‘ನಾ ಅದಕ್ಕನ ಒಂದು ಉಪಾಯ ಸಲಹೆ ಮಾಡೀ, ಹೈಕಮಾಂಡಿಗೆ ಮುಚ್ಚಿದ ಲಕೋಟೆ ಕೊಟ್ಟು ಬಂದೀನಿ. ಏನಪಾ ಅಂದರ... ಒಂದೊಂದು ಇಲಾಖೆಗೂ ಮಂತ್ರಿ, ಉಪಮಂತ್ರಿ, ಉಪೋಪಮಂತ್ರಿ, ಕಿರುಮಂತ್ರಿ ಅಂತ ನಾಕೈದು ಕುರ್ಚಿ ಹಾಕಿ, ಸೀನಿಯಾರಿಟಿ ಮೇಲೆ ಕುಂಡ್ರಿಸಬೇಕು. ಯಾವ್ಯಾವ ಫೈಲಿಗೆ ಯಾರು ಸಹಿ ಹಾಕಬಕು ಅಂತ ಮಾರ್ಕ್ ಮಾಡಿ, ನಿಮ್ಮ ನಿಮ್ಮ ಎಮ್ಮಿ ಹಾಲು ನೀವೇ ಹಿಂಡುಕೋರಿ ಅಂತ ಬಿಡಬೇಕು. ಒಬ್ಬರು ಇನ್ನೊಬ್ಬರ ಎಮ್ಮಿ ಹಾಲು ಹಿಂಡೂ ಹಂಗಿಲ್ಲ. ಎಲ್ಲಾ ಶಾಸಕರಿಗೂ ಒಂದಲ್ಲ ಒಂದು ಮಂತ್ರಿಕುರ್ಚಿ, ಹಾಲುಹಿಂಡೂ ಎಮ್ಮಿ, ಗೂಟದ ಕಾರು ಸಿಗತಾವು. ಭಿನ್ನಾಭಿಪ್ರಾಯನೇ ಇರಂಗಿಲ್ಲ... ಎಲ್ಲಾರೂ ಅಗದಿ ಭಯಂಕರವಾಗಿ ಜನತಾ ಜನಾರ್ದನ ಸೇವಾ ಮಾಡತಾರ... ಹೌದಿಲ್ಲೋ’.