ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ವಿಸ್ತರಣೆ ಸಾಧ್ಯತೆ ಬೆಂಗಳೂರು, ಜುಲೈ 2– ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರ ಮೂರು ವಾರಗಳ ಕಾಲದ ಜಪಾನ್ ಪ್ರವಾಸದ ಫಲವಾಗಿ ರಾಜ್ಯದಲ್ಲಿ ಮೂರು ದೊಡ್ಡ ಪ್ರಮಾಣದ ಹಾಗೂ ಮೂರು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನಾನಾ ರೀತಿಯ ವಿದೇಶಿ ನೆರವು ದೊರೆತು ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
ಜಪಾನಿಗೆ ಬೀಡು ಕಬ್ಬಿಣದ ರಫ್ತಿನ ಬಗ್ಗೆ ತಾವು ನಡೆಸಿದ ಮಾತುಕತೆಗಳ ವಿವರಗಳನ್ನು ಮುಖ್ಯಮಂತ್ರಿ ‘ಮುಂದಿನ ಕ್ರಮ’ಕ್ಕಾಗಿ ಪ್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಇನ್ನೊಂದು ವಾರದಲ್ಲಿ ಕಳುಹಿಸಿ ಕೊಡಲಿದ್ದಾರೆ.
ಜಪಾನಿನ ಕೈಗಾರಿಕೆ ಸಂಸ್ಥೆಗಳೊಡನೆ ಈಗಿರುವ ಸಹಾಯ ಒಪ್ಪಂದಗಳನ್ನು ಭದ್ರಪಡಿಸುವುದು, ಈಗಿರುವ ಒಪ್ಪಂದಗಳ ವಿಸ್ತರಣೆ ಸಾಧ್ಯತೆಯ ಪರಿಶೀಲನೆ, ರಾಜ್ಯದ ಅಗತ್ಯಗಳಿಗೆ ಅನುಗುಣವಾದ ಹೊಸ ವ್ಯವಸ್ಥೆ ಬಗ್ಗೆ ಮಾತುಕತೆ ನಡೆಸುವುದು ಮುಖ್ಯಮಂತ್ರಿ ಅವರ ಜಪಾನ್ ಭೇಟಿಯ ಉದ್ದೇಶವಾಗಿತ್ತು.
ಕೆಂಗಲ್ರಿಗೆ ಮುಖ್ಯಮಂತ್ರಿ ಅಭಿನಂದನೆ ಬೆಂಗಳೂರು, ಜುಲೈ 2– ಇಂದು ಜಪಾನ್ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು, ಕೇಂದ್ರದ ಸಚಿವರಾಗಿ ನೇಮಕವಾಗಿರುವ ಶ್ರೀ ಹನುಮಂತಯ್ಯ ಅವರಿಗೆ ಅಭಿನಂದನೆಗಳನ್ನು ಕಳುಹಿಸಿದರು.