ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ತಾಣಗಳ ರಕ್ಷಣೆಗೆ ಬೇಕಿದೆ ಮತ್ತಷ್ಟು ಮುತುವರ್ಜಿ

Last Updated 21 ಜುಲೈ 2019, 20:15 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ತುಂಗಭದ್ರಾ ನದಿಯ ನಡುಗಡ್ಡೆಯ ‘ನವವೃಂದಾವನ’ ಕ್ಷೇತ್ರದಲ್ಲಿ ವ್ಯಾಸರಾಯರ ಮೂಲ ವೃಂದಾವನವನ್ನು ದುಷ್ಕರ್ಮಿಗಳು ಕೆಡವಿರುವುದು ಭಕ್ತಸಮೂಹಕ್ಕೆ ಆಘಾತ ನೀಡಿದೆ. ಧಾರ್ಮಿಕ, ಪಾರಂಪರಿಕ ಹಾಗೂ ಐತಿಹಾಸಿಕ ಪ್ರಾಧಾನ್ಯ ಇರುವ ಸ್ಥಳವೊಂದರ ಮೇಲೆ ನಡೆದಿರುವ ಈ ಕೃತ್ಯವು ಭಕ್ತರ ಧಾರ್ಮಿಕ ಭಾವನೆಗೆ ನೋವು ಉಂಟುಮಾಡಿದೆ. ಇದು, ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಬಹುತ್ವಕ್ಕೆ ಬಿದ್ದ ಪೆಟ್ಟು. ಒಂಬತ್ತು ಯತಿಗಳ ವೃಂದಾವನಗಳಿರುವ ಈ ಸ್ಥಳದಲ್ಲಿ ವ್ಯಾಸರಾಯರ ವೃಂದಾ ವನವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಐವರನ್ನು ಬಂಧಿಸಿದ್ದಾರೆ. ‘ನಿಧಿ ಆಸೆಗಾಗಿ ಇವರು ಈ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ. ಐತಿಹಾಸಿಕ ಪ್ರಾಮುಖ್ಯ ಇರುವ ಸ್ಥಳಗಳಲ್ಲಿ ನಿಧಿ ಇರಬಹುದು ಎಂದು ಭಾವಿಸಿ ಅಮೂಲ್ಯ ಶಿಲ್ಪಸಿರಿಯನ್ನು ನಾಶ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಐತಿಹಾಸಿಕ ಮಹತ್ವದ ಹಂಪಿಯಲ್ಲಿನ ವಿಷ್ಣು ದೇವಾಲಯ ಪ್ರಾಕಾರದ ಕಂಬಗಳನ್ನುಐದಾರು ತಿಂಗಳ ಹಿಂದೆ ಕೆಡವಲಾಗಿತ್ತು.

ಆ ಸ್ಥಳ, ನವ ವೃಂದಾವನದಿಂದ ಕೇವಲ ಹನ್ನೆರಡು ಕಿ.ಮೀ. ದೂರದಲ್ಲಿದೆ.ಪಾರಂಪರಿಕ ತಾಣಗಳು, ಸಂಸ್ಕೃತಿ ಹಾಗೂ ಇತಿಹಾಸದ ಬಗ್ಗೆ ನಮ್ಮ ಜನರಿಗೆ ಗೌರವ ಹಾಗೂ ಅರಿವಿನ ಕೊರತೆ ಇದೆ ಎಂಬುದುಇಂಥ ಘಟನೆಗಳಿಂದ ಗೊತ್ತಾಗುತ್ತದೆ. ಪಾರಂಪರಿಕ ತಾಣಗಳ ರಕ್ಷಣೆಗೆ ನೀಡಬೇಕಾದಷ್ಟು ಗಮನವನ್ನು ನೀಡುತ್ತಿಲ್ಲ ಎಂಬುದು ಕೂಡ ವಿಷಾದದ ವಿಚಾರ. ರಾಜ್ಯದ ವಿವಿಧೆಡೆ ಅನೇಕ ಸ್ಮಾರಕಗಳು, ಐತಿಹಾಸಿಕ ತಾಣಗಳು ಶೋಚನೀಯ ಸ್ಥಿತಿಯಲ್ಲಿವೆ. ದನಗಳ ಕೊಟ್ಟಿಗೆಯಾಗಿ, ಕಸ ಸುರಿಯುವ ಸ್ಥಳವಾಗಿ, ಅಕ್ರಮ ಚಟುವಟಿಕೆಯ ಕೇಂದ್ರವಾಗಿ ಇಂತಹ ಸ್ಥಳಗಳು ದುರ್ಬಳಕೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವಂತಹ ವಾಸ್ತವವಾದರೂ ಇವುಗಳ ರಕ್ಷಣೆಯ ಹೊಣೆ ಹೊತ್ತಿರುವವರಲ್ಲಿ ಜಾಣಕುರುಡು ಆವರಿಸಿರುವುದು ದುರದೃಷ್ಟಕರ. ಈಗಲಾದರೂ ಅವರು ಎಚ್ಚೆತ್ತುಕೊಂಡು ಇಂತಹ ತಾಣಗಳ ದುರ್ಬಳಕೆ ತಡೆಯಬೇಕು. ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು.

ನವವೃಂದಾವನದ ಪೂಜಾವಿಧಿ ನಿರ್ವಹಣೆಗೆ ಸಂಬಂಧಿಸಿದ ವಿಷಯವು ನ್ಯಾಯಾಲಯದ ಮುಂದಿದೆ. ಪೂಜೆಯ ಹಕ್ಕು ತಮಗೆ ಸೇರಿದ್ದುಎಂದು ಮಾಧ್ವ ಸಮುದಾಯದ ಉತ್ತರಾದಿ ಮಠ ಹಾಗೂ ರಾಯರ ಮಠದ ಭಕ್ತಾದಿಗಳು ಪ್ರತಿಪಾದಿಸುತ್ತಿದ್ದಾರೆ. ಇಂತಹ ವಿವಾದಿತ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ಅಗತ್ಯ ಇದೆ. ಅದನ್ನು ಕಡೆಗಣಿಸಿರುವುದು ಸರಿಯಲ್ಲ. ಯಾಕೆಂದರೆ, ವೃಂದಾವನ ಧ್ವಂಸದಂತಹ ಘಟನೆಗಳು ಈ ಎರಡೂ ಮಠಗಳ ಭಕ್ತರ ನಡುವೆ ಅಪನಂಬಿಕೆ ಹುಟ್ಟಿಸಿ, ಘರ್ಷಣೆಗೆ ಕಾರಣ ಆಗುವ ಅಪಾಯ ಇತ್ತು. ಎರಡೂ ಕಡೆಯ ಭಕ್ತರು ಸಂಯಮ ತೋರಿ, ಇಂತಹ ಅಪಾಯವನ್ನು ತಪ್ಪಿಸಿರುವುದು ಸ್ವಾಗತಾರ್ಹ.

ಎರಡೂ ಮಠಗಳ ಸ್ವಾಮಿಗಳು ಸೋಸಲೆ ವ್ಯಾಸರಾಜ ಮಠದ ಪೀಠಾಧ್ಯಕ್ಷರ ಜತೆಗೆ ನಿಂತು, ವ್ಯಾಸರಾಯರ ಮೂಲ ವೃಂದಾವನ ಪುನರ್ ನಿರ್ಮಾಣ, ಪ್ರತಿಷ್ಠಾಪನೆ ಕಾರ್ಯದಲ್ಲಿ ಆಸ್ಥೆಯಿಂದ ತೊಡಗಿಕೊಂಡದ್ದು ಒಳ್ಳೆಯ ಬೆಳವಣಿಗೆ. ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ತಾಣಗಳು ಹಾಗೂ ಅವುಗಳ ಸ್ಥಿತಿಗತಿಗೆ ಸಂಬಂಧಿಸಿರಾಜ್ಯ ಸರ್ಕಾರ ನಿಖರವಾದ ಮಾಹಿತಿ ಹೊಂದಿರಬೇಕು. ಮಾಹಿತಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು. ಅದರ ಆಧಾರದ ಮೇಲೆ ಇಂತಹ ತಾಣಗಳ ಸಂರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಬೇಕು. ಐತಿಹಾಸಿಕ ತಾಣಗಳ ಸಂರಕ್ಷಣೆ ವಿಚಾರದಲ್ಲಿ ವ್ಯಕ್ತಿ ನೆಲೆಯಲ್ಲಿ ಹಾಗೂ ವ್ಯವಸ್ಥೆಯ ಮಟ್ಟದಲ್ಲಿ ಇರುವ ಉಡಾಫೆಯ ಧೋರಣೆ ಹೋಗಬೇಕು ಎನ್ನುವುದು ಇಂತಹ ಕುಕೃತ್ಯಗಳಿಂದ ನಾವು ಕಲಿಯಬೇಕಾದ ಪಾಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT