ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಕೌಶಲದ ಕೊರತೆ: ನಿವಾರಣೆಯ ತುರ್ತು

ಕೆಲಸ ಪಡೆಯಲು ಪದವಿ ಅಗತ್ಯವಾದರೂ ಇಂದಿನ ಪರಿಸ್ಥಿತಿಯಲ್ಲಿ ಅಷ್ಟುಮಾತ್ರ ಸಾಲದು
Last Updated 26 ಮೇ 2022, 18:59 IST
ಅಕ್ಷರ ಗಾತ್ರ

ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಮೂಲಗಳಂತೆ, ದೇಶದಲ್ಲಿ 6,214 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ 29 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆದು, 15 ಲಕ್ಷ ಪದವೀಧರರು ಹೊರಬರುತ್ತಾರೆ. ಆದರೆ ಈ ವಿದ್ಯಾರ್ಥಿಗಳಲ್ಲಿ ಬಹುಮಂದಿಗೆ ಮಾರುಕಟ್ಟೆಯಲ್ಲಿರುವ ವಿವಿಧ ಉದ್ಯೋಗಗಳಿಗೆ ಅಗತ್ಯವಾದ ಕೌಶಲ, ಸಾಮರ್ಥ್ಯಗಳು ಇರುವುದಿಲ್ಲ ಎಂಬುದು ಬಹಳಷ್ಟು ಹಳೆಯ ದೂರು.

2005ರ ಸುಮಾರಿಗೆ, ಪ್ರತಿಷ್ಠಿತ ಮ್ಯಾನೇಜ್‍ಮೆಂಟ್ ಸಮಾಲೋಚನಾ ಸಂಸ್ಥೆ ‘ಮೆಕೆನ್ಸಿ’ ನಡೆಸಿದ ಸಮೀಕ್ಷೆಯಲ್ಲಿ ಶೇ 25ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳು ಇರುವುದು ತಿಳಿದುಬಂದಿತ್ತು. ಯಾವುದೇ ಉದ್ಯೋಗದಲ್ಲಿ ಕೆಲಸವೊಂದನ್ನು ಸಮರ್ಪಕವಾಗಿ, ಅಚ್ಚುಕಟ್ಟಾಗಿ ಮಾಡಿ ಮುಗಿಸಲು ಬೇಕಾದ ಜ್ಞಾನ, ತಂತ್ರ, ನೈಪುಣ್ಯದ ಗುಚ್ಛವೇ ಕೌಶಲ. ಅದು, ವ್ಯವಸ್ಥಿತವಾಗಿ ಕಲಿತು, ಬಳಕೆಯಿಂದ ರೂಢಿಸಿಕೊಂಡು, ಅಗತ್ಯಕ್ಕೆ ತಕ್ಕಂತೆ, ಕಾಲದಿಂದ ಕಾಲಕ್ಕೆ ಉನ್ನತೀಕರಣ ಮಾಡಿಕೊಳ್ಳಬೇಕಾದ ಸಾಮರ್ಥ್ಯ.

ದೆಹಲಿ ಮೂಲದ ‘ಆಸ್ಪೈರಿಂಗ್ ಮೈಂಡ್ಸ್’ ಸಂಸ್ಥೆ 2019ರಲ್ಲಿ ಹೊರತಂದ ‘ನ್ಯಾಷನಲ್ ಎಂಪ್ಲಾಯಬಿಲಿಟಿ ರಿಪೋರ್ಟ್’ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮತ್ತಷ್ಟುವಿವರವಾದ ಮಾಹಿತಿಗಳನ್ನು ನೀಡುತ್ತದೆ. ಎಂಜಿನಿಯ ರಿಂಗ್ ಪದವಿ ಪಡೆದು ಕಾಲೇಜಿನಿಂದ ಹೊರಬರುವವರು ತೆಗೆದುಕೊಳ್ಳುವ ಪರೀಕ್ಷೆಯ ಆಧಾರದ ಮೇಲೆ ಸಿದ್ಧವಾಗಿರುವ ಈ ವರದಿಯಲ್ಲಿ, ನಮ್ಮ ವಿದ್ಯಾರ್ಥಿಗಳ ಕೌಶಲದ ಮಟ್ಟದ ಬಗ್ಗೆ ಅನೇಕ ಮಾಹಿತಿಗಳಿವೆ. ಉದಾಹರಣೆಗೆ, ಸಾಫ್ಟ್‌ವೇರ್ ಕ್ಷೇತ್ರದ ಸ್ಟಾರ್ಟ್‌ಅಪ್ ಕಂಪನಿಗಳಲ್ಲಿ ಕೆಲಸ ಮಾಡಲು ಬೇಕಾದ ಕೌಶಲವಿರುವುದು ಶೇ 3.8ರಷ್ಟು ವಿದ್ಯಾರ್ಥಿಗಳಲ್ಲಿ ಮಾತ್ರ.

ಇತ್ತೀಚಿನ ಪ್ರಮುಖ ಕ್ಷೇತ್ರಗಳಾದ ಕೃತಕ ಬುದ್ಧಿಮತ್ತೆ, ಮಶೀನ್ ಲರ್ನಿಂಗ್, ಡೇಟಾ ಎಂಜಿನಿಯರಿಂಗ್, ಮೊಬೈಲ್ ತಂತ್ರಜ್ಞಾನ ಮುಂತಾದವುಗಳಲ್ಲಿನ ಉದ್ಯೋಗಕ್ಕೆ ಅಗತ್ಯವಾದ ಸಾಮರ್ಥ್ಯವಿರುವುದು ಶೇ 3ರಷ್ಟುವಿದ್ಯಾರ್ಥಿಗಳಲ್ಲಿ. ಶೇ 60ರಷ್ಟು ವಿದ್ಯಾರ್ಥಿಗಳು ಕೆಲಸ ಕಲಿಸುವ ಯಾವುದೇ ರೀತಿಯ ಇಂಟರ್ನ್‌ಶಿಪ್ ಮಾಡುವುದಿಲ್ಲ. ಈ ಕೌಶಲದ ಕೊರತೆಯು ಮಾಹಿತಿ ತಂತ್ರಜ್ಞಾನ ಮತ್ತು ಅದನ್ನು ಆಧರಿಸಿದ ಸೇವಾ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೈಗಾರಿಕೋತ್ಪಾದನೆ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಸಂರಕ್ಷಣೆ, ಔಷಧೋತ್ಪಾದನೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಇದೆ. ಈ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು ₹ 150 ಲಕ್ಷ ಕೋಟಿ ನಷ್ಟ ಸಂಭವಿಸುವುದಾಗಿ ಆ್ಯಕ್ಸೆಂಚರ್ ಸಂಸ್ಥೆಯ ವರದಿ ತಿಳಿಸುತ್ತದೆ.

‘ಕ್ವಕ್‍ಕ್ವಾರೆಲಿ ಸೈಮಂಡ್ಸ್’ (ಕ್ಯು.ಎಸ್) ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ವಿಶ್ವವಿದ್ಯಾಲಯಗಳ ಮೌಲ್ಯಮಾಪನ ನಡೆಸಿ, ಗುಣಮಟ್ಟವನ್ನು ಶ್ರೇಣೀಕರಿಸುವ ಸ್ವತಂತ್ರ, ಪ್ರತಿಷ್ಠಿತ ಸಂಸ್ಥೆ. ಪ್ರಪಂಚದ ವಿವಿಧ ದೇಶಗಳ 550 ವಿಶ್ವವಿದ್ಯಾಲಯಗಳ ಸಮೀಕ್ಷೆ ನಡೆಸಿದ ನಂತರ, ‘ಕ್ಯು.ಎಸ್ ಗ್ರ್ಯಾಜುಯೇಟ್ ಎಂಪ್ಲಾಯಬಿಲಿಟಿ- 2022’ ಎಂಬ ವರದಿಯನ್ನು ಈ ಸಂಸ್ಥೆಪ್ರಕಟಿಸಿದೆ. ಶಿಕ್ಷಣ ಮುಗಿಸಿ, ಉದ್ಯೋಗ ಕ್ಷೇತ್ರವನ್ನು ಪ್ರವೇಶಿಸುವವರ ಉದ್ಯೋಗಾರ್ಹತೆಯನ್ನು ಮಾಪನ ಮಾಡಿರುವ ಈ ವರದಿಯಲ್ಲಿ, ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕದ ಮಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ಆಫ್ ಟೆಕ್ನಾಲಜಿ, ಸ್ಟಾನ್‍ಫರ್ಡ್ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಿವೆ. ಮೊದಲ 10 ಸ್ಥಾನಗಳಲ್ಲಿ ಚೀನಾದ ಎರಡು ವಿಶ್ವವಿದ್ಯಾಲಯಗಳಿವೆ. ಮೊದಲ 100 ಸ್ಥಾನಗಳಲ್ಲಿ ಭಾರತದ ಯಾವ ಒಂದು ಉನ್ನತ ಶಿಕ್ಷಣ ಸಂಸ್ಥೆಯೂ ಇಲ್ಲ. 101- 200ರ ನಡುವೆ ಮುಂಬೈ, ದೆಹಲಿ, ಚೆನ್ನೈ ಐಐಟಿಗಳು, 201- 300ರ ನಡುವೆ ಖರಗಪುರ ಐಐಟಿ, ದೆಹಲಿ ವಿಶ್ವವಿದ್ಯಾಲಯ, ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಂಡುಬರುತ್ತವೆ. ಒಟ್ಟಾರೆಯಾಗಿ ಜಾಗತಿಕ ಮಟ್ಟದ ಈ ಪಟ್ಟಿಯಲ್ಲಿರುವುದು ಭಾರತದ 12 ಉನ್ನತ ಶಿಕ್ಷಣ ಸಂಸ್ಥೆಗಳು ಮಾತ್ರ.

ಹಾಗೆಂದ ಮಾತ್ರಕ್ಕೆ ಉಳಿದ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವುದಿಲ್ಲವೆಂದಲ್ಲ. ಪ್ರತಿವರ್ಷ ಪದವಿ ಪಡೆದು ಹೊರಬರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ, ಅವರ ಆಯ್ಕೆಯ ಕ್ಷೇತ್ರದಲ್ಲಿ ಉದ್ಯೋಗ ದೊರೆಯುವುದು ಸುಮಾರು3 ಲಕ್ಷ ಮಂದಿಗೆ ಮಾತ್ರ. ಉಳಿದ 12 ಲಕ್ಷಮಂದಿ ಅಗತ್ಯ ಕೌಶಲಗಳ ತೀವ್ರಕೊರತೆಯಿಂದ, ಅವರ ಶಿಕ್ಷಣಕ್ಕೆ ಸಂಬಂಧಿಸಿರದ ಯಾವುದೋ ಒಂದು ಉದ್ಯೋಗವನ್ನು ಅರಸುವ ಅನಿವಾರ್ಯ ಒದಗುತ್ತದೆ. ಆರ್ಥಿಕತೆ ಮತ್ತು ಮಾನವ ಸಂಪನ್ಮೂಲಗಳ ದೃಷ್ಟಿಯಿಂದ ಇದು ಬಹು ದೊಡ್ಡ ನಷ್ಟ ಎಂಬುದು ಪರಿಣತರ ಅಭಿಪ್ರಾಯ.

ಕೆಲಸವೊಂದನ್ನು ಪಡೆಯಲು ವಿಶ್ವವಿದ್ಯಾಲಯದ ಪದವಿಯು ಅಗತ್ಯವಾದರೂ ಇಂದಿನ ಪರಿಸ್ಥಿತಿಯಲ್ಲಿ ಅಷ್ಟುಮಾತ್ರ ಸಾಲದು. ಶಿಕ್ಷಣ ನೀಡುವ ಜ್ಞಾನವನ್ನು ಅನ್ವಯಿಸಬಲ್ಲ, ವಿಶ್ಲೇಷಣಾತ್ಮಕವಾಗಿ ಚಿಂತಿಸಬಲ್ಲ, ಸವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಿಡಿಸಬಲ್ಲ, ಹೊಸ ಪರಿಸ್ಥಿತಿಗೆ ಹೊಂದಿಕೊಂಡು ತಂಡದಲ್ಲಿ ಕೆಲಸಮಾಡಬಲ್ಲ ಸಾಮರ್ಥ್ಯಗಳು ಬಹು ಮುಖ್ಯ. ಇವುಗಳೊಡನೆ ಸಂವಹನ, ಸಹಯೋಗ, ನಾಯಕತ್ವ, ತಂತ್ರಜ್ಞಾನ ಪ್ರೀತಿ, ವಿವಿಧ ಕಾರ್ಯನಿರ್ವಹಣಾ ಸಾಮರ್ಥ್ಯ, ಸಮಯ ನಿರ್ವಹಣೆ ಮುಂತಾದವು ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ನಿರ್ಧರಿಸುತ್ತವೆ. ಆದರೆ ಅವರಲ್ಲಿ ಇಂತಹ ಕೌಶಲಗಳನ್ನು ಬೆಳೆಸುವ ದಿಕ್ಕಿನಲ್ಲಿ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಆದರೆ ಇದೀಗ ಅನಿವಾರ್ಯವಾಗಿ ಈ ಕೊರತೆ ನಿವಾರಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ ಬಂದಿದೆ.

2020ರಲ್ಲಿ ಕೇಂದ್ರ ಮಂತ್ರಿಮಂಡಲದ ಅನುಮೋದನೆ ಪಡೆದು, ನಿಧಾನವಾಗಿ ಅನುಷ್ಠಾನಗೊಳ್ಳುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೃತ್ತಿಪರ, ಉದ್ಯೋಗಾರ್ಹ, ಉದ್ಯಮಶೀಲ ಕೌಶಲಗಳನ್ನುವಿದ್ಯಾರ್ಥಿಗಳಲ್ಲಿ ಬೆಳೆಸಿ, ಪೋಷಿಸಿ, ಸಂವರ್ಧಿಸುವ ಸವಾಲಿಗೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಪದವಿ ಪಡೆಯುವ ಮುನ್ನವೇ, ವಿವಿಧ ಅವಧಿಗಳಲ್ಲಿ ಪ್ರಮಾಣೀಕೃತ ಕೌಶಲಗಳೊಂದಿಗೆ ಹೊರಬರುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ. ನಿರ್ಗಮಿಸಿದ ಹಂತದಿಂದಲೇ ಮುಂದೆ ಶಿಕ್ಷಣವನ್ನು ಮುಂದುವರಿಸುವ ಅವಕಾಶವನ್ನು ನೀಡಲಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ‘ಇಂಟರ್ನ್‌ಶಿಪ್’ಗೆ ಅವಕಾಶವನ್ನುಸೃಷ್ಟಿಸಲಾಗುತ್ತದೆ.

ಕೈಗಾರಿಕಾ ಪರಿಣತರು, ಉದ್ಯಮದ ನಾಯಕರನ್ನು, ‘ಪ್ರೊಫೆಸರ್ಸ್ ಆಫ್ ಪ್ರ್ಯಾಕ್ಟೀಸ್’ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಿಗೆ ಆಹ್ವಾನಿಸಿ ಬೋಧನೆಗೆ ಅವಕಾಶ ನೀಡಿ ಅವರ ಅನುಭವ, ಪರಿಣತಿಗಳನ್ನು ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ವೃತ್ತಿಶಿಕ್ಷಣವನ್ನು ಶಾಲಾ ಕಾಲೇಜುಗಳ ಪಠ್ಯ ವಿಷಯಗಳ ಭಾಗವನ್ನಾಗಿ ಮಾಡುವುದು ಮತ್ತೊಂದು ಮಹತ್ವದ ಹೆಜ್ಜೆ ಎನ್ನಲಾಗಿದೆ. ಇದರ ಫಲವಾಗಿ 2025ರ ಅಂತ್ಯದೊಳಗಾಗಿ 2.80 ಲಕ್ಷ ಶಾಲೆಗಳು ಮತ್ತು 40 ಸಾವಿರ ಕಾಲೇಜುಗಳಲ್ಲಿ ಮಾರುಕಟ್ಟೆಯಲ್ಲಿನ ಉದ್ಯೋಗಗಳಿಗೆ ಅಗತ್ಯವಾದ ಕೌಶಲಗಳು ಮತ್ತು ತರಬೇತಿ ದೊರೆಯುವ ಪ್ರತೀಕ್ಷೆಯಿದೆ. ಒಟ್ಟಾರೆಯಾಗಿ ಡಿಜಿಟಲ್ ಸಾಮರ್ಥ್ಯ, ಉದ್ಯೋಗಾಧಾರಿತ ಕೌಶಲಗಳು ಮತ್ತು ವಿದ್ಯಾರ್ಥಿಗಳಿಗೆ ಉದ್ಯಮ ನಾಯಕರ ಮಾರ್ಗದರ್ಶನವು ಭವಿಷ್ಯದ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಲಿವೆ ಎಂಬುದು ಪರಿಣತರ ನಿರೀಕ್ಷೆ.

ಈ ನಡುವೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಹಲವಾರು ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಕೌಶಲ ಸಂವರ್ಧನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸ್ತಾಪಿಸಿರುವ ಬದಲಾವಣೆಗಳನ್ನು ತರಲು ಪ್ರಾರಂಭಿಸಿವೆ. ಪ್ರವೇಶಾತಿಗೆ ಸಂಬಂಧಿಸಿದಂತೆ ಅವು ನೀಡುತ್ತಿರುವ ಜಾಹೀರಾತುಗಳಲ್ಲಿ ಈ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಆದರೆ ಇವು ಕೇವಲ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಾಧನಗಳಾಗದೆ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಬೇಕು ಮತ್ತು ಅವು ತರುವ ಸಕಾರಾತ್ಮಕ ಬದಲಾವಣೆಗಳ ಫಲ ದೇಶದ ಎಲ್ಲ ವಿದ್ಯಾರ್ಥಿಗಳಿಗೆ ದೊರೆಯುವಂತೆ ಆಗಬೇಕು.

ಕೌಶಲದ ಕೊರತೆಯ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿರುವ ಎರಡು ದೇಶಗಳ ಮಾದರಿಗಳು ನಮ್ಮ ಮುಂದಿವೆ. ಜರ್ಮನಿಯ ಅಸಾಧಾರಣ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯದ ಬೆನ್ನೆಲುಬಾಗಿರುವುದು ಆ ದೇಶದ ಅಪ್ರೆಂಟಿಸ್‍ಶಿಪ್ ಯೋಜನೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕೈಗಾರಿಕೆಗಳಲ್ಲಿ ಕಸುಬು ಕಲಿಯುವ ವಿಶಿಷ್ಟ ವ್ಯವಸ್ಥೆ. ಕೈಗಾರಿಕೆಯ ಅಗತ್ಯಗಳು ಮತ್ತು ವಿದ್ಯಾರ್ಥಿಗಳ ಕೌಶಲಗಳ ನಡುವೆ ಅತ್ಯುತ್ತಮ ಸಮನ್ವಯವನ್ನು ಸಾಧಿಸಿರುವ ಜಪಾನ್ ದೇಶದ ಶೈಕ್ಷಣಿಕ ವ್ಯವಸ್ಥೆ ಎರಡನೆಯ ಮಾದರಿ. ಈ ಎರಡನ್ನೂ ಭಾರತ ಸರ್ಕಾರ ಗಮನಿಸಬೇಕೆಂಬುದು ತಜ್ಞರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT