ನಿಜ, ಲಾಕ್ಡೌನ್ನಿಂದಾಗಿ ಎಲ್ಲ ತರಹದ ವೃತ್ತಿ, ವ್ಯಾಪಾರಗಳು ತತ್ತರಿಸಿಹೋಗಿವೆ. ಸರ್ಕಾರದ ಆರ್ಥಿಕ ಸ್ಥಿತಿಯೂ ಗಂಭೀರವಾಗಿಯೇ ಇದೆ. ಎಲ್ಲರ ಅಹವಾಲಿಗೆ ಓಗೊಡುವುದು ಅಸಾಧ್ಯದ ಮಾತು. ಈಗ ಕೊಟ್ಟಿರುವ ಪ್ಯಾಕೇಜ್ನಲ್ಲಿ ‘ಅಂತರದ ನಿಯಮ’ ಪಾಲನೆಯಾಗಿರುವುದನ್ನು ಗಮನಿಸಬೇಕು. ಕ್ಷೌರಿಕ, ಮಡಿವಾಳ ಸಮಾಜದ ಎಲ್ಲರಿಗೂ ಈ ಪ್ಯಾಕೇಜ್ ಅನ್ವಯವಾಗುವುದಿಲ್ಲ, ಅವರು ವೃತ್ತಿಯಲ್ಲಿದ್ದರಷ್ಟೇ ಅನ್ವಯವಾಗುತ್ತದೆ. ಕ್ಷೌರಿಕನೊಬ್ಬ ಅಂತರ ಕಾಯ್ದುಕೊಂಡು ವೃತ್ತಿ ಆರಂಭಿಸುವುದು ಆಸಾಧ್ಯ. ಹಾಗೆಯೇ ಬಳಸಿದ ಬಟ್ಟೆ ಶುಚಿ ಮಾಡಬೇಕಾದ ಮಡಿವಾಳರು. ಆಟೊ, ಟ್ಯಾಕ್ಸಿ ಚಾಲಕರು ಅಂತರ ಕಾಪಾಡುವುದಾದರೂ ಹೇಗೆ? ರೋಗ ಹರಡದಂತೆ ಎಚ್ಚರ ವಹಿಸಬೇಕಾಗಿರುವುದರಿಂದ ಎಲ್ಲ ವ್ಯಾಪಾರಗಳು, ಪೂರಕ ಉದ್ಯೋಗಗಳು ಕುದುರಲು ಒಂದಿಷ್ಟು ದಿನಗಳು ಬೇಕು. ಈ ಉದ್ಯೋಗಗಳು ಪೂರ್ಣಪ್ರಮಾಣದಲ್ಲಿ ಚಾಲನೆ ಪಡೆಯಲು ತಿಂಗಳುಗಳೇ ಹಿಡಿಯುತ್ತವೆ. ಹಾಗಾಗಿ ಸರ್ಕಾರ ಇವರಿಗೆ ಈ ಪ್ಯಾಕೇಜ್ ಘೋಷಿಸಿದೆ ಎಂಬುದನ್ನು ಎಲ್ಲರೂ ಸಮಾಧಾನ ಚಿತ್ತದಿಂದ ಅರ್ಥಮಾಡಿಕೊಳ್ಳಬೇಕು.