ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಯಾವುದು ಮಾನನಷ್ಟ? ಯಾವುದು ಲೋಕಹಿತ?

ಮಾನನಷ್ಟ: ಅರ್ಥ ಮಾಡಿಕೊಳ್ಳುವುದು ಸುಲಭ, ವ್ಯಾಖ್ಯಾನಿಸುವುದು ಕಷ್ಟ
Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಒಬ್ಬರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ಪ್ರಕರಣದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದನ್ನು ಆಧಾರವಾಗಿ ಇಟ್ಟುಕೊಂಡು ಸಿವಿಲ್ ನ್ಯಾಯಾಲಯದ ಮೊರೆಹೋದ ಆರು ಜನ ಸಚಿವರು ತಮ್ಮನ್ನು ಕೂಡ ಇದೇ ಬಗೆಯಲ್ಲಿ ಚಾರಿತ್ರ್ಯವಧೆಗೆ ಗುರಿಪಡಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ತಮ್ಮ ವಿರುದ್ಧ ಇಂತಹ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು. ನ್ಯಾಯಾಲಯದ ಎದುರು ಈ ಸಚಿವರ ಅಂತಹ ದೃಶ್ಯಗಳ ಸಿ.ಡಿ. ಇರಲಿಲ್ಲ. ಈ ಆರು ಸಚಿವರ ವಿರುದ್ಧ ಮಾಧ್ಯಮಗಳು ಮಾನಹಾನಿಕರವಾದ ಏನನ್ನೂ ಪ್ರಸಾರ ಮಾಡಬಾರದು ಎಂದು ನ್ಯಾಯಾಲಯ ತಾತ್ಕಾಲಿಕ ಆದೇಶ ನೀಡಿದೆ. ಆದರೆ, ಈ ಸಚಿವರ ವಿರುದ್ಧ ಪರಿಶೀಲಿಸಿದ ಸುದ್ದಿಗಳನ್ನು ಪ್ರಸಾರ ಮಾಡಬಹುದು ಎಂದು ಕೋರ್ಟ್‌ ಹೇಳಿದೆ. ಹಾಗಾದರೆ, ‘ಮಾನಹಾನಿಕರ’ ಅಂದರೇನು?

ಸಾರ್ವಜನಿಕ ಸೇವಕನಿಗೆ ಸಂಬಂಧಿಸಿದಂತೆ ಮಾನಹಾನಿಕರವಾದ ಏನನ್ನೂ ಪ್ರಸಾರ ಮಾಡಬಾರದು ಎಂದು ಕೋರ್ಟ್‌ ತಾತ್ಕಾಲಿಕ ತಡೆಯಾಜ್ಞೆ ನೀಡಿದ ನಂತರವೂ, ತಮ್ಮ ಅಭಿಪ್ರಾಯದಲ್ಲಿ ಮಾನಹಾನಿ
ಕರವಲ್ಲ ಎಂದು ಅನ್ನಿಸಿದ ವಸ್ತು–ವಿಷಯಗಳನ್ನು ಪ್ರಸಾರ ಮಾಡುವ ಅವಕಾಶ ಮಾಧ್ಯಮಗಳಿಗೆ ಇದ್ದೇ ಇರುತ್ತದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಸ್ಥೆಯ ಪ್ರಕರಣದಲ್ಲಿ 2019ರಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ ಆದೇಶ ಇದನ್ನೇ ಹೇಳುತ್ತದೆ.

ಒಂದು ಉದಾಹರಣೆಯನ್ನು ಗಮನಿಸೋಣ. ನಾನು ಒಂದು ಖಾಲಿ ನಿವೇಶನದ ಮಾಲೀಕತ್ವ ಹೊಂದಿದ್ದೇನೆ ಎಂದು ಭಾವಿಸಿ. ‘ಅ’ ಎಂಬ ವ್ಯಕ್ತಿ ರಾತ್ರೋರಾತ್ರಿ ಅದನ್ನು ವಶಕ್ಕೆ ಪಡೆದು, ಅಲ್ಲಿ ಕಟ್ಟಡ ನಿರ್ಮಾಣ ಆರಂಭಿಸುತ್ತಾನೆ. ನಾನು ತಕ್ಷಣ ಸಿವಿಲ್ ನ್ಯಾಯಾಲಯದ ಮೊರೆಹೋಗಿ, ‘ಅ’ನ ವಾದ ಆಲಿಸದೆಯೇ ಆತನಿಗೆ ಕಟ್ಟಡ ನಿರ್ಮಿಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರುತ್ತೇನೆ. ಆಗ ನ್ಯಾಯಾಧೀಶರು, ‘ಪ್ರತಿವಾದಿಗೆ ನಿವೇಶನದ ಮೇಲೆ ಹಕ್ಕು ಇಲ್ಲದಿದ್ದಲ್ಲಿ, ಆತ ಅಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ’ ಎಂದು ಆದೇಶಿಸುತ್ತಾರೆ.

ಅದಾದ ನಂತರವೂ, ಪ್ರತಿವಾದಿಯು ಅಲ್ಲಿ ಕಟ್ಟಡ ನಿರ್ಮಾಣ ಮುಂದುವರಿಸುತ್ತಾನೆ ಎಂದು ಭಾವಿಸಿ. ಆಗ ನಾನು ಅವನ ವಿರುದ್ಧ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸುತ್ತೇನೆ. ಆಗ ನಾನು ನ್ಯಾಯಾಲಯ
ದಲ್ಲಿ, ‘ಪ್ರತಿವಾದಿಗೆ ಅಲ್ಲಿ ಕಟ್ಟಡ ನಿರ್ಮಿಸುವ ಹಕ್ಕು ಇರಲಿಲ್ಲ, ಹಕ್ಕು ಇರಲಿಲ್ಲ ಎಂಬುದನ್ನು ಆತ ಅರಿತಿದ್ದ, ತಡೆಯಾಜ್ಞೆಯ ಬಗ್ಗೆ ಆತನಿಗೆ ಗೊತ್ತಿತ್ತು, ಹೀಗಿದ್ದರೂ ಆತ ಅದನ್ನು ಧಿಕ್ಕರಿಸಿ ಮುಂದುವರಿದ’ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ.

ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗ ನಿಂದನೆಯನ್ನು ಸಾಬೀತು ಮಾಡುವುದು, ಅ ವ್ಯಕ್ತಿಗೆ ಆ ನಿವೇಶನದ ಮೇಲೆ ಹಕ್ಕಿಲ್ಲ ಎಂದು ಸಾಬೀತು ಮಾಡುವುದಕ್ಕಿಂತ ಹೆಚ್ಚು ಕಷ್ಟವಾಗಬಹುದು. ‘ಆ ನಿವೇಶನದಲ್ಲಿ ಪ್ರತಿವಾದಿಯು ಕಟ್ಟಡ ನಿರ್ಮಾಣ ಮಾಡಬಾರದು’ ಎಂದಷ್ಟೇ ಆದೇಶ ಇದ್ದರೆ, ಅಂತಹ ಆದೇಶವನ್ನು ಅನುಷ್ಠಾನಕ್ಕೆ ತರುವುದು ಹೆಚ್ಚು ಸುಲಭವಾಗುತ್ತದೆ.

ಮಾನನಷ್ಟ ಎಂದರೇನು ಎಂಬ ಪ್ರಶ್ನೆಯನ್ನು ಮತ್ತೆ ಕೇಳಿಕೊಳ್ಳೋಣ. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲದಿದ್ದರೂ, ವ್ಯಾಖ್ಯಾನಿಸುವುದು ಕಷ್ಟ. ಸಮಾಜದಲ್ಲಿನ ಋಜು ಮಾರ್ಗದ ವ್ಯಕ್ತಿಗಳ ಕಣ್ಣಿನಲ್ಲಿ ಇನ್ನೊಬ್ಬ ವ್ಯಕ್ತಿಯ ಘನತೆಯನ್ನು ತಗ್ಗಿಸುವಂತಹ ಹೇಳಿಕೆಯು ‘ಮಾನಹಾನಿಕರ’ ಎಂದು ಹಿಂದಿನಿಂದಲೂ ಭಾವಿಸಲಾಗಿದೆ. ಈ ರೀತಿಯ ಹೇಳಿಕೆಗೆ ಗುರಿಯಾದ ವ್ಯಕ್ತಿ, ಹಾಗೆ ಹೇಳಿದವನನ್ನು ಕಟಕಟೆಗೆ ಎಳೆದು, ಅವನಿಂದ ಹಣದ ರೂಪದಲ್ಲಿ ಪರಿಹಾರ ಕೇಳಬಹುದು. ಆದರೆ, ಹಾಗೆ ಹೇಳಿದ ವ್ಯಕ್ತಿಯು ತಾನು ಹೇಳಿದ್ದು ಸತ್ಯ ಅಥವಾ ಅದರಲ್ಲಿ ಬಹಳಷ್ಟು ಸತ್ಯವಿದೆ ಎಂದು ಸಾಬೀತು ಮಾಡಿದರೆ, ಮಾನನಷ್ಟದ ದೂರು ಬಿದ್ದುಹೋಗುತ್ತದೆ. ಮಾನನಷ್ಟ ಪ್ರಕರಣಗಳಲ್ಲಿ, ‘ಹೇಳಿಕೆ’ಯ ಉದ್ದೇಶ ಏನಿತ್ತು ಎಂಬುದು ಮುಖ್ಯವಲ್ಲ.

‘ಎ’ ಎಂಬ ವ್ಯಕ್ತಿಗೆ ‘ಬಿ’ ಎಂಬುವವ ಸಾರ್ವಜನಿಕವಾಗಿ ‘ಕಳ್ಳ’ ಎಂದು ಕರೆದರೆ, ಅದು ಸಾಂಪ್ರದಾಯಿಕ ದೃಷ್ಟಿಕೋನದ ಪ್ರಕಾರ ಮಾನನಷ್ಟಕ್ಕೆ ಸಮ. ಖಾಸಗಿ ವ್ಯಕ್ತಿಗಳ ಪಾಲಿಗೆ ಒಳ್ಳೆಯ ಹೆಸರು ಹೊಂದಿರುವುದು ಸಂಪತ್ತು ಹೊಂದಿರುವುದಕ್ಕೆ ಸಮ. ಆದರೆ ಆಧುನಿಕ ಕಾನೂನಿನ ಪ್ರಕಾರ, ಹೇಳಿಕೆಗಳು ಸಂದರ್ಭವನ್ನು ಆಧರಿಸಿ ವ್ಯಕ್ತಿಯ ಘನತೆಯನ್ನು ಋಜು ಮಾರ್ಗದ ಜನರ ಕಣ್ಣಿನಲ್ಲಿ ಕುಗ್ಗಿಸುವಂತಿದ್ದರೆ ಮಾತ್ರ ಅವು ಮಾನನಷ್ಟವೆಂದು ಪರಿಗಣಿತವಾಗುತ್ತವೆ.

ಹಿಂದಿನ ಉದಾಹರಣೆಯನ್ನು ಗಮನಿಸುವುದಾದರೆ, ‘ಎ’ ವ್ಯಕ್ತಿ ಕಳ್ಳ ಎಂದು ಕರೆಸಿಕೊಂಡ ತಕ್ಷಣ, ಅದು ಮಾನನಷ್ಟಕ್ಕೆ ಸಮ ಎನ್ನಲಾಗದು. ತಾನು ಈ ಹಿಂದೆ ಸಾರ್ವಜನಿಕವಾಗಿ ಕಳ್ಳನೆಂದು ಗುರುತಿಸಿಕೊಂಡಿಲ್ಲ, ‘ಬಿ’ ನೀಡಿದ ಹೇಳಿಕೆ ಸುಳ್ಳು ಎಂದು ‘ಎ’ ಪ್ರಮಾಣಪತ್ರದ ಮೂಲಕ ನ್ಯಾಯಾಲಯಕ್ಕೆ ಹೇಳಬೇಕು. ಅಷ್ಟು ಮಾಡದೆಯೇ ಸಿವಿಲ್ ಮಾನನಷ್ಟ ಮೊಕದ್ದಮೆ ನಡೆಸಲಾಗದು. ‘ಬಿ’ ಹೇಳಿಕೆ ಸುಳ್ಳು ಎಂದು ‘ಎ’ ತನ್ನ ಅರ್ಜಿಯಲ್ಲಿ ಹೇಳದಿದ್ದರೆ, ಆ ಮಾನನಷ್ಟ ಅರ್ಜಿ ತಿರಸ್ಕೃತವಾಗುತ್ತದೆ.

ಸಾರ್ವಜನಿಕ ಕಳಕಳಿ ಹಾಗೂ ಸಾರ್ವಜನಿಕ ಕರ್ತವ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ನಿಭಾಯಿಸುವಾಗ ಮಾನನಷ್ಟಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕಾನೂನುಗಳು ಸುಧಾರಣೆ ಕಂಡಿವೆ. ‘ಎ’ ಎಂಬ ಸಾರ್ವಜನಿಕ ಸೇವಕ ಅಕ್ರಮ ಸಂಬಂಧ ಹೊಂದಿ, ಅದನ್ನು ತನ್ನ ಕುಟುಂಬದಿಂದ ಮುಚ್ಚಿಟ್ಟು, ಮಾಧ್ಯಮಗಳು ಅದನ್ನು ಸಾರ್ವಜನಿಕರಿಗೆ ತಿಳಿಸಿದರೆ ಅದು ಮಾನನಷ್ಟಕ್ಕೆ ಸಮನಾಗುತ್ತದೆಯೇ? ಇಲ್ಲ. ‘ಎ’ ವ್ಯಕ್ತಿಗೆ ಅಕ್ರಮ ಸಂಬಂಧ ಇರುವ ಕಾರಣ, ಅದನ್ನು ಆತ ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕುವ ಕಾರಣ, ಆತನನ್ನು ಬ್ಲ್ಯಾಕ್‌ಮೇಲ್‌ಗೆ ಒಳಪಡಿಸಬಹುದು, ಆತ ಸಾರ್ವಜನಿಕ ಸೇವೆಯನ್ನು ಸರಿಯಾಗಿ ಮಾಡುವುದಕ್ಕೆ ಅಡ್ಡಿ ಉಂಟುಮಾಡಬಹುದು ಎಂದು ಮಾಧ್ಯಮಗಳು ವಾದ ಮಂಡಿಸಿದರೆ, ಅಂತಹ ವರದಿ ಮಾನಹಾನಿಕರ ಎಂದು ಕೋರ್ಟ್‌ಗಳು ಹೇಳಲಾರವು.

ಸಾರ್ವಜನಿಕ ರಂಗದಲ್ಲಿರುವ ವ್ಯಕ್ತಿಯ ಸಾರ್ವಜನಿಕ ಕರ್ತವ್ಯಗಳ ವಿಚಾರದಲ್ಲಿ ಆಧುನಿಕ ಕಾನೂನುಗಳು ಖಾಸಗಿ ವ್ಯಕ್ತಿಗಳಿಗೆ ಅನ್ವಯವಾಗುವುದಕ್ಕಿಂತ ಭಿನ್ನವಾಗಿ ಅನ್ವಯವಾಗುತ್ತವೆ. 1994ರಲ್ಲಿ ರಾಜಗೋಪಾಲ್
ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ‘ಸರ್ಕಾರಗಳು ಸಿವಿಲ್ ಮಾನನಷ್ಟ ಮೊಕದ್ದಮೆ ದಾಖಲಿಸುವಂತಿಲ್ಲ’ ಎಂದು ಆದೇಶಿಸಿದೆ.

ಸಚಿವರೊಬ್ಬರು ವಿವಾಹೇತರ ಲೈಂಗಿಕ ಸಂಬಂಧ ಹೊಂದಿದ್ದು, ಅದನ್ನು ಮಾಧ್ಯಮಗಳು ಪ್ರಸಾರ ಮಾಡಿದಾಗ, ‘ಸಾರ್ವಜನಿಕರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಇದನ್ನು ಪ್ರಸಾರ ಮಾಡಲಾಗಿದೆ, ವಿವಾಹೇತರ ಸಂಬಂಧ ಹೊಂದಿರುವ ಸಚಿವರು ಅದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ, ಅದರಿಂದಾಗಿ ಅವರನ್ನು ಬೆದರಿಸುವ ಸಾಧ್ಯತೆ ಇದೆ, ಬೆದರಿಕೆಗೆ ಒಳಗಾಗಿ ಆ ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ’ ಎಂಬ ನಿಲುವು ಸಮರ್ಥನೀಯ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಸರ್ಕಾರದ ಅವಧಿಯಲ್ಲಿಯೂ ಆರು ಜನ ಸಚಿವರು ನ್ಯಾಯಾಲಯದ ಕದ ತಟ್ಟಿ, ತಮ್ಮ ಕುರಿತ ಲೈಂಗಿಕ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಆದೇಶಿಸಬೇಕು ಎಂದು ಕೋರಿದ ಉದಾಹರಣೆ ಇಲ್ಲ. ಸಚಿವರು ಅಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಅದರ ಬಗ್ಗೆ ತಿಳಿಯುವ ಸಾರ್ವಜನಿಕ ಕುತೂಹಲವನ್ನು ಕಾನೂನು ಗುರುತಿಸುತ್ತದೆ.

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT