ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ಮತಾಂತರ: ಸಾಮರಸ್ಯಕ್ಕೆ ಸಂಚಕಾರ

Last Updated 10 ಡಿಸೆಂಬರ್ 2021, 19:42 IST
ಅಕ್ಷರ ಗಾತ್ರ

ಅಸಮಾನತೆ, ಅನ್ಯಾಯ, ಅತೃಪ್ತಿ, ಅಸಮಾಧಾನದ ಜತೆಗೆ ಯಥಾಸ್ಥಿತಿವಾದವು ಕೂಡ ಮತಾಂತರಕ್ಕೆ ಅವಕಾಶ ಮಾಡಿಕೊಡುತ್ತದೆ. ಯಥಾಸ್ಥಿತಿ ವಾದವು ಪ್ರಗತಿಪರ ವಾದಕ್ಕೆ ಅವಕಾಶವನ್ನು ನಿರಾಕರಿಸುತ್ತದೆ. ಎಷ್ಟೇ ಅಸಮಾನತೆ, ಅನ್ಯಾಯ ಅತೃಪ್ತಿ ಇದ್ದರೂ ಅದನ್ನು ಪ್ರಶ್ನಿಸಬಾರದು ಎನ್ನುತ್ತದೆ ಸಂಪ್ರದಾಯವಾದ. ಜಗತ್ತಿನಲ್ಲಿ ಸಾಮ್ರಾಜ್ಯ ವಿಸ್ತರಣೆಗೆಂದು ಯುದ್ಧಗಳು, ರಕ್ತ‍ಪಾತಗಳು ನಡೆದಿವೆ. ಅದನ್ನು ಬಿಟ್ಟರೆ, ಧರ್ಮ ಮತ್ತು ದೇವರ ಹೆಸರಲ್ಲಿ ಹಿಂಸೆ, ದೌರ್ಜನ್ಯ, ಕಗ್ಗೊಲೆ ನಡೆದಿರುವ ಉದಾಹರಣೆಗಳು ಸಾಕಷ್ಟು ಇವೆ. ಆಗಾಗ ಅಲ್ಲಲ್ಲಿ ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯವನ್ನು ವಿರೋಧಿಸಿ ಪ್ರತಿಭಟನೆಗಳು ಜರುಗಿವೆ. ಪ್ರತೀ ಯುದ್ಧದ ಹಿಂದೆಯೂ ಸ್ವಾರ್ಥ ಇರುತ್ತದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಮತಾಂಧತೆಯು ಸೃಷ್ಟಿಯಾಗುತ್ತದೆ. ಯುದ್ಧದಂತೆ ಧಾರ್ಮಿಕ ಮತಾಂಧತೆಯೂ ಅತಿ ಅಪಾಯಕಾರಿ. ಅದರಿಂದ ಯಾರಿಗೂ ಲಾಭವಿಲ್ಲ. ಬದಲಾಗಿ ಆಸ್ತಿಪಾಸ್ತಿ ನಷ್ಟ, ಜೀವಹಾನಿ ಸಂಭವಿಸುತ್ತದೆ.

ಸಾಮಾಜಿಕ ಅಸಮಾನತೆಯನ್ನು ಇಲ್ಲವಾಗಿಸಲು ಹಲವಾರು ಹೋರಾಟಗಳು ನಡೆದಿವೆ. ಯಥಾಸ್ಥಿತಿ ವಾದವನ್ನು ಪ್ರಶ್ನಿಸಲು ಮುಂದಾದಾಗ ಪ್ರತಿರೋಧ ಎದುರಾಗುತ್ತದೆ. ಶ್ರೇಣೀಕೃತ ವ್ಯವಸ್ಥೆಯಲ್ಲಿನ ವರ್ಣಾಶ್ರಮವು ವರ್ಣಪ್ರಧಾನವಾದುದು. ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರವರ್ಗವನ್ನು ಹೊರತುಪಡಿಸಿ, ಉಳಿದವರದು ಬುದ್ಧಿಯ ತಾಕತ್ತು, ಖಡ್ಗ ಹಿಡಿದು ಹೋರಾಡುವ ಶಕ್ತಿಯ ಕಸರತ್ತು ಮತ್ತು ವ್ಯವಹಾರದ ಮಸಲತ್ತು. ಈ ಮೂರು ವರ್ಗಗಳನ್ನುಳಿದು ಉಳಿದವರದು ಶಾರೀರಿಕ ಶ್ರಮ, ಪರಿಶ್ರಮ. ಮೇಲಿನ ಮೂರು ವರ್ಗಗಳ ಸೇವೆಯನ್ನು ಇವರು ಮಾಡಬೇಕು. ಕೆಲವರು ಮಾತ್ರ ಸೇವೆ ತೆಗೆದುಕೊಳ್ಳುವವರು, ಹಲವರು ಸೇವೆ ಮಾಡುವವರು.

ಈ ಅಸಮಾನತೆಯನ್ನು ಪ್ರಶ್ನಿಸಲು ಹೋದಾಗ ಸಂಘರ್ಷ ನಡೆದಿದೆ, ಮುಂದೆ ಅದು ಹೋರಾಟದ ಸ್ವರೂಪ ಪಡೆದುಕೊಂಡಿದೆ. ಬಸವಣ್ಣನವರು ಲಿಂಗತಾರತಮ್ಯವನ್ನು ಪ್ರಶ್ನಿಸಿದ್ದರಿಂದ ಸಂಘರ್ಷ ಉಂಟಾಯಿತು. ಬಹಿಷ್ಕಾರಕ್ಕೆ ಒಳಗಾದ ಬಸವಣ್ಣನವರು ಏಕವ್ಯಕ್ತಿ ಪ್ರಯತ್ನ ಮುಂದುವರಿಸುತ್ತ ಹೋಗುತ್ತಾರೆ. ಒಬ್ಬ ವ್ಯಕ್ತಿಯಿಂದ
ಉಂಟಾದ ಅರಿವು ಹಲವಾರು ವ್ಯಕ್ತಿಗಳಿಗೆ ವಿಸ್ತರಿಸುತ್ತ ಹೋಯಿತು. ಬಹುವ್ಯಕ್ತಿಗಳಿಗೆ ಅರಿವು ಪಸರಿಸಲ್ಪಟ್ಟು, ಕ್ರಾಂತಿಯ ಸ್ವರೂಪ ಪಡೆದುಕೊಂಡಿತು. ಅಸಮಾನತೆಯಿಂದ ತುಂಬಿದ ವ್ಯವಸ್ಥೆಯಲ್ಲಿ ಬದುಕುವುದಕ್ಕಿಂತ ಬಹಿಷ್ಕಾರದ ಬದುಕು ಮೇಲೆಂದು ಹೊರಬರುತ್ತಾರೆ. ತಿರಸ್ಕಾರ ಮತ್ತು ಬಹಿಷ್ಕಾರ ಎರಡು ಕೂಡಿಕೊಂಡು ಹೊಸಪಥದ ಆವಿಷ್ಕಾರವಾಯಿತು. ವೈಜ್ಞಾನಿಕ ಲೋಕದಲ್ಲಿ ಅನ್ವೇಷಣೆಗಳು, ತತ್ವಜ್ಞಾನದಲ್ಲಿ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತ ಹೋಗುತ್ತವೆ. ಅಂದು ಹೊಸಪಥದ ಅನ್ವೇಷಣೆ. ಗೌತಮ ಬುದ್ಧರು ಎರಡೂವರೆ ಸಾವಿರ ವರ್ಷಗಳ ಹಿಂದೆ ಬೋಧಿಸಿದ ಮಾರ್ಗವು ಸ್ವತಂತ್ರ ಧರ್ಮ ಉದಯಕ್ಕೆ ಕಾರಣವಾಯಿತು. ಅದರಂತೆ ಇತರೆ ಧರ್ಮಗಳ ದಾರ್ಶನಿಕರು ಬೋಧಿಸಿದಂತಹ ತತ್ವಗಳು ಕ್ರಮೇಣ ಸ್ವತಂತ್ರ ಧರ್ಮದ ಮನ್ನಣೆ ಪಡೆದಿವೆ. ಅದರಂತೆ ಅಂದು ಶರಣಧರ್ಮ; ಇಂದು ಬಸವಧರ್ಮ. ಬಸವಣ್ಣನವರಿಂದ ಹೊಸಪಥದ ಆವಿಷ್ಕಾರ.

ವೈದಿಕತೆಯಲ್ಲಿದ್ದಂತಹ ಹಲವಾರು ವೈರುಧ್ಯಗಳನ್ನು ಪ್ರಶ್ನಿಸಿದ ಮತ್ತೋರ್ವ ಧೀಮಂತ ವ್ಯಕ್ತಿಯೆಂದರೆ ಬಾಬಾಸಾಹೇಬ್ ಅಂಬೇಡ್ಕರ್. ಶೂದ್ರರ ಸ್ಥಿತಿಯು ಬಹುದಯನೀಯ ಹಾಗು ಶೋಚನೀಯ ಆಗಿದ್ದಂತಹ ಸಂದರ್ಭದಲ್ಲಿ ಅವರಿಗಾಗಿ ಎಲ್ಲ ರೀತಿಯ ಅವಮಾನ ಅನುಭವಿಸುತ್ತ, ಸ್ವಾಭಿಮಾನ ಮೂಡಿಸುತ್ತ ಹೋದರು. ಬದುಕಿನ ಅನಾವರಣಕ್ಕೆ ಬೇಕಾದ ಸ್ವಾತಂತ್ರ್ಯ ಸಿಗದಿದ್ದಾಗ (ಕೊಡದಿದ್ದಾಗ) ಅದನ್ನು ಒತ್ತಾಯದಿಂದ ಪಡೆಯಬೇಕು ಎಂದಿದ್ದಾರೆ. ಅದನ್ನು ನಿರಾಕರಿಸಿದ ಸಂದರ್ಭದಲ್ಲಿ ಅಂಬೇಡ್ಕರರು ತಾವು ಜನಿಸಿದ ಧರ್ಮವನ್ನು ತೊರೆದು ಬೌದ್ಧಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಬಸವಣ್ಣನವರ ಹೊಸಪಥದ ಆವಿಷ್ಕಾರವಾಗಲಿ, ಅಂಬೇಡ್ಕರ್‌ ಅವರ ಮತಾಂತರ ಪ್ರಕ್ರಿಯೆಯಾಗಲಿ ಯಾವುದೇ ಆಮಿಷಕ್ಕೆ ಒಳಗಾಗಿ ಅಲ್ಲ. ಅವರದು ಬೌದ್ಧಿಕ ಚಿಂತನೆ, ತಾತ್ವಿಕ ಸುಧಾರಣೆ.

ಇಂದು, ಆಮಿಷವೊಡ್ಡಿ ಮತಾಂತರ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ವಸ್ತುಗಳನ್ನು ತೆಗೆದುಕೊಂಡು, ಹಣವನ್ನು ಪಡೆದುಕೊಂಡು ಮತಾಂತರಗೊಳ್ಳುವುದು ಅಪ್ರಬುದ್ಧ ಅನಿಸುತ್ತದೆ. ನಾನು ಮತಾಂತರ ವಿರೋಧಿ ಅಲ್ಲ; ಅದು ಬುದ್ಧಿಪೂರ್ವಕವಾಗಿ ನಡೆಯಬೇಕೆಂದು ಬಯಸುವ ಒಬ್ಬ ಬುದ್ಧಿಜೀವಿ ಅರ್ಥಾತ್ ಪ್ರಜ್ಞಾವಂತ. ಧರ್ಮ ಪ್ರಸಾರಕರು ಪ್ರಜ್ಞಾವಂತರಾದಷ್ಟು ಸಮಾಜಕ್ಕೆ ಅವರಿಂದ ಆಗುವ ಪ್ರಯೋಜನಗಳು ಹಲವಾರು. ಮುಗ್ಧರಾಗಿದ್ದಷ್ಟು ಸಮಾಜಕ್ಕೆ ಅವರಿಂದ ಅನಾಹುತಗಳೇ ಸಂಭವಿಸಬಹುದು. ಕಾಣದ ಲೋಕವನ್ನು ಪ್ರಸ್ತಾಪಿಸುತ್ತ ಮುಗ್ಧರನ್ನು ಬಲೆಗೆ ಬೀಳಿಸಲಾಗುತ್ತದೆ. ಕೆಲವರು ನರಕದ ಭೀತಿಯನ್ನು ಸೃಷ್ಟಿಸುತ್ತ ಸೆಳೆಯಲು ಯತ್ನಿಸುತ್ತಾರೆ. ಕೆಲವರು ಪುನರ್ಜನ್ಮದ ಬಗೆಗೆ ಪ್ರಸ್ತಾಪಿಸುತ್ತ ಸಂಮ್ಮೋಹನ ವಿದ್ಯೆ ಪ್ರದರ್ಶಿಸುತ್ತ ಮುಗ್ಧರ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಪಾಪ ವಿಮೋಚನೆಗಾಗಿ ತಮ್ಮ ಮೂಲಪುರುಷರನ್ನು ನೆನಪಿಸಿಕೊಳ್ಳುತ್ತ ಆಗಾಗ ಭಜನೆ ಮಾಡಬೇಕೆನ್ನುತ್ತಾರೆ. ಅವರ ಹೆಸರನ್ನು ಬಾರಿಬಾರಿ ಸ್ಮರಿಸುತ್ತ ಹೋದರೆ, ಬಂದ ಕಷ್ಟಗಳು ಮರೆಯಾಗುತ್ತವೆ ಎಂದು ಭಾವನಾತ್ಮಕವಾಗಿ ವಿವರಿಸುತ್ತ ಹೋಗುತ್ತಾರೆ; ತಮ್ಮ ಪ್ರಭಾವ ಮೂಡಿಸುತ್ತಾರೆ. ಕೆಲವರು ಪಾಪ-ಪುಣ್ಯ ಕುರಿತು ಪ್ರಚುರಪಡಿಸುತ್ತಾರೆ. ಈ ಬಗ್ಗೆ ಬಸವಣ್ಣನವರು- ಪುಣ್ಯ ಪಾಪವೆಂಬುವು ತಮ್ಮ ಇಷ್ಟ ಕಂಡಿರೆ, ಅಯ್ಯಾ ಎಂದಡೆ ಸ್ವರ್ಗ, ಎಲವೊ ಎಂದಡೆ ನರಕ. ದೇವಾ, ಭಕ್ತಾ, ಜಯಾ ಜೀಯಾ ಎಂಬ ನುಡಿಯೊಳಗೆ ಕೈಲಾಸವೈದುವುದೆ ಕೂಡಲಸಂಗಮದೇವ ಎಂದಿದ್ದಾರೆ.

ಧರ್ಮಪ್ರಸಾರಕರು ಜನಸಾಮಾನ್ಯರಲ್ಲಿ ಪ್ರಜ್ಞಾವಂತಿಕೆ ಬಿತ್ತಬೇಕು; ಬೆಳೆಯಬೇಕು. ಸ್ವರ್ಗ-ನರಕ, ಪಾಪ-ಪುಣ್ಯ, ಪುನರ್ಜನ್ಮದಂತಹ ಭಾವನಾತ್ಮಕ ಸಂಗತಿಗಳನ್ನು ಬಿತ್ತುತ್ತ, ಅವಾಸ್ತವ ಬದುಕಿನತ್ತ ಕೊಂಡೊಯ್ಯಬಾರದು. ಜನಸಾಮಾನ್ಯರ ಮುಗ್ಧತೆಯನ್ನು ಬಳಸಿಕೊಂಡು, ಗುಂಗು ಹಿಡಿಸುವುದರಿಂದ ತಮ್ಮ ದಾರ್ಶನಿಕರಿಗೆ (ಮೂಲಪುರುಷರಿಗೆ) ಅಗೌರವ ಸಲ್ಲಿಸಿದಂತೆ ಎಂದು ಭಾವಿಸಬೇಕಾಗುತ್ತದೆ. ಯಾವ ದಾರ್ಶನಿಕರೂ ಭೀತಿಯನ್ನು ಬಿತ್ತುತ್ತ ಧರ್ಮಪ್ರಸಾರ ಮಾಡಬೇಕೆಂದು ಆದೇಶಿಸಿರುವುದಿಲ್ಲ. ಧರ್ಮ ಪ್ರಚಾರ ಮಾಡಲಿ; ಆಸಕ್ತಿ ತಳೆದವರಿಗೆ ದೀಕ್ಷೆ ಕೊಡಲಿ. ಅದರಿಂದ ಯಾವುದೇ ತೊಂದರೆಯಿಲ್ಲ. ಒಂದಿಲ್ಲೊಂದು ಗುಂಗಿಗೆ ಒಳಪಡಿಸುತ್ತ ಮತಾಂತರ ಮಾಡುವುದು ಯಾವ ಧರ್ಮಕ್ಕೂ ಭೂಷಣವಲ್ಲ; ಶ್ರೇಯಸ್ಕರವಲ್ಲ.

ಒತ್ತಾಯದ ಮತಾಂತರವು ಬೇರೊಂದು ಸಮಸ್ಯೆ ಸೃಷ್ಟಿಗೆ ಕಾರಣ ಆಗಬಹುದು. ಒಂದು ಸಂಘಟನೆಯಿಂದ ಮತಾಂತರ, ಮತ್ತೊಂದು ಸಂಘಟನೆಯಿಂದ ಲವ್ ಜಿಹಾದ್, ಇನ್ನೊಂದು ಸಂಘಟನೆಯಿಂದ ಮರ್ಯಾದೆಗೇಡು ಹತ್ಯೆ, ಮಗದೊಂದು ಸಂಘಟನೆಯಿಂದ ಕೋಮುಭಾವನೆ... ಇಂತಹ ಮತಾಂಧತೆಯು ಸಾರ್ವಜನಿಕರನ್ನು ಕೆರಳಿಸುವಂತಾಗಬಾರದು. ಧರ್ಮಾಂತರವು ಪರಸ್ಪರ ತಿಳಿವಳಿಕೆಯಿಂದ ನಡೆಯಬಹುದಾದ ಪ್ರಕ್ರಿಯೆ. ಅದು ಪ್ರಜ್ಞಾಪೂರ್ಣ ವಿಧಾನ. ಪ್ರಜ್ಞಾವಂತಿಕೆ ಮುಖ್ಯ ಆಗಬೇಕು. ಬಡವರು, ಶೋಷಿತರು ಮತಾಂತರಗೊಳ್ಳುತ್ತಿರುವುದು ವಿಷಾದನೀಯ.

ಶ್ರೀಮಠವು ಸರ್ವಧರ್ಮದ ಜನರ ಜತೆಗೂ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದು, ಸಮಭಾವ ಕಾಯ್ದುಕೊಂಡಿದೆ. ಬಸವಣ್ಣನವರ ಸಮಾನತೆ, ಗೌತಮ ಬುದ್ಧರ ಮಾನವೀಯತೆ, ಮಹಾವೀರರ ಜೀವಪರತೆ, ಏಸುಕ್ರಿಸ್ತರ ಮಮತೆ (ಪ್ರೀತಿ), ಮೊಹಮ್ಮದ್ ಪೈಗಂಬರರ ಕರ್ತವ್ಯಪರತೆ, ಗುರುನಾನಕರ ಕ್ರಿಯಾಶೀಲತೆ ಮೊದಲಾದ ದಾರ್ಶನಿಕರ ಗುಣಗಳನ್ನು ಗೌರವಿಸಬೇಕು: ಸಾಧ್ಯವಾದರೆ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಭಾವನೆಯೊಂದಿಗೆ ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣ, ಐಕ್ಯಕ್ಷೇತ್ರ ಕೂಡಲಸಂಗಮ, ಗೌತಮಬುದ್ಧರ ಜನ್ಮಭೂಮಿ ಲುಂಬಿನಿ ಮತ್ತು ಬುದ್ಧಗಯಾ, ಏಸುಕ್ರಿಸ್ತರ ಜನ್ಮಭೂಮಿ ಜೆರುಸಲೇಂ ಮತ್ತು ರೋಮ್‍ನಗರದ ವ್ಯಾಟಿಕನ್ ಸಿಟಿ, ಗಾಂಧೀಜಿಯವರ ಐಕ್ಯಭೂಮಿ ಹರಿಶ್ಚಂದ್ರ ಘಾಟ್, ಅಂಬೇಡ್ಕರರ ಚೈತನ್ಯಭೂಮಿ ಇತ್ಯಾದಿ ಸಂದರ್ಶಿಸಿದ್ದೇನೆ.

ಮತಾಂತರದಂತಹ ಸಂಕೀರ್ಣ ಸಂಗತಿಗಳು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡದಿರಲಿ. ತನ್ಮೂಲಕ ದೇಶದಲ್ಲಿ ಹಿಂಸೆಯನ್ನು ಮುನ್ನೆಲೆಗೆ ತಂದು ನಿಲ್ಲಿಸದಿರಲೆಂಬುದು ನನ್ನ ಕಾಳಜಿ. ಒಂದುವೇಳೆ ಸರ್ಕಾರವು ಮತಾಂತರ ನಿಷೇಧ ಕಾಯಿದೆಯನ್ನು ತಂದಲ್ಲಿ ಅದಕ್ಕೆ ಸಹಮತವಿದೆ. ಇತ್ತೀಚೆಗೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಸರ್ವಧರ್ಮ ಮಠಾಧೀಶರ ಸಮಾಲೋಚನಾ ಸಭೆ ಜರುಗಿತು. ಅಲ್ಲಿ ಮುಖ್ಯವಾಗಿ ಅಸ್ಪೃಶ್ಯತೆ ನಿವಾರಣೆ ಮತ್ತು ಮತಾಂತರ ತಡೆಗಟ್ಟುವಿಕೆ ಕುರಿತು ಗಂಭೀರ ಚರ್ಚೆ ನಡೆದಿದೆ.

ಲೇಖಕ: ಚಿತ್ರದುರ್ಗದ ಶ್ರೀ ಮುರುಘಾ ಮಠದ ಪೀಠಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT