‘ಏ ನೋಡಿಲ್ಲಿ... ನಾವು ಮಧ್ಯಮ ವರ್ಗದ ಮಂದಿ, ಮರ್ಸಿಡಿಸ್ ಬೆಂಜ್ ಕಾರು ಖರೀದಿ ಮಾಡೂದು ನನಗೂ ಸಾಧ್ಯವಿಲ್ಲ ಅಂತ ಗಡ್ಕರಿ ಮಾಮಾ ಹೇಳ್ಯಾನ. ಅಷ್ಟ್ ದೊಡ್ಡ ಮಂತ್ರಿಗೇ ಮರ್ಸಿಡಿಸ್ ತಗಳಾಕೆ ಆಗಂಗಿಲ್ಲ ಅಂದ್ರೆ ಅದೆಷ್ಟ್ ತುಟ್ಟಿ ಅಂತ’ ಬೆಕ್ಕಣ್ಣ ಸುದ್ದಿ ತೋರಿಸುತ್ತ ಲೊಚಗುಟ್ಟಿತು.
‘ಅಲ್ಲಲೇ... ಮೂರು ವರ್ಷದ ಕೆಳಗೆ ಚುನಾವಣೆ ಟೈಮಿನಾಗೆ ನಿಮ್ಮ ಗಡ್ಕರಿ ಮಾಮಾ ತನ್ನ ಆಸ್ತಿ ಸುಮಾರು 25 ಕೋಟಿ ಅಂತ ಡಿಕ್ಲೇರ್ ಮಾಡಿದ್ರು. ಕೋಟಿಗಟ್ಟಲೆ ರೊಕ್ಕ ಇರೋ ಅವರೇ ನಾವ್ ಮಧ್ಯಮ ವರ್ಗದ ಮಂದಿ ಅಂದ್ರ ನಮ್ಮಂಥಾ ಖರೇಖರೇ ಮಧ್ಯಮ ವರ್ಗದ ಮಂದಿ ಕಥಿ ಏನು?’ ನಾನೂ ಯೋಚನೆಗೆ ಬಿದ್ದೆ.
‘ಅದ್ಸರಿ... ಅದೇನೋ ಸಾಹಿತಿಗಳಲ್ಲಿ ಎರಡು ವರ್ಗ ಐತೆ ಅಂತ ಬೊಮ್ಮಾಯಿ ಅಂಕಲ್ಲು ಹೇಳ್ಯಾರ. ನಾನು ನೀನು ಸೇರಿ ಈ ಚುರುಮುರಿ ಬರೀತೀವಲ್ಲ, ನಾವು ಯಾವ ವರ್ಗ?’ ಬೆಕ್ಕಣ್ಣ ಪ್ರಶ್ನೆಯಿಟ್ಟಿತು.
‘ನಿಮ್ಮ ಅಂಕಲ್ಲು ಯಾವ ವರ್ಗ ಹೇಳ್ಯಾರೋ ಗೊತ್ತಿಲ್ಲ. ಆದರೆ ನಾವು ಅದ್ಯಾವ ವರ್ಗದಾಗೂ ಬರಂಗಿಲ್ಲ, ನಾವು ಶ್ರೀಸಾಮಾನ್ಯ ಸಾಹಿತಿಗಳು ಕಣಲೇ’.
‘ಹಂಗಾರೆ ದಸರಾ ಕವಿಗೋಷ್ಠಿಗೆ ನಮ್ಮನ್ನ ಯಾವತ್ತಿಗೂ ಕರೆಯಂಗೇ ಇಲ್ಲೇನು?’ ಬೆಕ್ಕಣ್ಣ ಬಲು ಹತಾಶೆಯಿಂದ ಕೇಳಿತು.