ಒಪ್ಪಂದ ಮುಗಿದರೂ ಪಾಕಿಸ್ತಾನಕ್ಕೆ ರಾವಿ ನದಿ ನೀರು ಮುಂಬಯಿ, ಜೂನ್ 8– ಕಳೆದ ಮಾರ್ಚಿ 31ಕ್ಕೆ ಸಿಂಧೂ ನದಿ ನೀರಿನ ಒಪ್ಪಂದದ ಕಾಲಾವಧಿ ಮುಗಿದ ನಂತರವೂ ರಾವಿ ನದಿಯ ನೀರು ಪಾಕಿಸ್ತಾನಕ್ಕೆಹರಿದುಹೋಗುತ್ತಿದೆಯೆಂದು ಪಂಜಾಬಿನ ಅರ್ಥಸಚಿವ ಬಲವಂತಸಿಂಗ್ ಅವರು ಇಂದು ಇಲ್ಲಿ ತಿಳಿಸಿದರು.
ಸಿಂಧೂ ನದಿ ನೀರು ಒಪ್ಪಂದದ ಕಾಲಾವಧಿ ಮುಗಿದ ಕೂಡಲೇ ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿದುಹೋಗುವುದನ್ನು ನಿಲ್ಲಿಸಲು ಸಾಧ್ಯವಾಗದೇ ಇರುವುದಕ್ಕೆ ಕೇಂದ್ರ ಸರ್ಕಾರದ ಆಲಸ್ಯ ಧೋರಣೆಯೇ ಕಾರಣವೆಂದು ಅವರು ಹೇಳಿದರು.
**
ಭಾಗಶಃ ಸಂಸ್ಕರಿಸಿದ ಕಚ್ಚಾ ಎಣ್ಣೆ ಆಮದು ನಿಲ್ಲಿಸಲು ಎಸ್ಸೊಗೆ ಆಜ್ಞೆ ನವದೆಹಲಿ, ಜೂನ್ 8– ಮುಂಬಯಿ ತೈಲ ಶುದ್ಧೀಕರಣ ಕೇಂದ್ರದಲ್ಲಿ ಈಗ ಬಳಸಲಾಗುತ್ತಿರುವ ಕಚ್ಚಾ ಎಣ್ಣೆ ಮಿಶ್ರಣದ ಆಮದನ್ನು ಕೂಡಲೇ ನಿಲ್ಲಿಸಬೇಕೆಂದು ವಿದೇಶಿ ಎಣ್ಣೆ ಕಂಪನಿಯಾದ ಎಸ್ಸೊ ಸಂಸ್ಥೆಗೆ ಕೇಂದ್ರ ಸರ್ಕಾರ ಆಜ್ಞೆ ಮಾಡಿದೆ.
ಶೇ 80ರಷ್ಟು ಹಗುರ (ಲೈಟ್) ಅರೇಬಿಯನ್ ಕಚ್ಚಾ ಎಣ್ಣೆಯ ಮಿಶ್ರಣವನ್ನು ಮಾತ್ರ ಕಂಪನಿ ಆಮದು ಮಾಡಿಕೊಳ್ಳಬೇಕೆಂದೂ ಬೇರೆ ಯಾವುದೇ ಬಗೆಯ ಕಚ್ಚಾ ಎಣ್ಣೆಯನ್ನು ಆಮದು ಮಾಡಿಕೊಳ್ಳಬಾರದೆಂದೂ ಸರ್ಕಾರ ಕಂಪನಿಗೆ ಸ್ಪಷ್ಟವಾಗಿ ತಿಳಿಸಿದೆ.