ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸೀಟ್ ಕಹಾನಿ!

Published 25 ಮಾರ್ಚ್ 2024, 22:39 IST
Last Updated 25 ಮಾರ್ಚ್ 2024, 22:39 IST
ಅಕ್ಷರ ಗಾತ್ರ

‘ಸಾ, ಮೆಟ್ರೊ ರೈಲಿನ ಹಳಿಗೆ ಬಿದ್ದು ಸಾಯೋರ ಸಂಖ್ಯೆ ಜಾಸ್ತಿಯಾಗ್ಯದಂತೆ. ಅದುಕ್ಕೆ ಸುರಕ್ಷತೆಗೆ ಅಂತ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಹಾಕ್ರಿ ಅಂತ ಒತ್ತಾಯ ಮಾಡ್ತಾವ್ರಂತೆ’ ಸುದ್ದಿ ಸ್ಫೋಟಿಸಿದೆ.

‘ಸಾ, ಈಗ ಬೇಕಾಗಿರದು ರೈಲಿನ ಪಿಎಸ್‍ಡಿ ಪ್ಲಾಟ್‌ಫಾರಂ ಡೋರಲ್ಲ, ಜನ ತೊಂದರೆ ಇಲ್ದಂಗೆ ಬದುಕೋ ಪೀಪಲ್ ಸೆನ್ಸಿಬಲ್ ಡೋರ್’ ಅಂದ ಚಂದ್ರು.

‘ಹಂಗಂದ್ರೇನ್ಲಾ?!’ ಅಂದ್ರು ಎಲ್ಲಾರೂ ಒಟ್ಟಿಗೆ.

‘ಈಗ ಸರ್ಕಾರ ಜನದ ಬಾಯಿಗೆ ನೀರು ಬುಡಕ್ಕಾಗದೆ ಮುಕ್ಕುರಿತಾ ಅದೆ. ಟ್ಯಾಂಕರಿನವರು ಜೈ ಜಲಮೇಜಯ ಅಂತ ಮನಿ ನೀರಾವರಿ ಕೆಲಸದಲ್ಲಿ ಬಿಜಿಯಾಗ್ಯವರೆ’ ನನ್ನ ವಿಚಾರಕ್ಕೆ ಎಲ್ಲಾರೂ ಹೌದು ಅಂದ್ರು.

‘ರಾಜಕಾರಣಿಗಳು ಅವರ ಸೀಟ್ ಕಹಾನಿಯ ಗಾಳಿಗಂಟಲಲ್ಲಿ ಏದುಸಿರು ಬುಡ್ತಾವ್ರೆ’ ಅಂದ ಚಂದ್ರು.

‘ಅಲ್ಲ ನೋಡ್ರಿ, ಮೂರೂ ಪಕ್ಷದ ಹಿರಿ ನಾಯಕರು ತಲೆಬುಂಡೆ ಬಲೀದೇ ಇರೋ ತಮ್ಮ ಚೊಟ್ಟುಗಳನ್ನ ಎಳಕ ಬಂದು ರಾಜಕೀಯದಾಟ ಆಡ್ಸೋ ತರದೂದಲ್ಲವ್ರೆ. ಇವರ ಅಡಾವುಡೀಲಿ ದೇಸ ಊರ್ಜಿತ ಆದದೋ ಏನೋ ಕಾಣೆ’ ಯಂಟಪ್ಪಣ್ಣ ನಿಟ್ಟುಸಿರು ಬುಡ್ತು.

‘ಯಂಟಪ್ಪಣ್ಣ ‘ನನಗೆ ಟಿಕೆಟ್ ಕೊಡಿ, ಇಲ್ಲ ನನ್ನೆಂಡ್ರಿಗೋ ಮಕ್ಕಳಿಗೋ ಟಿಕೆಟ್ ಕೊಡ್ಲಿಲ್ಲ ಅಂದ್ರೆ ನೋಡ್ರಿ ಆಮೇಲೆ’ ಅನ್ನೊಂತಾ ಧಮಕಿ ರಾಜಕಾರಣದ ಪ್ಯಾಥೆಟಿಕ್ ಶೇಮ್‌ಫುಲ್‌ ಡಿಸ್‍ಆನೆಸ್ಟಿ ಜನಕ್ಕೆ ಬೇಕಾಗಿಲ್ಲ. ಪೊಲಿಟಿಕಲ್ ಸ್ಮಾರ್ಟ್ ಡಿಪ್ಲೊಮಸಿ ಗೊತ್ತೇ ಇಲ್ವಾ ಇವರಿಗೆ ಅಂತ ಜನ ಮಾತಾಡಿಕ್ಯತಾವ್ರೆ’ ತುರೇಮಣೆಗೆ ಸಿಟ್ಟು ಬಂದಿತ್ತು.

‘ಎಲೆಕ್ಷನ್ ಮುಗಿಯಗಂಟ ಅವರವರೇ ಓಕಳಿ ಇಟ್ಟಾಡಿಸಿಕ್ಯತರೆ’ ಅಂತಂದೆ.

‘ವಿರೋಧಿಗಳನ್ನ ಬಲಿ ಹಾಕಿ ಜೈಲಿಗೆ ದಬ್ಬೋಕೆ ಅಂತ್ಲೆ ಇ.ಡಿ ಕ್ಯಾಶುಪತಾಸ್ತ್ರ, ಐ.ಟಿ ಗಲಾ ಪಕಡಾಸ್ತ್ರ ಪ್ರಯೋಗಾಯ್ತದೆ. ಇದು ಮನಿ ಮನಿ ಚೀಟ್ ಕಹಾನಿ ಕನ್ರೋ’ ತುರೇಮಣೆ ಮಾತಿಗೆ ಎಲ್ಲರೂ ‘ಹೇ ರಾಮ್!’ ಅಂತ ನಿಟ್ಟುಸಿರುಬುಟ್ಟೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT