರ್ಖಾನೆಯನ್ನೇ ನೋಡಿ. ಇದು ಪಟ್ಟಣವೊಂದರಲ್ಲಿ ಎಲ್ಲಾ ಜಾತಿಯ, ಎಲ್ಲಾ ಊರಿನ, ಎಲ್ಲಾ ಅರ್ಹತೆಯ ಜನರೂ ಜೊತೆಯಲ್ಲೇ ಬದುಕುವುದಕ್ಕೆ ಅನುವು ಮಾಡಿಕೊಟ್ಟಿತು. ಪದವೀಧರರು, ಪದವಿ ಇಲ್ಲದವರು, ಅನಕ್ಷರಸ್ಥರು ಎಲ್ಲರೂ ನೆಲೆ ಕಂಡುಕೊಳ್ಳಲು ನೆಲ ನೀಡಿತು. ಕ್ವಾರ್ಟರ್ಸ್‌ಗಳ ಈ ಪೇಟೆಯಲ್ಲಿ ಅಕ್ಕಪಕ್ಕದಲ್ಲಿ ಯಾವ ಜಾತಿಯವರು ಇರುತ್ತಾರೆ ಎಂಬುದು ಮುಖ್ಯವಾಗಲಿಲ್ಲ. ಕಾರ್ಖಾನೆಯೊಂದು ತಾನು ಬೆಳೆಯುತ್ತಲೇ, ತನ್ನೆದುರಿನ ನೆರಳು ನೀಡುವ ಮರಗಳ ಸಾಲಿನ ರಸ್ತೆಯನ್ನೂ ಉದ್ಯಾನವನ್ನೂ ನಿರ್ವಹಿಸುತ್ತಾ, ಅದು ಎಲ್ಲರಿಗೂ ಮುಕ್ತವಾಗಿರುವಂತೆ ಮನುಷ್ಯರ ಮನಸ್ಸುಗಳಲ್ಲೂ ಒಂದು ರೀತಿಯ ಮುಕ್ತತೆಯನ್ನು ಹರಿಸಿತು.

ಬಿ.ಕೃಷ್ಣಪ್ಪ ಅವರಂತಹ ನಾಯಕರನ್ನು ಬೆಳೆಸಿದ ದಲಿತ ಸಂಘಟನೆಯೂ, ಹಲವು ನಾಯಕರನ್ನು ಹುಟ್ಟುಹಾಕಿದ ಕಾರ್ಮಿಕ ಸಂಘಟನೆಗಳೂ ನಿರ್ಭೀತಿಯಲ್ಲಿ ಅಭಿವ್ಯಕ್ತಿ ಮಾಡಲು ಇಲ್ಲಿ ಸಾಧ್ಯವಿತ್ತು. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿತು. ಅತ್ಯಂತ ಕಡಿಮೆ ಖರ್ಚಿನಲ್ಲಿ ಆರೋಗ್ಯದ ಸೇವೆ ನೀಡುವ ಅತ್ಯುತ್ತಮ ಡಾಕ್ಟರುಗಳನ್ನೊಳಗೊಂಡ ಆಸ್ಪತ್ರೆಯನ್ನು ಊರಿಗೇ ನೀಡಿತು. ಇದರ ಜೊತೆಗೇ ಬೆಳೆದ ಎಂ.ಪಿ.ಎಂ.,ಸುತ್ತಲಿನ ರೈತರಿಗೆ ಆಸರೆಯಾಗುತ್ತಾ, ಅತಿ ಕಡಿಮೆ ವೆಚ್ಚದಲ್ಲಿ ಅತ್ಯುಚ್ಚ ಕಾಗದ ಉತ್ಪಾದಿಸಿ ಅಕ್ಷರ ಭಾರತದ ಆಸರೆಯಾಯಿತು.

ಇಂದು ಬರಡಾಗಿಸಲಾಗಿರುವ ಭದ್ರಾವತಿ ಒಂದು ಕಾಲದಲ್ಲಿ ಸಾಂಸ್ಕೃತಿಕ ನಗರಿಯಾಗಿತ್ತು. ತಿಂಗಳುಗಳ ಕಾಲ ಸಾಂಸ್ಕೃತಿಕ ಉತ್ಸವಗಳು, ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಇಲ್ಲಿ ಓದಿದವರು, ಇಲ್ಲಿ ಕಲಾವಿದರಾದವರು ಜಗತ್ತಿನಾದ್ಯಂತ ಹಬ್ಬಿ ಹರಡಿಹೋಗಿದ್ದಾರೆ. ಆದರೆ ಎಲ್ಲರೂ ಈ ಊರನ್ನು ಮರೆತಿರುವರೇ? ಇದು ಅವರ ಬೇರು ಆಗಿರದೆ, ಬರೀ ಚಿಮ್ಮು ಹಲಗೆಯಷ್ಟೇ ಆಯಿತೇ?

ನನಗೆ ಈ ಊರಿನಲ್ಲಿ ಅತ್ಯಂತ ವಿಶೇಷ ಅನ್ನಿಸಿದ್ದು ‘ತಿಂಗಳ ಸಂತೆ’. ಕಾರ್ಖಾನೆಯ ಉದ್ಯೋಗಿಗಳಿಗೆ ಸಂಬಳವಾಗುವ ಎಂಟನೇ ತಾರೀಖಿನ ದಿನದ ಈ ಸಂತೆಯಲ್ಲಿ ಅತ್ಯಂತ ಕಡಿಮೆ ಆದಾಯ ಇರುವವರೂ ತಮ್ಮ ಮನದಿಚ್ಛೆ ಈಡೇರಿಸಿಕೊಳ್ಳಬಹುದಾದಷ್ಟು ಸೋವಿ ದರದಲ್ಲಿ ಮನೆಗೆ ಬೇಕಾದೆಲ್ಲಾ ವಸ್ತುವೈವಿಧ್ಯಗಳು ಇರುತ್ತಿದ್ದವು. ಕಾರ್ಖಾನೆ ಸೊರಗಿದಂತೆ ಈ ಸಂತೆಯೂ ಸೊರಗಿತು. ಇಲ್ಲಿ ನಾನು ಹೇಳಹೊರಡುತ್ತಿರುವುದು ಊರೊಂದರ ವರ್ಣನೆಯಲ್ಲ. ಬದಲಿಗೆ ಈ ಊರುಗಳ ನಿರ್ಮಾಣದ ಹಿಂದಿರುವ ಯೋಜನೆಗಳನ್ನು. ಇಂತಹದೇ ಹಲವು ಊರುಗಳು ನಮ್ಮ ನಾಡಿನಲ್ಲಿ ನಿರ್ಮಾಣವಾಗಿವೆ.

ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ತಮ್ಮ ಜಾತಿ, ವರ್ಗಗಳಿಂದಾಗಿ ತಾರತಮ್ಯದ ಶಾಪ ಅನುಭವಿಸುತ್ತಿದ್ದವರು ತಮಗೊಂದು ಹೊಸ ಐಡೆಂಟಿಟಿಯನ್ನು ಹೊಂದಲು ಇಂತಹ ಊರುಗಳು ವರವಾಗಿ ಪರಿಣಮಿಸುತ್ತಿದ್ದವು. ಇದು ಜನರ ನಡುವಿನ ಒಡನಾಟಗಳನ್ನು ನೇಯ್ಗೆಯಾಗಿ ಹೊಸೆಯುವ, ಆ ಮೂಲಕ ಪರಸ್ಪರರ ಕಷ್ಟ ಸುಖಗಳನ್ನು ಅರಿಯುವ, ಹಂಚಿಕೊಳ್ಳುವ ಸಾಧ್ಯತೆಗಳ ಎಳೆಯನ್ನು ಹೊಂದಿರುವ ಜೀವನಕ್ರಮಕ್ಕೆ ಪೂರಕವಾದ ಚಿಂತನೆಗಳನ್ನು ಹೊಂದಿತ್ತು. ಆದರೆ ಇಂದು ದೇಶದ ಹೆಸರಿನಲ್ಲಿ ದೇಶೀಯರ ನಡುವೆ ಪ್ರತ್ಯೇಕತೆಯನ್ನು ಉದ್ದೀಪಿಸುವ ಜೀವನಕ್ರಮವನ್ನು ಹೇರಿಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಯಾವುದೋ ದೊಂಬಿಯಲ್ಲೋ ವ್ಯಕ್ತಿಗತ ದ್ವೇಷದ ಹೊಡೆದಾಟದಲ್ಲೋ ಸತ್ತವರ ಫೋಟೊಗಳನ್ನು ರಾರಾಜಿಸುತ್ತಾ, ಊರು ಕಟ್ಟಿದ ವಿಶ್ವೇಶ್ವರಯ್ಯನವರ ಫೋಟೊವನ್ನು ಮರೆಗೆ ದಬ್ಬಲಾಗುತ್ತದೆ. ಆ ಮೂಲಕ ಒಂದು ಜೀವನಕ್ರಮವನ್ನೂ ಮರೆವಿಗೆ ತಳ್ಳುವ ಹುನ್ನಾರಗಳಿವೆ. ಎಲ್ಲೆಲ್ಲಾ ಜನರ ನಡುವಿನ ಒಡನಾಟದ ಬದುಕುಗಳನ್ನು ದೂರ ಮಾಡಲಾಗಿದೆಯೋ ಅಲ್ಲೆಲ್ಲಾ ಪರಸ್ಪರ ಅನುಮಾನದ ಅತೃಪ್ತ ಬದುಕುಗಳ ನರಕ ಸೃಷ್ಟಿಯಾಗುತ್ತದೆ. ಆಗೆಲ್ಲಾ ಸಾಂಸ್ಕೃತಿಕ ನಗರಿಗಳು ವ್ಯಾವಹಾರಿಕ
ನಗರಿಗಳಾಗತೊಡಗುತ್ತವೆ.

‘ಗ್ರೀನ್‍ಬುಕ್’ ಎಂದರೆ ಅಮೆರಿಕದಲ್ಲಿ ಕರಿಯ ವರ್ಣೀಯರಿಗೆ ಅಪಾಯಕಾರಿಯಲ್ಲದ, ಸೌಲಭ್ಯ ಇರುವ ಪ್ರದೇಶಗಳ ಪ್ರವಾಸ ಮಾಹಿತಿ ಇರುವ ಪುಸ್ತಕ. 1962ರ ಕತೆಯನ್ನು 2018ರಲ್ಲಿ ತೆರೆಗೆ ತಂದ ಈ ಅಮೆರಿಕನ್ ಸಿನಿಮಾ, ವರ್ಗ ಮತ್ತು ವರ್ಣ ತಾರತಮ್ಯದ ಬದುಕಿನ ಎಳೆಯನ್ನು ಸ್ನೇಹದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ, ನಿಜಜೀವನ ಆಧಾರಿತವಾದ ಕತೆಯನ್ನು ಹೊಂದಿದೆ. ಪರಸ್ಪರ ಒಡನಾಟದಿಂದ ವ್ಯಕ್ತಿಗಳ ಮನಸ್ಸುಗಳನ್ನು ಬೆಸೆಯುವುದು ಸಾಧ್ಯ ಎಂಬೊಂದು ನಂಬಿಕೆಯನ್ನು ಇದು ಹೊಂದಿದೆ.

ಕರಿಯರೆಡೆಗೆ ತಿರಸ್ಕಾರವಿರುವ, ಅವರು ಕುಡಿದ ಗಾಜಿನ ಲೋಟಗಳನ್ನು ನಾವು ತೊಳೆಯಬೇಕೇ ಎಂಬ ಅಸಹನೆಯಿಂದ ಲೋಟಗಳನ್ನು ಮನೆಯ ಕಸದಬುಟ್ಟಿಗೆ ಹಾಕುವ ಬಿಳಿಯ ಟೋನಿ ಲಿಪ್ ಕಸದಗಾಡಿಯ ಡ್ರೈವರ್. ಹೆಂಡತಿ, ಮಕ್ಕಳು, ಗೆಳೆಯರನ್ನು ಪ್ರೀತಿಸುವ ಈತ ಒರಟ ಮತ್ತು ನೇರವಂತ. ಇರುವ ಕೆಲಸವೂ ಹೋದಾಗ ಅನಿವಾರ್ಯವಾಗಿ ಶೆರ್ಲಿಯ ಡ್ರೈವರ್ ಆಗಿ ಅವನೊಂದಿಗೆ ತೆರಳುತ್ತಾನೆ. ಶೆರ್ಲಿಯ ಪಿಯಾನೊ ಪ್ರತಿಭೆಯಿಂದ ಪ್ರಭಾವಿತನಾಗುತ್ತಾ ಅವನನ್ನು
ಮೆಚ್ಚಿಕೊಳ್ಳುತ್ತಾನೆ.

ವೇದಿಕೆಯಲ್ಲಿ ಅಪಾರ ಮನ್ನಣೆ ಸಿಕ್ಕರೂ ವೇದಿಕೆಯಿಂದ ಇಳಿಯುತ್ತಿದ್ದಂತೆಯೇ ಕರಿಯನೆಂಬ ಅಪಮಾನ ಎದುರಿಸುವ ಶೆರ್ಲಿಗೆ, ಆತ ಎಲ್ಲಿ ಪ್ರದರ್ಶನ ನೀಡುತ್ತಾನೋ ಆ ಸಭಾಂಗಣದಲ್ಲಾಗಲೀ ಹೋಟೆಲ್‍ಲ್ ನಲ್ಲಾಗಲೀ ಊಟವನ್ನೂ ವಸತಿಯನ್ನೂ ನೀಡುವುದಿಲ್ಲ. ಮಾತ್ರವಲ್ಲ, ಕಾರ್ಯಕ್ರಮದ ನಡುವಿನ ಬಿಡುವಿನಲ್ಲಿ ಅಲ್ಲಿನ ಶೌಚಾಲಯ ಕೂಡಾ ಅವನಿಗೆ ಲಭ್ಯವಿಲ್ಲ. ಆತ ಬಿಳಿಯರಂತೆಯೇ ಜೀವನಶೈಲಿ ಅಳವಡಿಸಿಕೊಂಡಿದ್ದರೂ ಅವರು ಅದನ್ನು ಲೆಕ್ಕಕ್ಕೇ ಇಟ್ಟಿಲ್ಲ.

ಇದನ್ನೆಲ್ಲಾ ಗಮನಿಸುವ ಟೋನಿಗೆ ಬಿಳಿಯರ ವರ್ತನೆ ಸಿಟ್ಟು ತರಿಸುತ್ತದೆ. ಇದನ್ನೆಲ್ಲಾ ವಿರೋಧಿಸದೆ ಸಭ್ಯತೆ ತೋರುವ ಶೆರ್ಲಿಯನ್ನು ಜರಿಯುತ್ತಾನೆ. ತಾನು ಎಲ್ಲಾ ಅವಮಾನ ನುಂಗಿಕೊಂಡು ಬಿಳಿಯರ ಮನಃಸ್ಥಿತಿ ಬದಲಿಸಲು ಅವರೊಡನೆ ಒಡನಾಡುತ್ತಿದ್ದೇನೆ ಎನ್ನುವ ಶೆರ್ಲಿ, ಕೊನೆಗೊಮ್ಮೆ ತನಗೆ ಎಲ್ಲರೊಂದಿಗೆ ಊಟ ಕೊಡದ ನಿಯಮ ಧಿಕ್ಕರಿಸಿ ಕಾರ್ಯಕ್ರಮ ರದ್ದು ಮಾಡಿ ಪ್ರತಿಭಟಿಸುತ್ತಾನೆ, ಬಡ ಕರಿಯರ ರೆಸ್ಟೊರೆಂಟ್‍ನಲ್ಲಿ ನಿರಾಳವಾಗಿ ಪಿಯಾನೊ ನುಡಿಸಿ ಅವರೊಂದಿಗೆ ಬೆರೆಯುತ್ತಾನೆ. ಆ ಬೆರೆಯುವಿಕೆಯ ಸುಖವನ್ನು ಅನುಭವಿಸುತ್ತಾನೆ.

ಜನ ಆ ಸುಖ ಮರೆತ ದಿನ, ಉಕ್ಕಿನಷ್ಟೇ ಗಟ್ಟಿಯಾಗಿತ್ತು ಎಂದು ನಂಬಿದ್ದ ಬದುಕುಗಳನ್ನೂ ತಕ್ಕಡಿ ಹಿಡಿದವರು ಗುಜರಿಗೆ ಹಾಕಿ ಅದೇ ಉಕ್ಕಿನಿಂದ ಹಾರುವ ಹಕ್ಕಿಗಳಾಗುತ್ತಾರೆ. ಕಾರ್ಖಾನೆಗಿಲ್ಲದ ಕೋಟಿಗಳು ನಿಲ್ದಾಣವಾಗಿ ಅರಳುವ ಕಣ್ಕಟ್ಟಿಗೆ ಮರುಳಾಗುವ ನಾವು, ನಿಂತ ನೆಲ ಕುಸಿದರೂ ಹಾರುವ ಕನಸು ಕಾಣುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT