ದಾಂಡೇಲಿ, ಮೇ 9– ಮೈಸೂರು ಮಹಾರಾಷ್ಟ್ರ ಗಡಿ ವಿವಾದದಂತಹ ಗತಕಾಲದ ಪ್ರಶ್ನೆಗಳನ್ನು ಪ್ರಧಾನಿ ಇಂದಿರಾಗಾಂಧಿಯವರು ಗುಪ್ತ ಉದ್ದೇಶಗಳಿಂದ ಪ್ರಚೋದಿಸುತ್ತಿರುವರೆಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ.ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿ ಆಪಾದಿಸಿದರು.
ಮಹಾಜನ್ ಆಯೋಗದ ನೇಮಕವನ್ನು ತಾವು ವಿರೋಧಿಸಿದರೆಂದೂ ಆದರೆ ಅದನ್ನು ಒಪ್ಪಲು ಕೇಂದ್ರ ಒತ್ತಾಯ ಮಾಡಿತೆಂದೂ ಹೇಳಿದ ಶ್ರೀ ನಿಜಲಿಂಗಪ್ಪನವರು ಮಹಾರಾಷ್ಟ್ರ ಮುಖ್ಯಮಂತ್ರಿಯು ಒಳಗೊಂಡ ಆಗ ಅಧಿಕಾರದಲ್ಲಿದ್ದವರಿಗೆಲ್ಲ ಆಯೋಗದ ಶಿಫಾರಸುಗಳು ಅಖೈರೆಂದು ಸ್ಪಷ್ಟಪಡಿಸಲಾಗಿತ್ತೆಂದು ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲಾ ರಾಜಕೀಯ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದರು. ರಾಷ್ಟ್ರದಲ್ಲಿ ಪ್ರಜಾಸತ್ತೆಯನ್ನು ಉಳಿಸಲು ಜನತೆಯ ಜಾಗೃತಿಗೆ ಅವರು ಕರೆ ಇತ್ತರು. ಮೈಸೂರು ಪ್ರದೇಶ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ. ನಾಗಪ್ಪ ಆಳ್ವ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.