ಬೆಂಗಳೂರು, ಏ. 9– ರಾಜ್ಯದ ಏಳು ಮಂದಿ ಸಾಹಿತಿಗಳು, ಸಮಾಜಸೇವಕರಿಗೆ ಆಜೀವ ಗೌರವ ಸಂಭಾವನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಂತ್ರಿಮಂಡಲ ಇಂದು ಕೈಗೊಂಡ ನಿರ್ಧಾರದಂತೆ ತಿಂಗಳಿಗೆ 250 ರೂ. ಗೌರವ ಸಂಭಾವನೆ ನೀಡಲಾಗುವುದು. ಕವಿ ಶ್ರೀ ದ.ರಾ.ಬೇಂದ್ರೆಯವರ ಸಂಭಾವನೆಯನ್ನು 500 ರೂ.ಗೆಹೆಚ್ಚಿಸಲಾಗುವುದು.
ನೇತ್ರದಾನಿ ಡಾ. ಎಂ.ಸಿ.ಮೋದಿ, ಸಾಹಿತಿಗಳಾದ ಶ್ರೀ ಬೆಟಗೇರಿ ಕೃಷ್ಣ ಶರ್ಮಾ, ಶ್ರೀ ವೀರಕೇಸರಿ ಸೀತಾರಾಮ ಶಾಸ್ತ್ರಿ ಮತ್ತು ಶ್ರೀ ಸಿದ್ಧವನಹಳ್ಳಿ ಕೃಷ್ಣ ಶರ್ಮಾ, ಮಹರ್ಷಿ ಗಜಾನನ ಶರ್ಮಾ ಅವರುಗಳಿಗೆ ಗೌರವ ಸಂಭಾವನೆ ನೀಡಲಾಗುವುದು.
ತಾರಕ ಯೋಜನೆಗೆ ಸಂಪುಟದ ಒಪ್ಪಿಗೆ
ಬೆಂಗಳೂರು, ಏ. 9– ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ನಿರ್ಮಾಣವಾಗುವ ಒಂದು ಕೋಟಿ ಎಪ್ಪತ್ತು ಲಕ್ಷ ರೂ. ವೆಚ್ಚದ ತಾರಕ ನೀರಾವರಿ ಯೋಜನೆಗೆ ಮಂತ್ರಿಮಂಡಲ ಇಂದು ಮಂಜೂರಾತಿ ನೀಡಿತು.
ಕಬಿನಿ ನದಿಗೆ ತಾರಕ ಉಪನದಿ. 18 ಸಾವಿರ ಎಕರೆಗೆ ನೀರುಣಿಸಲಿರುವ ಈ ಯೋಜನೆಯಿಂದ 2,268 ಎಕರೆ ಮುಳುಗಡೆಯಾಗಲಿದೆ. ಮುಳುಗಡೆಯಾಗಲಿರುವ ಜಮೀನಿನಲ್ಲಿ 40 ಎಕರೆ ನದಿ ನೀರಿನಿಂದ ಸಾಗುವಳಿಯಾಗುತ್ತಿರುವ ಭೂಮಿ, ಉಳಿದುದು ಅರಣ್ಯಭೂಮಿ. ಗ್ರಾಮಗಳಾಗಲೀ ಮನೆಗಳಾಗಲೀ ಮುಳುಗಡೆಯಾಗುವುದಿಲ್ಲ.