ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳೆಗಾರಿಕೆ ಮತ್ತು ಪ್ರಜಾಪ್ರಭುತ್ವ

ಜನರ ಮನೋಭಾವದಲ್ಲಿ ಗುಣಾತ್ಮಕ ಬದಲಾವಣೆ ಬಯಸದ ನಡೆಯಲ್ಲಿ ತಂತ್ರಗಾರಿಕೆ ಇದೆ
Last Updated 24 ಮಾರ್ಚ್ 2019, 20:34 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವಕ್ಕೆ ಜನಬೆಂಬಲವೇ ಜೀವಾಳ. ಜನರೇ ಅದರ ಉಸಿರಾಗಿ, ಲೋಕಕಲ್ಯಾಣವೇ ಪ್ರಧಾನ ಧ್ಯೇಯೋದ್ದೇಶವಾಗಿ ಇರಬೇಕಾಗುತ್ತದೆ. ಅಷ್ಟೇ ಅಲ್ಲ, ಪ್ರಶ್ನಿಸುವ ಹಕ್ಕನ್ನೂ ಅದು ಜನರಿಗೆ ನೀಡಿರುತ್ತದೆ. ಪಕ್ಷಗಳ ಸೈದ್ಧಾಂತಿಕ ನೆಲೆಯಲ್ಲಿ ಅವು ನೀಡಿದ ಭರವಸೆಗಳ ಬಗ್ಗೆ ಆತ ಅಥವಾ ಆಕೆ ಪ್ರಶ್ನಿಸುವ ಗುರುತರ ಹೊಣೆಯನ್ನು ಹೊತ್ತವರಾಗಿರುತ್ತಾರೆ. ಇದು ಪ್ರಜಾಪ್ರಭುತ್ವದ ಆಶಯವೂ ಆಗಿದೆ. ದುರ್ದೈವ ಎಂದರೆ, ಅದೆಷ್ಟು ಸಂಖ್ಯಾಬಲದ ಜನರು ತಮ್ಮ ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಾರೆ, ಸಮಸ್ಯೆಗಳನ್ನು ಅವರ ಬಳಿ ಕೊಂಡೊಯ್ದು ಬಗೆಹರಿಸಿಕೊಳ್ಳುತ್ತಾರೆ. ಇವು ಇಂದಿಗೂ ಕಾಡುವ ಪ್ರಶ್ನೆಗಳು.

ಈ ಜನತಂತ್ರ ಪರವಾದ ಆಡಳಿತ ವ್ಯವಸ್ಥೆಯು ಒಂದುಪಕ್ಷ ದಕ್ಷತೆಯಿಂದ ಕೂಡಿದ್ದಿದ್ದರೆ; ಬೆಳಗಾವಿ ಜಿಲ್ಲೆಯಲ್ಲಿ ಎಂಬತ್ತರ ದಶಕದಲ್ಲಿ ನಡೆದ ಸಾಲಹಳ್ಳಿಯ ಬೆತ್ತಲೆ ಪ್ರಕರಣ ಮತ್ತು ಬೆಂಡಿಗೇರಿಯ ಮಲ ತಿನ್ನಿಸಿದಂತಹ ಪ್ರಕರಣ ಜರುಗುತ್ತಿರಲಿಲ್ಲವೇನೋ? ಇವು ಮಾನವೀಯತೆಯೇ ತಲೆತಗ್ಗಿಸುವಂತೆ ಮಾಡಿದ ಕಳಂಕಿತ ಘಟನೆಗಳು. ಇವನ್ನು ರಾಜಕೀಯದಾಚೆ, ಮನುಷ್ಯ ಅಂತಃಕರಣದಿಂದ ನೋಡುವ ಕಣ್ಣುಗಳು ಬೇಕಾಗುತ್ತವೆ. ಈ ಪ್ರಕರಣಗಳು ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿದ ಊಳಿಗಮಾನ್ಯದ ಪ್ರತೀಕ.

ಸ್ವಾತಂತ್ರ್ಯಾನಂತರದ ಆರಂಭಿಕ ದಶಕಗಳಲ್ಲಿ ರಾಜಕಾರಣ ಇಂದಿನಷ್ಟು ಕುಲಗೆಟ್ಟಿರಲಿಲ್ಲ. ಜನಸೇವೆಯ ಹಸಿವು ಅಂದಿನ ನಾಯಕರಲ್ಲಿತ್ತು. ಬೆಳಗಾವಿ ಜಿಲ್ಲೆಯ ಮೇಲೆ ದಕ್ಷಿಣ ಮಹಾರಾಷ್ಟ್ರದ ಸಹಕಾರಿ ರಂಗವು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತ್ತು. ಕೊಲ್ಹಾಪುರದ ಬೆಲ್ಲದ ಮಾರುಕಟ್ಟೆ, ಸಾಂಗಲಿಯ ದವಸಧಾನ್ಯದ ಸಗಟು ಮಾರಾಟ ವ್ಯವಸ್ಥೆಯ ಜೊತೆಗೆ ಸಹಕಾರಿ ಸಿದ್ಧಾಂತದ ಸಕ್ಕರೆ ಕಾರ್ಖಾನೆ, ಕಡಿಮೆ ದರದ ಶೇತಕರಿ (ರೈತ) ಸಹಕಾರಿ ಸಂಘದ ಔಷಧ ಅಂಗಡಿ, ಜವಳಿ ಮತ್ತು ಗೊಬ್ಬರ, ಬೀಜದ ಸವಲತ್ತುಗಳು ಗಮನ ಸೆಳೆದಿದ್ದವು. ಮಹಾರಾಷ್ಟ್ರದ ದೇಶಭಕ್ತ ಉಪಾಧಿಯ ರತ್ನಪ್ಪಣ್ಣ ಕುಂಬಾರ ಅವರು ಸಹಕಾರಿ ರಂಗದ ನಕ್ಷತ್ರವಾಗಿ ಮಿನುಗುತ್ತಿದ್ದ ಕಾಲವದು. ಆಗ ನಮ್ಮವರೇ ಆದ ಸಂಕೇಶ್ವರದ ಅಪ್ಪಣ್ಣಗೌಡರು, ಬೆಲ್ಲದಬಾಗೇವಾಡಿಯ ವಿಶ್ವನಾಥಕತ್ತಿ ಮತ್ತು ಅಮ್ಮಿನಬಾವಿಯ ಬಸಗೌಡ ಪಾಟೀಲರು ಜನಸಮುದಾಯದ ಆಶೋತ್ತರಗಳಿಗೆ ಆಧಾರವಾಗಿದ್ದರು. ಈ ಹಿರಿಯ ಸಹಕಾರಿ ಧುರೀಣರು ಗಡಿಭಾಗದ ಸಹಕಾರಿ ಕ್ಷೇತ್ರವನ್ನು ವಿಸ್ತರಿಸಿದರು. ಆದರೆ ಮುಂದಿನ ಪೀಳಿಗೆಯ ನಾಯಕರಲ್ಲಿ ಜನಪರ ಕಾರ್ಯದ ದಕ್ಷತೆಯ ಕೊರತೆ ಎದ್ದು ಕಾಣುತ್ತದೆ. ಅವರು ಆ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಲಿಲ್ಲ.

ಸಹಕಾರಿ ಕ್ಷೇತ್ರವು ಉದ್ಯಮದಂತೆ ಬೆಳೆಯಿತು. ಸರ್ವ ಪಕ್ಷಗಳ ರಾಜಕೀಯ ಮುಖಂಡರ ಖಾಸಗಿ ಉದ್ಯಮಗಳೂ ವೃದ್ಧಿಸಿದವು. ಸರಿ ಒಪ್ಪೋಣ, ಇದನ್ನು ಸಕ್ಕರೆ ಉದ್ಯಮದ ಅಭಿವೃದ್ಧಿ ಎಂದೇ ಭಾವಿಸೋಣ. ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ಮತ್ತು ಖಾಸಗಿ ಕ್ಷೇತ್ರದಇಪ್ಪತ್ತಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಅವುಗಳಿಗೆ ಡಿಸ್ಟಿಲರಿ ಘಟಕಗಳೂ ಸೇರಿರುವುದರಿಂದ ಅವು ಲಾಭದಲ್ಲಿರದೆ ಹಾನಿ ಅನುಭವಿಸುತ್ತವೆಯೇ? ಆದರೂ ರೈತನ ಬದುಕು ಹಸನಾಗಿಲ್ಲ. ಹಲವು ಕಾರ್ಖಾನೆಗಳ ಹಿಂಬಾಕಿ ಇನ್ನೂ ಬಂದಿಲ್ಲವೆಂಬ ಆರೋಪ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತನಿಗೆ ಸಾಲ ಕೊಡುವವರು ರಾಜಕೀಯ ಪುಢಾರಿಗಳ ಜೊತೆ ಗುರುತಿಸಿಕೊಳ್ಳುವ ಬಡ್ಡಿದಂಧೆ ನಡೆಸುವವರು. ಹೀಗಾಗಿ ರೈತನ ಬದುಕು ಕತ್ತಲೆಗೆ ಸರಿದಿದೆ. ಸಹಕಾರಿ ತತ್ವವು ನನಸಾಗದೇ ಈ ಕ್ಷೇತ್ರ ರಾಜಕೀಯ ಮೇಲಾಟಗಳ ಅಖಾಡ ಆಗಿರುವುದು ದುರಂತವೇ ಸರಿ.

ಇವು ಯಾವುವನ್ನೂ ಬಹಿರಂಗವಾಗಿ ಪ್ರಶ್ನಿಸಲು ಸಾಧ್ಯವಿಲ್ಲದಂತಹ ವಾತಾವರಣವಿದೆ. ಬೆಂಕಿಯನ್ನು ಉಡಿಯಲ್ಲಿ ಕಟ್ಟಿಕೊಂಡಂತೆ. ಗಾಳಿಯ ರಭಸಕ್ಕೆ ದೇಹವೇ ಹೊತ್ತಿಕೊಳ್ಳುವ ಭಯ. ಇತ್ತೀಚೆಗೆ ಬಸ್ಸಿನಲ್ಲಿ ಒಬ್ಬ ರೈತ ಸಿಕ್ಕ. ಕಬ್ಬು ಕಟಾವು ನಡೆದಿರುವುದನ್ನು ಹೇಳಿದ. ನಿರ್ದಿಷ್ಟ ಕಾರ್ಖಾನೆಗೆ ಕಳಿಸದಿದ್ದರೆ ಎದುರಾಗುವ ಆತಂಕದ ಛಾಯೆ ಅವನ ಮೊಗದಲ್ಲಿತ್ತು. ಒಂದುಪಕ್ಷ ಹಿಂಬಾಕಿ ಬರದೇ ಇದ್ದರೂ ತಾನು ಅದೇ ಫ್ಯಾಕ್ಟರಿಗೆ ಕಬ್ಬು ಕಳಿಸಲೇಬೇಕಾದ ಅನಿವಾರ್ಯವನ್ನು ಹೇಳಿ ಭೀತಿಯನ್ನು ವ್ಯಕ್ತಪಡಿಸಿದ. ಇಂಥ ಒತ್ತಡದ ಬದುಕು.

ಶಾಸಕರು ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಈ ನಾಯಕರು ಮಠ, ಮಂದಿರಗಳಿಗೆ ನೀಡುತ್ತಾರೆ. ಇದರ ಹಿಂದೆಯೂ ಒಂದು ರಾಜಕೀಯ ತಂತ್ರಗಾರಿಕೆಯಿದೆ. ಜನಸಮುದಾಯವು ತಮ್ಮನ್ನು ಯಾವತ್ತೂ ಪ್ರಶ್ನಿಸದೆ ಸುಮ್ಮನಿರಲೆಂಬ ಹುನ್ನಾರವು ಇದರ ಆಳದಲ್ಲೆಲ್ಲೋ ಮನೆ ಮಾಡಿದೆ. ಜಡ್ಡುಗಟ್ಟಿದ ಸನಾತನ ಪರಂಪರೆಯ ಚೌಕಟ್ಟಿನಲ್ಲೇ ಆತ ಬದುಕಬೇಕು. ಅವನಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಧರ್ಮ ಬೆಳೆಯಬಾರದು, ನವ ಆಲೋಚನಾ ಕ್ರಮ ವೃದ್ಧಿಸಬಾರದೆಂದು ರಾಜಕಾರಣಿಗಳು ಬಯಸುತ್ತಾರೆ. ಜನರ ಮನೋಭಾವದಲ್ಲಿ ಗುಣಾತ್ಮಕ ಬದಲಾವಣೆಯನ್ನು ಅವರು ಬಯಸುವುದಿಲ್ಲ. ಸಾಂವಿಧಾನಿಕ ಸಂಸ್ಥೆಗಳ ಹೊಣೆಯ ಅರಿವು ಜನಸಾಮಾನ್ಯನಿಗೆ ಆಗಕೂಡದು ಹಾಗೂ ಸಾಧ್ಯವಾದರೆ ಜನರು ತಮ್ಮನ್ನು ವ್ಯಕ್ತಿಪೂಜೆಯ ರೂಪದಲ್ಲಿಯೇ ಕಾಣಬೇಕೆಂದು ಹಪಹಪಿಸುತ್ತಾರೆ.

ಇದರಡಿಯಲ್ಲಿ ಆತ ಅಧಿಕಾರದ ಚುಕ್ಕಾಣಿ ಹಿಡಿಯಲು ಸನ್ನದ್ಧನಾಗುತ್ತಾನೆ. ‘ರಾಜಸತ್ತೆ’ಗಾಗಿ ಅವರದೇ ಒಂದು ಫಾರ್ಮುಲಾ ಶೋಧಗೊಂಡಿದೆ. ಅದುವೇ ಸಿಂಡಿಕೇಟ್ ರಾಜಕಾರಣ! ಇದರ ಬಗ್ಗೆ ಹಲವು ಬಾರಿ ಮಾಧ್ಯಮದಲ್ಲಿ ಚರ್ಚೆಯಾಗಿರುವುದುಂಟು. ಪರಸ್ಪರ ತಿಳಿವಳಿಕೆ, ಸಹಕಾರದ ಮೂಲಕ ಪಕ್ಷಭೇದ ಮರೆತು ಗೆಲುವಿಗೆ ನೆರವಾಗುವುದು. ಇದು ಅಧಿಕಾರ ಕೇಂದ್ರಿತ. ಅದರಂತೆ ಯೋಜನೆ ಸಿದ್ಧಪಡಿಸುವುದು ಮತ್ತು ಅನುಷ್ಠಾನಕ್ಕೆ ತರುವುದು ಅದರ ಮೂಲ ಉದ್ದೇಶ. ಇದಕ್ಕಾಗಿ ದೊಡ್ಡ ದೊಡ್ಡ ನಾಯಕರುಗಳಲ್ಲಿ ಆಗಾಗ ‘ಆಪಸಾತಿ’ನಲ್ಲಿ (ಪರಸ್ಪರ) ಸ್ನೇಹಕೂಟಗಳು ಜರುಗುತ್ತಿರುತ್ತವೆ ಎಂಬ ಪಿಸುಮಾತುಗಳು ಸಾಂದರ್ಭಿಕವಾಗಿ ಅನುರಣಿಸುತ್ತಿರುತ್ತವೆ.

ನಾಡಿಗೆ ಅನೇಕ ಗಡಿಗಳಿದ್ದರೂ ಬೆಳಗಾವಿ ಅಂದಾಕ್ಷಣ ಕನ್ನಡ, ಮರಾಠಿ ಭಾಷಿಕ ಹಿನ್ನೆಲೆಯಲ್ಲಿ ಈ ಪ್ರದೇಶವು ಮಹತ್ವವನ್ನು ಪಡೆಯುತ್ತಲೇ ಬಂದಿದೆ. ಕಳೆದ ದಶಕದಲ್ಲಿ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದು ಬಂದಿದೆ. ಪ್ರಮುಖ ರಸ್ತೆಗಳು ಚೊಕ್ಕಗೊಂಡು ವಿದ್ಯುತ್ ದೀಪಗಳಿಂದ ನಳನಳಿಸಿದವು. ಅವುಗಳನ್ನು ಹೊರತುಪಡಿಸಿ ಇತರ ಬಡಾವಣೆಗಳ ಸ್ಥಿತಿಯಲ್ಲಿ ಅಂಥ ಪವಾಡಸದೃಶ ಬದಲಾವಣೆಗಳೇನೂ ಆಗಿಲ್ಲ. ಹತ್ತು– ಹನ್ನೆರಡು ವರ್ಷಗಳ ಹಿಂದೆ ಏಕಾಏಕಿ ವಿಧಾನ ಮಂಡಲ ಅಧಿವೇಶನಕ್ಕೆ ಚಾಲನೆ ಸಿಕ್ಕಿತು. ಇದು ಕೇವಲ ಕನ್ನಡತನದ ವೃದ್ಧಿಗಷ್ಟೇ ಕಾರಣವಾಗಲಿಲ್ಲ. ಪ್ರತಿವರ್ಷದ ಚಳಿಗಾಲದ ಅಧಿವೇಶನಕ್ಕೂ ಸಾಕ್ಷಿಯಾಗುತ್ತಾ ಬಂತು, ಬರುತ್ತಿದೆ. ಇದಕ್ಕೆ ನೆರವಾದವರು ಅಭಿನಂದನಾರ್ಹರು. ಅದರಿಂದ ಪಕ್ಷಗಳು ಯಾವುದೇ ಇದ್ದರೂ ಸುಂದರ ವಾಸ್ತುವಿನ ‘ಸುವರ್ಣಸೌಧ’ ನಿರ್ಮಾಣಗೊಂಡಿತು.

ಗಡಿಭಾಗದಲ್ಲಿ ಜವಳಿ ಉದ್ಯಮಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಮಹಿಳೆಯರಿಗೆ ಒಂದಿಷ್ಟು ಉದ್ಯೋಗ ಸೃಷ್ಟಿಯಾಗಿದೆ. ಕೊಂಚ ಭೌತಿಕವಾಗಿ ಬೆಳವಣಿಗೆಯೇನೋ ಸರಿ. ಆದರೆ ಬೌದ್ಧಿಕತೆಯತ್ತಲೂ ಹೆಜ್ಜೆ ಇಡಬೇಕಾಗುತ್ತದೆ. ಒಂದು ಪ್ರದೇಶದ ಗುಣಾತ್ಮಕ ಅಂಶವನ್ನು ಅದರ ಬೌದ್ಧಿಕತೆಯಿಂದ ಅಳೆಯಲಾಗುತ್ತದೆ.

ಗಡಿಯಂಚಿನ ತಾಲ್ಲೂಕುಗಳಲ್ಲಿಯ ದಲಿತರು ಫುಲೆ, ಶಾಹುಮಹಾರಾಜರು, ಅಂಬೇಡ್ಕರ್‌ ಹಾಗೂ ಇದೇ ಭಾಗದ ದೇವರಾಯ ಇಂಗಳೆಯವರು ಹಾಕಿಕೊಟ್ಟ ವೈಚಾರಿಕ ವಾರಸುತನವನ್ನು ಮುಂದುವರಿಸಿ ಮುಖ್ಯವಾಹಿನಿಗೆ ಸೇರಿದ್ದು ವಿಶೇಷ. ಆದರೆ ಇದು ಇಡಿಯಾಗಿ ವಿಸ್ತರಣೆಗೊಳ್ಳದಿರುವುದು ಸಹ ದುರಂತ. ಆದರೆ ಇತ್ತೀಚಿನ ಹಲವು ವರ್ಷಗಳಿಂದ ಜರುಗುತ್ತಿರುವ ಮೌಢ್ಯ ವಿರೋಧಿ ಆಂದೋಲನವು ಕಳೆದುಹೋದ ಆ ವಾರಸುದಾರಿಕೆ ಮರುಕಳಿಸುವ, ವಿಸ್ತರಿಸುವ ಭರವಸೆ ಮೂಡಿಸಿದ್ದು ಮಾತ್ರ ಅತ್ಯಂತ ಆಶಾದಾಯಕ ಬೆಳವಣಿಗೆಯೇ ಹೌದು.

ಲೇಖಕ: ಪ್ರಾಧ್ಯಾಪಕ ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT