ಸರ್ಕಾರಿ ಇಲಿ-ಹೆಗ್ಗಣಗಳು ದಗಾ ಹಾಕಿದ ದುಡ್ಡಿನ ಪಟ್ಟಿ ಮಾಡ್ತಾ ‘ನೀವೇನಾದ್ರೂ ಕಾಸು ಕೊಟ್ಟಿದ್ರಾ?’ ಅಂತ ಕೇಳಿ ಬರಕತಿದ್ರು. ಲಾರಿ ಸೈಜಿನ ಕಾರುಗಳು ದಾತರಿಲ್ದೆ ಬಿದ್ದಿದ್ದೋ. ರೋಡಲ್ಲಿ ಬಿದ್ದಿದ್ದ ನೋಟಿನ ಕಟ್ಟುಗಳ ಪರ ಸೊತ್ತು ಪಾಷಾಣ ಅಂತ ಯಾರೂ ಮುಟ್ಟತಿರನಿಲ್ಲ.
ಎಪಿಎಂಸಿ ಧಣಿಗಳು ರೈತರಿಗೆ ಕಾಲು ಮುಗಿದು, ಬೆಳೆಗೆ ಜಾಸ್ತಿ ದುಡ್ಡು ತಕ್ಕಳಿ ಅಂತ ಅಟಕಾಸ್ಕತಿದ್ರು. ಡ್ರಗ್ ತಕ್ಕಬತ್ತಿದ್ದ ಪಾರಿನ್ ಮಾವಗೋಳು ತಪ್ಪಾಗ್ಯದೆ ಕ್ಸಮಿಸಿ ಅಂತ ಗೋಳುಯ್ಯತಿದ್ದೋ! ಜನ ಭಾರಿ ಸತುವಂತರಾಗಿಬುಟ್ಟಿದ್ರು!
ಅಷ್ಟರಲ್ಲಿ ಮಿಲಿಟ್ರಿಯೋರು ಬಂದು ನನ್ನ ಬಾಯಿಗೆ ಮೀಟರ್ ಮಡಗಿ ‘ಸಾರ್ ಜೀರೊ ಅದೆ’ ಅಂದು ಜುಲುಮೇಲಿ ವ್ಯಾನು ಹತ್ತಿಸಿಗ್ಯಂಡರು. ಒಳಗೆ ತುರೇಮಣೆ, ಯಂಟಪ್ಪಣ್ಣ, ಚಂದ್ರು, ಗುಡ್ಡೆ, ದುಬ್ಬೀರ, ಶಂಕ್ರಿ, ಚಂಬಸ್ಯ, ಬೆಕ್ಕಣ್ಣ ಕುಂತುದ್ದರು.
‘ಎಡವಟ್ಟಾಗಿ ಆಸೆ ನಿಗ್ರಹಿಸೋ ಲಸಿಕೆ ಕೊಟ್ಟುಬುಟ್ಟವ್ರಂತೆ. ಅದುಕ್ಕೆ ಎಲ್ಲಾರೂ ತ್ಯಾಗಜೀವಿಗಳಾಗವ್ರೆ. ಸ್ವಾರ್ಥದ ರೀಡಿಂಗ್ ಕಡಮೆ ಇರೋರ್ಗೆ ಸಿಎಂ, ಡಿಸಿಎಂ, ಮಂತ್ರಿ ಮಾಡಾರಂತೆ. ನಿನ್ನ ಹೆಸರುಬಲಕೆ ಏನು ಬಂದದೋ!’ ಅಂತು ಯಂಟಪ್ಪಣ್ಣ. ‘ಈ ಗಾಳಿಗಂಟಲು ನನಗ್ಯಾಕೆ? ಮಂಡ್ಯಕ್ಕೆ ಮರಿಯೂಟಕ್ಕೆ ಹೋಗದದೆ. ನಾನು ಸಂದೇಗೆ ಬತ್ತೀನಿ. ಈಗ ಬುಟ್ಬುಡಿ, ನಾನೊಲ್ಲೆ’ ಅಂತ ಕೊಸರಾಡ್ತಿದ್ದೆ.