ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ವೈರಾಣು– ಪರಮಾಣು ಭೀತಿಯಲ್ಲಿ ಪ್ರಪಂಚ

ಹಳ್ಳಿ ಮಟ್ಟದಿಂದ ವಿಶ್ವ ಮಟ್ಟದವರೆಗೆ ಶಾಂತಿ ಬೀಜಗಳನ್ನು ಬಿತ್ತಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ
Last Updated 24 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಸಮವಸ್ತ್ರವನ್ನು ಸಮಾನತೆಯ ಸಂಕೇತ ಎಂಬಂತೆ ಭಾವಿಸಲಾಗುತ್ತದೆ. ವಸ್ತ್ರಸಂಹಿತೆಯು ಇತ್ತೀಚಿನ ದಿನಗಳಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿತು. ಇದು ಒಂದು ಅಹಿತಕರ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಮುಂದೆ ಅದು ಧಾರ್ಮಿಕ ವಿವಾದದ ಸ್ವರೂಪ ಪಡೆದುಕೊಂಡು ಸಾಮಾಜಿಕ ಶಾಂತಿ ಕದಡಲು ಕಾರಣವಾಯಿತು.

ಈ ನಡುವೆ ಹೈಕೋರ್ಟ್‌ ತೀರ್ಪು ಹೊರಬಿದ್ದು, ವಸ್ತ್ರಸಂಹಿತೆಗೆ ತೆರೆಬೀಳಬಹುದೆಂದು ನಿರೀಕ್ಷಿಸಲಾಯಿತು. ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಒಡ್ಡುವ ಮಾತುಗಳು, ಅವರ ವಿರುದ್ಧವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಅಭಿಪ್ರಾಯಗಳು ವ್ಯಕ್ತವಾದದ್ದು, ಸಮಸ್ಯೆಯನ್ನು ಜೀವಂತವಾಗಿ ಇಡುವ ಪ್ರಯತ್ನವೇ ಹೌದು. ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅನಿಸಿಕೆಯನ್ನು ಪ್ರಾಜ್ಞರು ವ್ಯಕ್ತಪಡಿಸಿದರು. ಕೆಲವರು ಮಾತ್ರ ನ್ಯಾಯಮೂರ್ತಿಗಳ ಮೇಲೆ ಮುಗಿಬಿದ್ದರು. ರಾಜ್ಯ ಮತ್ತು ರಾಷ್ಟ್ರದಲ್ಲಿ ಈ ತೆರನಾದ ಸಂಘರ್ಷಗಳು ನಡೆಯುತ್ತಲೇ ಇವೆ.

ವಿಶ್ವಮಟ್ಟದಲ್ಲಿ ಯುದ್ಧ ನಡೆಯುತ್ತಿದೆ. ಯುದ್ಧದ ಭೀಕರತೆಯನ್ನು ಕಲ್ಪಿಸಿಕೊಳ್ಳಲು ಕೂಡಾ ಆಗದು. ಯಾವುದೇ ಯುದ್ಧವು ಬಹುಮುಖ್ಯವಾಗಿ ಜೀವಹಾನಿಯನ್ನು ಉಂಟು ಮಾಡುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಒಡವೆ, ವಸ್ತು, ವಾಹನ, ಕಟ್ಟಡಗಳನ್ನು ಪುನರ್‌ನಿರ್ಮಾಣ ಮಾಡಬಹುದು. ಅದು ಪ್ರಯತ್ನದಿಂದ ಸಾಧ್ಯವಾಗುವ ಕಾರ್ಯ. ಆದರೆ ಹೋದ ಜೀವವನ್ನು ಮರಳಿ ತರಲು ಆಗುವುದಿಲ್ಲ; ಜೀವ ಕೊಡಲು ಸಹ ಸಾಧ್ಯವಿಲ್ಲ. ಇದು ಅಸಂಭವವಾದುದು.

ಮಾನವ ಶರೀರಧಾರಿಯಾಗಿ ಜನಿಸುತ್ತಾನೆ. ಜೀವ ಇರುವವರೆಗೂ ಜೀವಂತಿಕೆ ಇರುತ್ತದೆ. ಜೀವ ಹೋದ ಬಳಿಕ ಆ ಶರೀರವು ನಿರ್ಜೀವವಾಗುತ್ತದೆ. ಜೀವ ಇರುವವರೆಗೆ ಜೀವನ ಮತ್ತು ಸಾಧನೆ. ಜೀವ ಹೋಗುತ್ತದೆ, ಸಾಧನೆ ಉಳಿಯುತ್ತದೆ.

ಯುದ್ಧವು ಜೀವಭಕ್ಷಕ. ನರಭಕ್ಷಕ. ಜೀವಿಗಳ ಭಕ್ಷಕ ಕೂಡ. ಯುದ್ಧಕ್ಕೆ ಜೀವ ತೆಗೆದುಕೊಳ್ಳಲು ಬರುತ್ತದೆ. ಆದರೆ ಅದಕ್ಕೆ ಜೀವವನ್ನು ಕೊಡಲು ಆಗುತ್ತದೆಯೇ? ಎಂದಿಗೂ ಇಲ್ಲ. ನಿಜವಾಗಲೂ ಯುದ್ಧಕ್ಕೆ ಜೀವ ಕೊಡಲು ಸಾಧ್ಯವಿಲ್ಲ. ಅದು ಯಾವಾಗಲೂ ಹಿಂಸಾತ್ಮಕವಾದುದು.

ಯುದ್ಧದ ಭೀಕರತೆ ಅಂದರೆ ಜೀವಹಾನಿ. ಅದರೊಟ್ಟಿಗೆ ಆಸ್ತಿಹಾನಿ, ಕಟ್ಟಡಗಳ ನೆಲಸಮ ಮಾಡುವುದು ಸೇರುತ್ತವೆ. ಉತ್ತಮ ವ್ಯವಸ್ಥೆ ರೂಪಿಸುವಲ್ಲಿ ಉತ್ತಮ ಸೌಕರ್ಯ ಇರಬೇಕಾಗುತ್ತದೆ. ಮೂಲಸೌಕರ್ಯ ಒದಗಿಸುವ ಮುಖಾಂತರ ದೇಶವನ್ನು ಸುಭದ್ರಗೊಳಿಸಬಹುದು, ಸೌಂದರ್ಯಯುಕ್ತ ಆಗಿಸಬಹುದು.

ಒಂದೊಂದು ದೇಶ ಒಂದೊಂದು ವಿಶಿಷ್ಟ ಯೋಜನೆಯನ್ನು ರೂಪಿಸುತ್ತ, ದೇಶ ವಿದೇಶದವರನ್ನು ಆಕರ್ಷಿಸುವ ಪ್ರಯತ್ನ ನಡೆಸುತ್ತದೆ. ಉದಾಹರಣೆಗೆ, ಪಕ್ಕದ ಸಿಂಗಪುರ ದೇಶವು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದೆ. ಆ ಮೂಲಕ ಅದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದಕ್ಕೆ ಬೇಕಾದ ಸಾಧನ ಸೌಕರ್ಯಗಳನ್ನು ಆ ದೇಶವು ನಿರ್ಮಿಸಿದೆ. ಅದರಂತೆ ಉಕ್ರೇನ್ ದೇಶವು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದ್ದು, ಅದಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸಿತ್ತು. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ವಿದ್ಯಾರ್ಥಿಗಳು ವೈದ್ಯಕೀಯ ವಿಜ್ಞಾನದ ಶಿಕ್ಷಣ ಪಡೆಯಲು ಆ ದೇಶದತ್ತ ವಲಸೆ ಹೋಗುತ್ತಿದ್ದುದನ್ನು ಕಾಣಬಹುದಾಗಿತ್ತು.

ಈಗ ರಷ್ಯಾ ದೇಶವು ಉಕ್ರೇನ್ ಮೇಲೆ ನಡೆಸಿರುವ ಆಕ್ರಮಣದಿಂದಾಗಿ ಆ ದೇಶದ ಪ್ರಮುಖ ನಗರಗಳು ನೆಲಕಚ್ಚಿವೆ, ಧ್ವಂಸಗೊಂಡು ನಿರುಪಯುಕ್ತ ಆಗಿವೆ. ಆಸ್ಪತ್ರೆ, ಶಾಲೆ- ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ಮಾಡಲಾಗುತ್ತಿದೆ.

ಯಾವುದೇ ದೇಶವು ಎಲ್ಲ ಹಂತದಲ್ಲೂ ಬಲಿಷ್ಠ ಆಗಲಿ. ಅದಕ್ಕೆ ಯಾರದೂ ಅಭ್ಯಂತರ ಇರಲಾರದು. ಬಲಿಷ್ಠ ರಾಷ್ಟ್ರವು ದುರ್ಬಲ ರಾಷ್ಟ್ರವೊಂದರ ಮೇಲೆ ಯುದ್ಧ ಮಾಡುತ್ತಾ ಆ ರಾಷ್ಟ್ರಕ್ಕೆ ಹಾನಿ ಉಂಟು ಮಾಡುವುದು ಸೂಕ್ತವಲ್ಲ. ಯಾವುದೇ ಸಮಸ್ಯೆಗೆ ಯುದ್ಧವು ಪರಿಹಾರವಲ್ಲ. ಪರಸ್ಪರ ಸಮಾಲೋಚನೆ ಅಥವಾ ಮಾತುಕತೆಯ ಮುಖಾಂತರ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕದನವಿರಾಮ ಕುರಿತು ಮಾತುಕತೆ ನಡೆದಿದೆ. ಆದರೆ ಅಂತಿಮ ನಿರ್ಣಯ ತೆಗೆದುಕೊಳ್ಳುವಲ್ಲಿ ಯಶಸ್ಸು ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ. ಮಾತುಕತೆಗಳು ಅಪೂರ್ಣ ಆಗಿವೆ. ಕದನವಿರಾಮ ಕುರಿತು ಮಾತುಕತೆ ನಿಂತಿಲ್ಲ, ಅತ್ತ ಯುದ್ಧವೂ ಕೊನೆಗೊಂಡಿಲ್ಲ. ಇದಕ್ಕೆ ಉಭಯತ್ರರ ಹಟಮಾರಿತನದ ಧೋರಣೆಯೂ ಕಾರಣ ಆಗಿರಬಹುದು.

ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧ ಸಂಭವಿಸಿದರೂ ಅದು ಪ್ರತಿಕೂಲ ವಾತಾವರಣವನ್ನು ನಿರ್ಮಿಸುವುದು ಖಚಿತ. ವಾಹನ ಮತ್ತು ಔದ್ಯೋಗಿಕ ಕ್ಷೇತ್ರಕ್ಕೆ ಬೇಕಾಗುವ ಇಂಧನದ ಅಭಾವ ಸೃಷ್ಟಿಸುವುದು, ಜೀವನಾವಶ್ಯಕ ಸಾಮಗ್ರಿಗಳ ಕೊರತೆ ಆಗುವುದು, ಭೌತಿಕ ಬೆಳವಣಿಗೆಗೆ ಅಗತ್ಯವಾಗಿರುವ ಸಿಮೆಂಟ್, ಕಬ್ಬಿಣ ಇತ್ಯಾದಿಗಳ ಬೆಲೆ ಗಗನಕ್ಕೇರುವುದು, ದೇಶದ ಮೇಲೆ ದಿಗ್ಬಂಧನ ವಿಧಿಸುವುದು, ಆಮದು- ರಫ್ತು ವಹಿವಾಟಿಗೆ ತೊಂದರೆ ಆಗುವುದು... ಮುಂತಾದ ಅನನುಕೂಲಗಳನ್ನು ಅನುಭವಿಸಬೇಕಾಗುತ್ತದೆ.

ಆಧುನಿಕ ಜಗತ್ತಿನ ಅತ್ಯಂತ ಅಪಾಯಕಾರಿ ವಿದ್ಯಮಾನವೆಂದರೆ ಪರಮಾಣು ಬಾಂಬುಗಳು. ಇಲ್ಲಿಯವರೆಗೂ ಗನ್, ರೈಫಲ್, ಸ್ಕಡ್, ಟ್ಯಾಂಕರ್, ಯುದ್ಧ ವಿಮಾನಗಳನ್ನು ಬಳಸಲಾಗುತ್ತಿತ್ತು. ಈಗ ಅದಕ್ಕಿಂತಲೂ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿಕೊಳ್ಳಲಾಗಿದೆ. ರಾಸಾಯನಿಕ ಯುದ್ಧಗಳು ನಡೆಯುತ್ತವೆ. ಅವು ಸ್ರವಿಸುವ ಕಣಗಳಿಂದ ನಿಸರ್ಗದಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿ ಆಗುವುದು. ಅದರಿಂದಾಗಿ ಜೀವಿಗಳ ಮಾರಣಹೋಮ ನಡೆಯುತ್ತದೆ.

ರಾಸಾಯನಿಕ ಯುದ್ಧಗಳಿಂದಾಗಿ ಒಂದು ಪುಟ್ಟ ದೇಶವು ದೊಡ್ಡ ದೇಶವನ್ನು ನಿಯಂತ್ರಿಸಬಹುದು. ಒಂದು ಬಲಿಷ್ಠ ದೇಶವು ಪುಟ್ಟ ದೇಶವನ್ನು ನಿಗ್ರಹಿಸಬಹುದು. ಅಣು- ಪರಮಾಣು ಶಕ್ತಿಯಿಂದಾಗಿ ಇಡೀ ಜಗತ್ತು ಅಪಾಯದ ಹೊಸ್ತಿಲಲ್ಲಿದೆ.

ಕೊರೊನಾ ವೈರಾಣು ಸೋಂಕಿನ ಭೀತಿಯಿಂದ ಜಗತ್ತು ಸಂಪೂರ್ಣವಾಗಿ ಮುಕ್ತವಾಗಿಲ್ಲ. ಆಗಲೇ ಮಾನವ ಪ್ರಚೋದಿತ ಯುದ್ಧವು ಜಾಗತಿಕ ಮಟ್ಟದಲ್ಲಿ ಇನ್ನಿಲ್ಲದ ಭಯವನ್ನು ಸೃಷ್ಟಿಸಿದೆ. ಒಂದೆಡೆ ಪರಮಾಣು ಭೀತಿ. ಮತ್ತೊಂದೆಡೆ ವೈರಾಣು ಭೀತಿ. ಪರಮಾಣು ಮತ್ತು ವೈರಾಣು ಜಗತ್ತನ್ನು ಕಾಡುತ್ತಿರುವ ಎರಡು ಅಪಾಯಗಳು. ವೈರಾಣು ನಿಸರ್ಗ ನಿರ್ಮಿತ, ಪರಮಾಣು ಮಾನವ ಪ್ರಚೋದಿತ. ಎರಡರ ವಿರುದ್ಧವೂ ಹೋರಾಡಬೇಕಾಗಿರುವ ಅನಿವಾರ್ಯ ಸ್ಥಿತಿ ಉಂಟಾಗಿದೆ.

ವೈರಾಣುವಿನ ವಿರುದ್ಧ ಜಾಗೃತಿ ಮೂಡಿಸುತ್ತಲೇ, ಪರಮಾಣು ಯುದ್ಧದಿಂದ ಆಗುವ ಅಪಾಯಗಳನ್ನು ಅರಿಯುತ್ತಾ, ನಿಗ್ರಹಕ್ಕೆ ಬೇಕಾಗುವ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ, ಚಾಲನೆ ನೀಡಬೇಕಾಗುತ್ತದೆ. ಅವೆಂದರೆ ಶಾಂತಿ ಪರವಾದ ಪ್ರಕ್ರಿಯೆಗಳು. ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಎಲ್ಲ ದೇಶಗಳೂ ಒಟ್ಟಾಗಿ ಹೋರಾಡಬೇಕಾಗುತ್ತದೆ.

ಯುದ್ಧದ ಪರವಾದ ಮಾತುಕತೆಗಿಂತ, ಶಾಂತಿ ಪರವಾದ ಮಾತುಕತೆಗೆ ಒತ್ತಾಸೆ ಬೇಕಾಗಿದೆ. ಭೌತಿಕ ಪ್ರಪಂಚದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಹಿಂದೆಂದಿಗಿಂತಲೂ ಈಗ ಶಾಂತಿ ಮತ್ತು ಸಾಮರಸ್ಯದ ಅಗತ್ಯ ಇದೆ. ಮಾನವ ಭೌತಿಕವಾಗಿ ಬೆಳೆದಿರಬಹುದು. ಬೌದ್ಧಿಕವಾಗಿಯೂ ಬೆಳೆದಿರಬಹುದು. ಅದರಿಂದಾಗಿ ದ್ವೇಷ- ಮಾತ್ಸರ್ಯಗಳು ಮಿತಿಮೀರುತ್ತಿವೆ, ಹದ್ದುಮೀರಿ ವರ್ತಿಸುತ್ತಿವೆ. ಪರಸ್ಪರ ರಣಕಹಳೆಗೆ ವೀಳ್ಯ ಕೊಡುತ್ತಿವೆ. ಪ್ರೀತಿಸಾಧನೆ ದೂರವಾಗಿದೆ, ದ್ವೇಷಸಾಧನೆ ಅತಿಯಾಗಿದೆ. ಪ್ರತೀ ಕ್ಷೇತ್ರವನ್ನೂ ಈ ಪಿಡುಗು ಆವರಿಸಿಕೊಂಡಿದೆ.

ವೈಯಕ್ತಿಕ, ಸಾಮಾಜಿಕ ಹಾಗೂ ಜಾಗತಿಕ ಮಟ್ಟದಲ್ಲಿ ದ್ವೇಷಾಸೂಯೆ ತಾಂಡವವಾಡುತ್ತಿದೆ. ದೇಶ- ದೇಶಗಳ ನಡುವೆ ಬಾಂಧವ್ಯ ಬೆಸೆಯುವ ದಿಸೆಯಲ್ಲಿ ವಿಶ್ವಸಂಸ್ಥೆ ರಚನೆಯಾಗಿದೆ. ಹಳ್ಳಿ ಮಟ್ಟದಿಂದ ವಿಶ್ವ ಮಟ್ಟದವರೆಗೆ ಶಾಂತಿ ಬೀಜಗಳನ್ನು ಬಿತ್ತಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

ಜಗತ್ತು ಉಳಿದರೆ, ನಾ(ನೀ)ವು ಉಳಿದಂತೆ, ಜಗತ್ತು ಅಳಿದರೆ ನಾವು ಅಳಿದಂತೆ. ಅಳಿವು- ಉಳಿವಿನ ನಡುವೆ ಜಗತ್ತನ್ನು ಆಳಬೇಕೆಂಬ ಅರ್ಥಾತ್ ಜಗತ್ತು ನನ್ನ ಕಪಿಮುಷ್ಟಿಯಲ್ಲಿ ಇರಬೇಕೆಂಬ ಸ್ವಾರ್ಥಪರವಾದ ಲಾಲಸೆಗಳು ಕೊನೆಗೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT