ರಾಯಚೂರು, ಸೆ. 9– ‘ರಾಜ್ಯದಲ್ಲಿ ಸ್ವಾರ್ಥ ಹಿತಾಸಕ್ತಿ ಉದ್ದೇಶದಿಂದ ಕೆಲವು ಮಂದಿ ‘ಅತೃಪ್ತರು’ ಆಡಳಿತ ಕಾಂಗ್ರೆಸ್ ಪಕ್ಷವನ್ನು ರಚಿಸಿಕೊಂಡಿದ್ದಾರೆ. ಆದರೆ, ಸಂಸ್ಥಾ ಕಾಂಗ್ರೆಸ್ ಚೆನ್ನಾಗಿ ಬೇರೂರಿರುವ ಪಕ್ಷವಾಗಿದೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ತಿಳಿಸಿದರು.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ‘ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಬಹುಮತ ಕಳೆದುಕೊಂಡರೆ ಮೈಸೂರು ಸಹ ಪಶ್ಚಿಮ ಬಂಗಾಳದ ಹಾದಿ ಹಿಡಿಯುವುದು’ ಎಂದು ಎಚ್ಚರಿಕೆ ನೀಡಿದರು.
ನಾಯಿಕೊಡೆಗಳಂತೆ ಬೆಳೆಯುವ ರಾಜಕೀಯ ಪಕ್ಷಗಳ ಬಗ್ಗೆ ವಿಷಾದಿಸಿದ ಅವರು, ಆಗಾಗ್ಗೆ ನಡೆಯುವ ಪಕ್ಷಾಂತರಗಳನ್ನು ಖಂಡಿಸಿದರು.
ಸ್ವ ಇಚ್ಛೆಯಿಂದ ಜಂಬೂಸವಾರಿ ಕೈಬಿಡುವಂತೆ ಒಡೆಯರಿಗೆ ಸಲಹೆ
ಬೆಂಗಳೂರು, ಸೆ. 9– ರಾಷ್ಟ್ರಪತಿಯ ಆಜ್ಞೆಯನ್ನನುಸರಿಸಿ ದಸರಾ ಉತ್ಸವದ ರಾಜಸಭಾ ಹಾಗೂ ಜಂಬೂಸವಾರಿ ನಡೆಸುವುದನ್ನು ಮಾಜಿ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್ ತಾವಾಗಿಯೇ ಕೈಬಿಡಬೇಕೆಂದು ವಿಧಾನಸಭೆಯ ಆಡಳಿತ ಕಾಂಗ್ರೆಸ್ ಸದಸ್ಯ ಶ್ರೀ ಅಜೀಜ್ ಸೇಠ್ ಅವರು ಇಂದು ಇಲ್ಲಿ ಸಲಹೆ ಮಾಡಿದರು.
‘ಮಾಜಿ ಮಹಾರಾಜರು ಸ್ವಯಿಚ್ಛೆಯಿಂದ ಈ ನಿರ್ಧಾರ ಕೈಗೊಂಡು ಉತ್ತಮ ಉದಾಹರಣೆಯಾಗಬೇಕು. ಮೈಸೂರು ರಾಜರು ಹಿಂದಿನಿಂದಲೂ ಮಾರ್ಗದರ್ಶಕರಾಗಿ ನಡೆದುಕೊಂಡು ಬಂದಿದ್ದಾರೆ’ ಎಂದು ಆಶಿಸಿದರು.