ಪರಭಾಷಿಕರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿಸಲು ಹೇರಿಕೆ ಎನಿಸದ, ಬೆನ್ನುತಟ್ಟುವ ರೂಪದ ಕ್ರಮಗಳನ್ನು ಕೈಗೊಳ್ಳಬೇಕು. ಇದು ಖಂಡಿತವಾಗಿಯೂ ತಮ್ಮದೇ ದ್ವೀಪಗಳಲ್ಲಿರುವ ಪರಭಾಷಿಕರನ್ನು ಕನ್ನಡದ ಮುಖ್ಯವಾಹಿನಿಗೆ ಸೆಳೆಯುವಲ್ಲಿ ಮತ್ತು ಬೆಂಗಳೂರಿನಲ್ಲಿ ಮತ್ತೊಮ್ಮೆ ಒಂದು ಜಾಗೃತ ನಾಗರಿಕ ಸಮಾಜ ಕಟ್ಟುವಲ್ಲಿ ನೆರವಾಗಬಲ್ಲದು. ಕನ್ನಡಿಗರು ತಮ್ಮ ನುಡಿಗಾಗಿ, ಹಕ್ಕುಗಳಿಗಾಗಿ ದನಿ ಎತ್ತುವುದು ಸರಿಯೆ. ಆದರೆ ಒಳಗಿನಿಂದ ಕನ್ನಡಿಗರನ್ನು ಗಟ್ಟಿಗೊಳಿಸುವ, ದೂರಗಾಮಿ ‘ಕಟ್ಟುವ’ ಯೋಜನೆಗಳಿಗೆ ಈ ಎಚ್ಚರವನ್ನು ಹರಿಸದಿದ್ದರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಆಕ್ರೋಶ ಹೊರಹಾಕುವ ಮಟ್ಟಕ್ಕಷ್ಟೇ ಸೀಮಿತವಾಗುತ್ತದೆ