ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ರಾಜಕೀಯ ಅಂದ್ರೆ...

Published 15 ಮಾರ್ಚ್ 2024, 0:14 IST
Last Updated 15 ಮಾರ್ಚ್ 2024, 0:14 IST
ಅಕ್ಷರ ಗಾತ್ರ

‘ಮಹಾಲಕ್ಷ್ಮೀ... ಮಂಜಮ್ಮನ ಮನಿಗೆ ಬಾರಮ್ಮಾ...’ ಎಂದ ಗುಡ್ಡೆ ನಾಟಕೀಯವಾಗಿ.

‘ಯಾಕೋ ಗುಡ್ಡೆ, ನಮ್ಮನಿಗೆ ನೀನು ಮಹಾಲಕ್ಷ್ಮಿ ಕರೀತಿದೀಯ?’ ಮಂಜಮ್ಮ ನಗುತ್ತ ಕೇಳಿದಳು.

‘ಅದು ನಮ್ ಪಕ್ಷದ ಹೊಸ ಗ್ಯಾರಂಟಿ ಮಂಜಮ್ಮ, ವರ್ಷಕ್ಕೆ ಲಕ್ಷ ರೂಪಾಯಿ. ಓನ್ಲಿ ಫಾರ್ ಲೇಡೀಸ್’.

‘ಓ... ಅದಾ? ಅದು ನಿಮ್ ಪಕ್ಷ ಸೆಂಟ್ರಲ್‌ನಲ್ಲಿ ಅಧಿಕಾರಕ್ಕೆ ಬಂದಾಗ, ನಾವು ತಗಂಡಾಗ’.

‘ಅಂದ್ರೆ? ಈಗ ನಮ್ ಸ್ಟೇಟ್ ಗ್ಯಾರಂಟಿನೆಲ್ಲ ನೀನು ತಗಾತಿಲ್ವಾ? ಅಕ್ಕಿ, ಕರೆಂಟು, ದುಡ್ಡು ಎಲ್ಲ ತಗಂಡು ಮತ್ತೆ ನಮ್ ಪಕ್ಷದ ವಿರುದ್ಧಾನೇ ಮಾತಾಡ್ತೀಯ?’ ಗುಡ್ಡೆ ಆಕ್ಷೇಪಿಸಿದ.

‘ಲೇಯ್, ಸಾಕು ನಿಮ್ ಜಗಳ. ಇದು ಹರಟೆಕಟ್ಟೆ, ಇಲ್ಲಿ ರಾಜಕೀಯ ಬ್ಯಾಡ’ ದುಬ್ಬೀರ ರೇಗಿದ.

‘ಅಲೆ ಇವ್ನ, ರಾಜಕೀಯ ಮಾತಾಡಕೇ ನಾವು ಇಲ್ಲಿಗೆ ಬರೋದು, ನಮ್ಮಿಂದ್ಲೇ ಈ ಮಂಜಮ್ಮಗೆ ವ್ಯಾಪಾರ ಆಗೋದು’ ಗುಡ್ಡೆ ವಾದಿಸಿದ.

‘ಹೌದೌದು, ಭಾರೀ ವ್ಯಾಪಾರ ನಿಮ್ದು, ಬಾಕಿಪಟ್ಟಿ ಕೊಡ್ಲಾ?’ ಮಂಜಮ್ಮನಿಗೆ ಸಿಟ್ಟು ಬಂತು.

‘ಬಿಡು ಮಂಜಮ್ಮ, ಈಗ ಈ ಬ್ಯಾಡಗಿ ಮೆಣ್ಸಿನ್‌ಕಾಯಿ ಕತಿ ಏನಾತು?’ ತೆಪರೇಸಿ ವಿಷಯಾಂತರ ಮಾಡಿದ.

‘ಟಿಕೆಟ್ ಸಿಗದೇ ಇರೋರಿಗೆಲ್ಲ ಈಗ ಬ್ಯಾಡಗಿ ಮೆಣ್ಸಿನ್‌ಕಾಯಿ ಉರಿ ಕಿತ್ಕಂಬಿಟ್ಟಿದೆಯಂತೆ, ಮಂಜಮ್ಮನ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ’ ಗುಡ್ಡೆ ಕಿಸಕ್ಕೆಂದ.

‘ಟಿಕೆಟ್ ಸಿಗದಿದ್ರೆ ಪಕ್ಷದ ಕಚೇರಿಯ ಕಸ ಗುಡಿಸ್ತಾರೆ, ನೆಲ ಒರೆಸ್ತಾರೆ ಬಿಡು’ ಮಂಜಮ್ಮ ವಾದಿಸಿದಳು.

‘ಲೇಯ್ ಎಲ್ಲ ಪಕ್ಷದಲ್ಲೂ ಟಿಕೆಟ್ ಗದ್ಲ ಇದ್ದದ್ದೇ. ರಾಜಕೀಯ ಅಂದ್ರೆ ಹಂಗೇ. ಇವತ್ತು ಈ ಪಕ್ಷ, ನಾಳೆ ಇನ್ನೊಂದು ಪಕ್ಷ’ ಎಂದ ದುಬ್ಬೀರ.

‘ಹಾ... ಈಗ ನೀನ್ಯಾಕಪ ರಾಜಕೀಯ ಮಾತಾಡಿದೆ? ದಂಡ ಕಟ್ಟು, ಎಲ್ರಿಗೂ ಚಾ ಹೇಳು’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT