ಬೆಂಗಳೂರು, ಜೂನ್ 18– ರಾಜ್ಯದಲ್ಲಿ ತಯಾರಿಸುವ ಕನ್ನಡ ಚಲನಚಿತ್ರಗಳಿಗೆ ನೀಡುವ 50,000 ರೂಪಾಯಿ ಸಹಾಯಧನವನ್ನು 1970ರ ಏಪ್ರಿಲ್ 1ರಿಂದ ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆಯೆಂದು ತಿಳಿದುಬಂದಿದೆ.
ಚಲನಚಿತ್ರೋದ್ಯಮದ ಬೆಳವಣಿಗೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ, ರಾಜ್ಯದಲ್ಲಿ ತಯಾರಾದ ಚಲನಚಿತ್ರಗಳಿಗೆ ಈ ಸಹಾಯಧನವನ್ನು ಸರ್ಕಾರ ನೀಡುತ್ತಿತ್ತು.
ಸಂಪನ್ಮೂಲಗಳ ಸಮಿತಿಯ ಶಿಫಾರಸಿನಂತೆ ಸರ್ಕಾರ ಈ ಸಹಾಯಧನ ನೀಡಿಕೆಯನ್ನು ನಿಲ್ಲಿಸಲು ನಿರ್ಧಾರ ಕೈಗೊಂಡಿದೆ.
ಅತೃಪ್ತಿಯ ತೆಕ್ಕೆಯಲ್ಲಿ ಪೂರ್ವ ಪಾಕಿಸ್ತಾನ
ಢಾಕಾ, ಜೂನ್ 18– ಬಾಂಬುಗಳ ಎಸೆತದ ಕಿರುಕುಳ, ಮುಷ್ಕರದ ಅಬ್ಬರ, ಕ್ಷಾಮ– ಡಾಮರದ ಭೀತಿಯಿಂದ, ಪಾಕಿಸ್ತಾನದ ರಾಜಕೀಯ ‘ಚಕಮಕಿ ಪೆಟ್ಟಿಗೆ’ ಎನಿಸಿರುವ ಪೂರ್ವ ಬಂಗಾಳ ಹತೋಟಿ ತಪ್ಪಿ ಹೋಗಲಿದೆ ಎಂದು ಪಾಕಿಸ್ತಾನ್ ಸೈನ್ಯ ತಿಳಿಸಿದೆ.
ಶಾಂತಿ ಭಂಗದ ಭೀತಿ ಇದೆ ಎಂದೂ ಹೇಳಿದೆ. ರಾಷ್ಟ್ರವನ್ನು ಸಿವಿಲಿಯನ್ನರ ಆಡಳಿತಕ್ಕೆ ಒಪ್ಪಿಸುವ ಸಂಬಂಧ ಚುನಾವಣೆಗಳನ್ನು ನಡೆಸುವುದು ಅಗತ್ಯವೆಂದೂ ತಿಳಿಸಿದೆ.