ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ– ತ್ವರಿತ ಇತ್ಯರ್ಥಕ್ಕೆ ಮುಂದು

ಸಂಪಾದಕೀಯ: ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ–ತ್ವರಿತ ಇತ್ಯರ್ಥಕ್ಕೆ ಮುಂದಾದ ಸುಪ್ರೀಂಕೋರ್ಟ್
Published 12 ನವೆಂಬರ್ 2023, 19:29 IST
Last Updated 12 ನವೆಂಬರ್ 2023, 19:29 IST
ಅಕ್ಷರ ಗಾತ್ರ

ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್ ಕೆಲವು ಸ್ವಾಗತಾರ್ಹ ಕ್ರಮಗಳನ್ನು ಕೈಗೊಂಡಿದೆ. ಶಾಸಕರು ಹಾಗೂ ಸಂಸದರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಮೇಲ್ವಿಚಾರಣೆಗೆ ವಿಶೇಷ ನ್ಯಾಯಪೀಠ ರಚಿಸಬೇಕು ಎಂದು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಆರೋಪ ಸಾಬೀತಾದಲ್ಲಿ ಮರಣದಂಡನೆ, ಜೀವಾವಧಿ ಶಿಕ್ಷೆ, ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಪ್ರಕರಣಗಳ ತ್ವರಿತ ವಿಚಾರಣೆಗೆ ಆದ್ಯತೆ ನೀಡಬೇಕು ಎಂದು ಕೋರ್ಟ್ ಹೇಳಿದೆ. ಕೆಲವು ಜನಪ್ರತಿನಿಧಿಗಳ ವಿರುದ್ಧ ಅತ್ಯಾಚಾರ, ಕೊಲೆಯಂತಹ ಗಂಭೀರ ಸ್ವರೂಪದ ಆರೋಪಗಳು ಕೂಡ ಇವೆ. ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು ವರ್ಷಗಳಿಂದ ವಿಚಾರಣೆಯ ಹಂತ ದಲ್ಲಿಯೇ ಇರುವುದಕ್ಕೆ ಕಾರಣ ನ್ಯಾಯದಾನ ಪ್ರಕ್ರಿಯೆಯಲ್ಲಿನ ನಿಧಾನಗತಿ ಮಾತ್ರವೇ ಅಲ್ಲ. ಪ್ರಕರಣಗಳ ವಿಚಾರಣೆಯು ನಿಧಾನಗತಿಗೆ ತಿರುಗುವಂತೆ ಮಾಡಲು, ನ್ಯಾಯದಾನದ ಉದ್ದೇಶವೇ ವಿಫಲವಾಗುವಂತೆ ಮಾಡಲು ಅಗತ್ಯವಿರುವ ಹಲವು ಅಸ್ತ್ರಗಳು ರಾಜಕಾರಣಿಗಳ ಬತ್ತಳಿಕೆಯಲ್ಲಿ ಇರುತ್ತವೆ.

2022ರ ನವೆಂಬರ್‌ವರೆಗಿನ ಮಾಹಿತಿ ಪ್ರಕಾರ, ರಾಜಕಾರಣಿಗಳ ವಿರುದ್ಧ ದಾಖಲಾಗಿರುವ, ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ 5,175. ಈ ಪ್ರಕರಣಗಳ ಪೈಕಿ 2,166 ಪ್ರಕರಣಗಳು ಐದು ವರ್ಷಗಳಿಗಿಂತ ಹಳೆಯವು. ಅತಿಹೆಚ್ಚಿನ ಪ್ರಕರಣಗಳು ಬಾಕಿ ಇರುವುದು ಉತ್ತರಪ್ರದೇಶದಲ್ಲಿ (1,377). ಎರಡನೆಯ ಹಾಗೂ ಮೂರನೆಯ ಸ್ಥಾನದಲ್ಲಿ ಇರುವ ರಾಜ್ಯಗಳು ಕ್ರಮವಾಗಿ ಬಿಹಾರ (546) ಮತ್ತು ಮಹಾರಾಷ್ಟ್ರ (482). ಸುಪ್ರೀಂ ಕೋರ್ಟ್‌ ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಮಾರ್ಗಸೂಚಿ ಹೊರಡಿಸುವ ಸಂದರ್ಭದಲ್ಲಿ ಮನನೀಯವಾದ ಮಾತೊಂದನ್ನು ಹೇಳಿದೆ. ಸಂಸದೀಯ ಪ್ರಜಾತಂತ್ರವು ‍ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದಾದರೆ, ಕ್ಷೇತ್ರದ ಜನರು ತಮ್ಮ ರಾಜಕೀಯ ಪ್ರತಿನಿಧಿಯಲ್ಲಿ ವಿಶ್ವಾಸ ಹೊಂದಿರಬೇಕಾಗಿರುವುದು ಅತ್ಯಗತ್ಯ ಎಂದು ಕೋರ್ಟ್ ಹೇಳಿದೆ.

ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸರ್ವಪ್ರಯತ್ನಗಳನ್ನೂ ಆದ್ಯತೆಯ ಮೇರೆಗೆ ಮಾಡಬೇಕು, ಈ ಪ್ರಕರಣಗಳು ನಮ್ಮ ರಾಜಕೀಯ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವಂಥವು ಎಂದು ಕೂಡ ಕೋರ್ಟ್ ಹೇಳಿದೆ. ಕ್ರಿಮಿನಲ್ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ, ವಿಶೇಷ ನ್ಯಾಯಪೀಠದ ರಚನೆಗೆ, ಪ್ರಕರಣಗಳು ಕಾಲಕಾಲಕ್ಕೆ ವಿಚಾರಣೆಗೆ ಬರುವಂತೆ ಆಗಲು ಹಾಗೂ ಅವುಗಳ ವಿಚಾರಣೆಯು ಯಾವುದೇ ಅಡ್ಡಿ ಇಲ್ಲದೆ ನಡೆಯುವಂತೆ ಆಗಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ.

ತೀರಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಚಾರಣೆಯನ್ನು ಮುಂದಕ್ಕೆ ಹಾಕಬೇಕು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಿಗೆ ತಮ್ಮ ವ್ಯಾಪ್ತಿಯಲ್ಲಿನ ಇಂತಹ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನಿರ್ದೇಶನ ನೀಡಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಸೂಕ್ತ ನಡೆ.

ಸುಪ್ರೀಂ ಕೋರ್ಟ್‌ ಹೊರಡಿಸಿರುವ ಮಾರ್ಗಸೂಚಿಯು ಅನುಷ್ಠಾನಕ್ಕೆ ಬಂದು, ರಾಜಕಾರಣಿಗಳು ಎಷ್ಟೇ ದೊಡ್ಡವರಿರಲಿ ಅಂಥವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ತ್ವರಿತವಾಗಿ ಇತ್ಯರ್ಥಗೊಂಡಾಗ ದೇಶಕ್ಕೆ ಬಹಳ ದೊಡ್ಡ ನೆರವು ಸಿಕ್ಕಂತಾಗುತ್ತದೆ. ಇಂತಹ ಕ್ರಮವೊಂದನ್ನು ಕೋರ್ಟ್‌ ತೆಗೆದುಕೊಂಡಿ
ರುವುದು ಇದೇ ಮೊದಲೇನೂ ಅಲ್ಲ. 2017ರಲ್ಲಿ ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ತ್ವರಿತಗತಿಯ ನ್ಯಾಯಾಲಯಗಳ ರಚನೆಗೆ ಆದೇಶ ನೀಡಿತ್ತು.

ಇಂತಹ 12 ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರವು ಆಗ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 2020ರಲ್ಲಿ ಸುಪ್ರೀಂ ಕೋರ್ಟ್, ಆಗ ವಿಚಾರಣೆಯ ಹಂತದಲ್ಲಿ ಇದ್ದ ಅಂದಾಜು ನಾಲ್ಕು ಸಾವಿರ
ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿತ್ತು. ಆದರೆ ಜನಪ್ರತಿ
ನಿಧಿಗಳ ವಿರುದ್ಧದ ಅಪರಾಧಗಳು ಸಾಬೀತಾದ ನಿದರ್ಶನಗಳು ಕಡಿಮೆ. ಸುಪ್ರೀಂ ಕೋರ್ಟ್‌ ಈಗ ತಾನು ರೂಪಿಸಿರುವ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT