ನವದೆಹಲಿ, ಮೇ 11– ರಾಷ್ಟ್ರಪತಿಯಾಗಿ ಶ್ರೀ ವಿ.ವಿ.ಗಿರಿ ಅವರ ಆಯ್ಕೆ ಕ್ರಮಬದ್ಧವಾಗಿದೆಯೆಂದು ಸುಪ್ರೀಂ ಕೋರ್ಟ್ ಇಂದು ಘೋಷಿಸಿತು.
ಶ್ರೀ ಗಿರಿಯವರ ಚುನಾವಣೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಂಸತ್ ಸದಸ್ಯ ಅಬ್ದುಲ್ ಘನಿ ಧಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು. ಅರ್ಜಿದಾರರು ಶ್ರೀ ಗಿರಿ ಅವರಿಗೆ ಕೋರ್ಟ್ ವೆಚ್ಚವನ್ನು ತೆರಬೇಕಾದ್ದಿಲ್ಲ.
‘ಧೂಮಪಾನ ಅಪಾಯ’
ನವದೆಹಲಿ, ಮೇ 11– ಧೂಮಪಾನ ಅಪಾಯ ಎಂಬ ಘೋಷಣೆಯನ್ನು ಸಿಗರೇಟ್ ಪ್ಯಾಕೆಟ್ಟುಗಳ ಮೇಲೆ ಜಾಹೀರಾತು ಹಾಕುವಂತೆ ಸಿಗರೇಟು ತಯಾರಕರಿಗೆ ಒತ್ತಾಯ ಪಡಿಸಲಾಗುವುದು.
ಧೂಮಪಾನ ಮಾಡುವುದನ್ನು ನಿರುತ್ಸಾಹಗೊಳಿಸುವುದೇ ಇದರ ಉದ್ದೇಶ.
ಬ್ರಿಟನ್ ಮತ್ತು ಅಮೆರಿಕಗಳಲ್ಲಿನಂತೆ ಈ ಉದ್ದೇಶಕ್ಕಾಗಿ ಶಾಸನವೊಂದನ್ನು ತರುವ ವಿಷಯವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸ್ಟೇಟ್ ಸಚಿವ ಡಾ. ಚಂದ್ರಶೇಖರ್ ಅವರು ಇಂದು ಲೋಕಸಭೆಗೆ ತಿಳಿಸಿದರು.
ತಾಂಬೂಲ ಚರ್ವಣವು ಬಾಯಿ ಕ್ಯಾನ್ಸರ್ಗೆ ಕಾರಣವೆಂಬುದು ಹತ್ತು ವರ್ಷಗಳ ಸಂಶೋಧನೆ ನಂತರ ಮದರಾಸ್ ಕ್ಯಾನ್ಸರ್ ಸಂಶೋಧನೆ ಸಂಸ್ಥೆ ನಿರ್ಧಾರಕ್ಕೆ ಬಂದಿದೆ ಎಂದೂ ಅವರು ಶ್ರೀ ನಾಥ್ ಪೈ ಅವರಿಗೆ ಹೇಳಿದರು.