ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವಿದ್ಯುತ್ ಚಾಲಿತ ವಾಹನಗಳಲ್ಲಿ ಬೆಂಕಿ ಕಾರಣಗಳ ಪತ್ತೆ ಶೀಘ್ರ ಆಗಲಿ

Last Updated 28 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಕೆಲವು ಪ್ರಕರಣಗಳು ಈಚಿನ ದಿನಗಳಲ್ಲಿ ದೇಶದ ಹಲವೆಡೆಗಳಿಂದ ವರದಿಯಾಗಿವೆ. ಕೆಲವು ಘಟನೆಗಳಲ್ಲಿ ಜೀವಹಾನಿ ಆಗಿದೆ. ವಾಹನಗಳು ಚಾರ್ಜ್ ಆಗುತ್ತಿದ್ದ ಸಂದರ್ಭದಲ್ಲಿ ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಹೀಗಾಗಿದೆ ಎಂದು ಹೇಳಲಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ವಾಹನ ಚಾರ್ಜ್ ಆಗುತ್ತಿಲ್ಲದಿದ್ದಾಗಲೂ ಬೆಂಕಿ ಹೊತ್ತಿಕೊಂಡಿದೆ. ಈ ಪ್ರಕರಣಗಳು ಈಗ ಪ್ರವರ್ಧಮಾನಕ್ಕೆ ಬರುತ್ತಿರುವ, ಭವಿಷ್ಯದ ವಾಹನಗಳು ಎಂದೇ ಕರೆಸಿಕೊಂಡಿರುವ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಜನ ಅನುಮಾನ ಬೆಳೆಸಿಕೊಳ್ಳುವಂತೆ ಮಾಡಿವೆ. ಬೆಂಕಿ ಹೊತ್ತಿಕೊಂಡ ವಾಹನಗಳ ಬ್ಯಾಚ್‌ನ ಇತರ ವಾಹನಗಳನ್ನು ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ವಾಪಸ್ ಪಡೆಯು
ತ್ತಿರುವುದಾಗಿ ಕೆಲವು ಕಂಪನಿಗಳು ಪ್ರಕಟಿಸಿವೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ಪರಿಶೀಲಿಸುವುದಾಗಿ ಅವು ಹೇಳಿವೆ. ವಿದ್ಯುತ್ ಚಾಲಿತ ವಾಹನ ತಯಾರಕರಿಗೆ ಎಚ್ಚರಿಕೆ ನೀಡಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಲೋಪ ಇರುವ ಬ್ಯಾಚ್‌ನ ವಾಹನಗಳನ್ನು ಹಿಂದಕ್ಕೆ ಪಡೆಯುವ ಮುಂಜಾಗ್ರತಾ ಹೆಜ್ಜೆ ಇರಿಸಬೇಕು ಎಂದು ಸೂಚಿಸಿದ್ದಾರೆ. ವಿದ್ಯುತ್ ಚಾಲಿತ ವಾಹನಗಳ ಗುಣಮಟ್ಟದ ವಿಚಾರವಾಗಿ ಸರ್ಕಾರವು ಮಾರ್ಗಸೂಚಿಯೊಂದನ್ನು ಹೊರಡಿಸಲಿದೆ ಎಂದು ಕೂಡ ಗಡ್ಕರಿ ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿರುವ ಘಟನೆಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ.ಸುರಕ್ಷತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಲು ಇದು ನೆರವಾಗಲಿದೆ.

ಬೆಂಕಿ ಹೊತ್ತಿಕೊಂಡಿದ್ದು ಏಕೆ ಎಂಬ ಬಗ್ಗೆ ಪರಿಶೀಲನೆ ನಡೆಸಿದಾಗ ಕಂಡುಕೊಂಡ ಅಂಶಗಳು ಯಾವುವು ಎಂಬುದನ್ನು ಕಂಪನಿಗಳು ಬಹಿರಂಗಪಡಿಸಿಲ್ಲ. ಆದರೆ ಬೆಂಕಿಗೆ ಕಾರಣವು ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿ ಇದ್ದಿರಬಹುದು ಎಂದು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಬ್ಯಾಟರಿಗಳ ಗುಣಮಟ್ಟ, ಅವು ಹೊರಗಿನ ಶಾಖವನ್ನು ನಿಭಾಯಿಸಬಹುದಾದ ಮಟ್ಟ, ಕ್ಷಿಪ್ರವಾಗಿ ಚಾರ್ಜ್ ಆಗುವ
ಬ್ಯಾಟರಿಗಳಲ್ಲಿ ಬಳಕೆಯಾಗಿರುವ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಪರಿಶೀಲನೆ ಅಗತ್ಯ ಇದ್ದಿರಬಹುದು. ಆಮದು ಮಾಡಿಕೊಂಡ ಬ್ಯಾಟರಿಗಳಲ್ಲಿ ಕೆಲವು ತಾಪಮಾನ ಕಡಿಮೆ ಇರುವ ಪ್ರದೇಶಗಳಿಗೆ ಸೂಕ್ತವಾಗು
ತ್ತವೆಯೇ ವಿನಾ ಭಾರತದಂತಹ ಪ್ರದೇಶಗಳಿಗೆ ಅಲ್ಲ ಎಂಬ ವಾದವೊಂದು ಇದೆ. ಭಾರತದ ರಸ್ತೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಓಡಿಸುವಾಗ ಬ್ಯಾಟರಿಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗುತ್ತದೆ. ಇದರಿಂದಾಗಿಯೂ ಬ್ಯಾಟರಿ ಅತಿಯಾಗಿ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ವಾದವೂ ಇದೆ. ವಿದ್ಯುತ್‌ ಚಾಲಿತ ಸ್ಕೂಟರ್‌ಗಳು ಹಾಗೂ ಬೈಕ್‌ಗಳಲ್ಲಿ ಬೆಂಕಿ ಹೊತ್ತಿಕೊಂಡಿರುವ ಘಟನೆಗಳು ಹೆಚ್ಚು ವರದಿಯಾಗಿವೆ. ಇಂತಹ ವಾಹನಗಳನ್ನು ತಯಾರಿಸುವ ಕೆಲವು ನವೋದ್ಯಮಗಳು ಇವೆ. ಇವುಗಳಿಗೆ ಅಗತ್ಯ ಪ್ರಮಾಣದ ತಾಂತ್ರಿಕ ಪರಿಣತಿಯ ಕೊರತೆ ಇರಬಹುದು. ಗುಣಮಟ್ಟ ಮತ್ತು ಸುರಕ್ಷತೆ ವಿಚಾರವಾಗಿ ಹೆಚ್ಚಿನ ಬದ್ಧತೆ ತೋರುವ ವೃತ್ತಿಪರತೆಯ ಕೊರತೆಯೂ ಇದ್ದಿರಬಹುದು. ಕಳಪೆ ಗುಣಮಟ್ಟದ ಬ್ಯಾಟರಿಗಳು ಹೆಚ್ಚಿನ ಅಪಾಯ ತಂದೊಡ್ಡುತ್ತವೆ.

ಇನ್ನಷ್ಟೇ ರೆಕ್ಕೆ ಬಿಚ್ಚಿ ಹಾರಬೇಕಿರುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉದ್ಯಮದ ಪಾಲಿಗೆ ಈ ವಿದ್ಯಮಾನವು ದೊಡ್ಡ ಹಿನ್ನಡೆ. ಈ ಪ್ರಕರಣಗಳು ವಿದ್ಯುತ್ ಚಾಲಿತ ವಾಹನ ಕಂಪನಿಗಳಿಗೆ ಹಿನ್ನಡೆಯಷ್ಟೇ ಅಲ್ಲ, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಿರುವ ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಗೂ ಇವು ದೊಡ್ಡ ಪೆಟ್ಟು ನೀಡಬಲ್ಲವು. ಈ ಸಾರಿಗೆ ವ್ಯವಸ್ಥೆಯು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸುವ ವಿಚಾರವಾಗಿ ಭಾರತವು ಹಾಕಿಕೊಂಡಿರುವ ಗುರಿಗಳನ್ನು ತಲುಪಲು ಅಗತ್ಯ. ಆದರೆ, ಇಂತಹ ಪ್ರಕರಣಗಳು ಗ್ರಾಹಕರಲ್ಲಿನ ವಿಶ್ವಾಸವನ್ನು ಹಾಳು ಮಾಡುತ್ತವೆ. ಕೆಲವು ಕಂಪನಿಗಳ ವಾಹನಗಳಿಗೆ ಮಾತ್ರ ಇದುವರೆಗೆ ಬೆಂಕಿ ಹೊತ್ತಿಕೊಂಡಿದೆಯಾದರೂ, ಜನರ ಮನಸ್ಸಿನಲ್ಲಿ ಮೂಡಬಹುದಾದ ನಕಾರಾತ್ಮಕ ಧೋರಣೆಯ ಕಾರಣದಿಂದಾಗಿ ಇಡೀ ಉದ್ಯಮಕ್ಕೆ ಏಟು ಬೀಳಬಹುದು. ವಿದ್ಯುತ್ ಚಾಲಿತ ವಾಹನ ಉದ್ಯಮ, ಸರ್ಕಾರ ಜೊತೆಯಾಗಿ ಕುಳಿತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲಿ ವಿಳಂಬ ಆಗಬಾರದು. ದುರ್ಘಟನೆಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಲು ಕೆಲವು ಕಂಪನಿಗಳಿಗೆ ಇಷ್ಟವಿಲ್ಲದಿರಬಹುದು. ಆದರೆ, ಸರ್ಕಾರವು ಮುತುವರ್ಜಿ ವಹಿಸಿ, ಕಾರಣಗಳನ್ನು ಬಹಿರಂಗಪಡಿಸಬೇಕು. ಅಗ ಮಾತ್ರ ಸಾರ್ವಜನಿಕರಿಗೆ ಇಂತಹ ವಾಹನಗಳ ಬಗ್ಗೆ ವಿಶ್ವಾಸ ಮೂಡುತ್ತದೆ. ಉದ್ಯಮ ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT