ಕುರೂಪಿಗಳ ಸ್ಪರ್ಧೆ ಕಲ್ಲೀಕೋಟೆ, ಜೂನ್ 7– ಈ ತಿಂಗಳ ಮೂರನೇ ವಾರದಲ್ಲಿ ಇಲ್ಲಿ ಕೇರಳ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆಯುವ ಕುರೂಪಿಗಳ ಸ್ಪರ್ಧೆಯಲ್ಲಿ ‘ಕುರೂಪರಾಣಿ’ ಮತ್ತು‘ಕುರೂಪರಾಜ’ನನ್ನು ಆಯ್ಕೆ ಮಾಡಲಾಗುವುದು.
16ರಿಂದ 50 ವರ್ಷದವರೆಗಿನ ಸ್ತ್ರೀ, ಪುರುಷರು ಇದರಲ್ಲಿ ಭಾಗವಹಿಸುವರು.
ದೂರಸ್ಥಳದಿಂದ ಬರುವ ಬಡ ಸ್ಪರ್ಧಿಗಳಿಗೆ ಉಚಿತ ಪ್ರಯಾಣ, ಊಟ, ವಸತಿ ಸೌಕರ್ಯವನ್ನು ಸಂಘವೇ ಒದಗಿಸಿಕೊಡಲಿದೆ ಎಂದು ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಇನ್ನೆರಡು ವಾರದಲ್ಲಿ ಡೈರೆಕ್ಟರ್ ಮಂಡಳಿ ನೇಮಕ ಇಂದೂರು, ಜೂನ್ 7– ರಾಷ್ಟ್ರೀಕರಣ ಮಾಡಲಾಗಿರುವ ಪ್ರತಿಯೊಂದು ಬ್ಯಾಂಕಿಗೂ ಮುಂದಿನ ಎರಡು ವಾರಗಳೊಳಗೆ ತಾತ್ಕಾಲಿಕ ಡೈರೆಕ್ಟರುಗಳ ಮಂಡಳಿಯನ್ನು ಕೇಂದ್ರ ಅರ್ಥ ಖಾತೆಯು ನೇಮಕ ಮಾಡುವುದು.
ಈ ವಿಷಯವನ್ನು ಕೇಂದ್ರ ಅರ್ಥ ಖಾತೆ ಸ್ಟೇಟ್ ಸಚಿವ ಶ್ರೀ ಪಿ.ಸಿ.ಸೇಠಿ ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಶುದ್ಧ ನೀರು ಪೂರೈಸಲು ಸಲಹೆ ಬೆಂಗಳೂರು ಜೂನ್ 7– ಒಂದು ಸಾವಿರ ಜನಸಂಖ್ಯೆ ಇರುವ ಗ್ರಾಮಗಳಿಗೆಲ್ಲಾ ಶುದ್ಧ ಕುಡಿಯುವ ನೀರಿನ ಸೌಕರ್ಯ ಹಾಗೂ ಹಳ್ಳಿಗಾಡಿನಲ್ಲಿ ಎಲ್ಲಿ ಹೋದರೂ ಎರಡು ಮೈಲಿ ಫಾಸಲೆಯಲ್ಲೇ ವೈದ್ಯಕೀಯ ಸೌಲಭ್ಯ ದೊರಕುವಂತೆ ವ್ಯವಸ್ಥಿತ ಯೋಜನೆ ರೂಪಿಸಬೇಕೆಂದು ನಿನ್ನೆ ನಗರದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಯೋಜನೆಗೆ ಸಂಬಂಧಿಸಿದ ಸಂಸತ್ತಿನ ಸಮಾಲೋಚನಾ ಸಮಿತಿ ಸಭೆಯಲ್ಲಿ ಸದಸ್ಯರು ಸಲಹೆ ಮಾಡಿದರು.