ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿವಾದದ ಶವಪೆಟ್ಟಿಗೆಗೆ ಕೊನೆಯ ಮೊಳೆ?

ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವೆ ಬೇಕು ಸಮತೋಲನ
Last Updated 9 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ವ್ಯಕ್ತಿವಾದ ಅಥವಾ ಪ್ರತೀ ವ್ಯಕ್ತಿಗೂ ಅವನದೇ ಆದ ಬೆಲೆ ಇದೆ ಎನ್ನುವ ನಂಬಿಕೆಯು ನಮ್ಮ ಅರ್ಥವ್ಯವಸ್ಥೆ, ನ್ಯಾಯದಾನ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆಯ ಹಿಂದಿನ ಆಲೋಚನೆಗಳಿಗೆ ನೆಲೆಗಟ್ಟಾಗಿ ಶತಮಾನಗಳಿಂದಲೂ ನಿಂತುಕೊಂಡಿದೆ. ಆದರೆ, ಜನರ ಹಕ್ಕುಗಳು ಹಾಗೂ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ಎನ್ನುವ ಮೌಲ್ಯಕ್ಕೆ ಈಚಿನ ದಿನಗಳಲ್ಲಿ ತೀವ್ರ ಸವಾಲುಗಳು ಎದುರಾಗಿವೆ. ಐರೋಪ್ಯ ಜಗತ್ತು ಕಂಡ ಜ್ಞಾನೋದಯದ ಕಾಲಘಟ್ಟದಲ್ಲಿಯೇ ವ್ಯಕ್ತಿವಾದದ ಮೂಲವೂ ಇದೆ. ಪ್ರಭುತ್ವ ಅಥವಾ ಸಾಮಾಜಿಕ ಗುಂಪುಗಳ ಹಿತಾಸಕ್ತಿಗಳಿಗಿಂತಲೂ ವ್ಯಕ್ತಿಯ ಹಿತಾಸಕ್ತಿಗಳು ಹೆಚ್ಚು ಮುಖ್ಯವಾಗುತ್ತವೆ ಎಂದು ವ್ಯಕ್ತಿವಾದ ಹೇಳುತ್ತದೆ. ಇದು ಮುಕ್ತ ಮಾರುಕಟ್ಟೆಯ ವ್ಯವಸ್ಥೆಗೆ ಜನ್ಮನೀಡಿತು ಕೂಡ.

ಪಾಶ್ಚಿಮಾತ್ಯ ಶೈಲಿಯ ವ್ಯಕ್ತಿವಾದವು ಎರಡನೆಯ ವಿಶ್ವಯುದ್ಧದ ನಂತರದಲ್ಲಿ ಹೆಚ್ಚು ವ್ಯಾಪಕವಾಯಿತು. ಯುರೋಪಿನ ಬಹುದೊಡ್ಡ ಭೂಪ್ರದೇಶವು ಕಮ್ಯುನಿಸ್ಟ್‌ ವ್ಯವಸ್ಥೆಯ ಅಡಿಯಲ್ಲಿ ಇದ್ದರೂ, ಚೀನಾವು ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳದಿದ್ದರೂ ಅಮೆರಿಕದ ನಾಯಕತ್ವದ ಕಾರಣದಿಂದಾಗಿ ವ್ಯಕ್ತಿವಾದವು ಮುನ್ನಡೆ ಕಾಣುತ್ತಿತ್ತು– ಸ್ವಾಭಿಮಾನಿ ಹಾಗೂ ಗಟ್ಟಿತನದಮನುಷ್ಯ ಈ ವಾದದ ಕೇಂದ್ರಬಿಂದುವಿನಲ್ಲಿ ಇದ್ದ, ಮುಕ್ತ ಆಲೋಚನೆಗಳ ಮೂಲಕ ಪ್ರಗತಿಯ ಚಕ್ರ ತಿರುಗಿಸುತ್ತಿದ್ದ.

ಆ ಕಾಲಘಟ್ಟದಲ್ಲೇ ಇನ್ನೊಂದು ಬಗೆಯ ವ್ಯಕ್ತಿವಾದ ಕೂಡ ಚಾಲ್ತಿಯಲ್ಲಿ ಇತ್ತು. ಇದು ಗಾಂಧೀಜಿ ಮತ್ತು ಅವರ ಸಲಹೆಗಾರರ ನಂಬಿಕೆಗಳನ್ನು ಆಧರಿಸಿತ್ತು. ಈ ವ್ಯಕ್ತಿವಾದಕ್ಕೆ ಆಧ್ಯಾತ್ಮಿಕ ಬೇರುಗಳು ಇದ್ದವು. ಪಾಶ್ಚಿಮಾತ್ಯಶೈಲಿಯ ವ್ಯಕ್ತಿವಾದವು ಭೌತಿಕವಾದವಷ್ಟೇ ಆಗಿಬಿಡಬಹುದು ಎಂಬುದನ್ನು ಗಾಂಧೀಜಿ ಗುರುತಿಸಿದ್ದರು. ವ್ಯಕ್ತಿಯು ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ದಾರಿಗಳನ್ನು ಬಲ್ಲವನಷ್ಟೇ ಅಲ್ಲ; ಆತ ಸರಿ–ತಪ್ಪುಗಳನ್ನು ಗುರುತಿಸಬಲ್ಲವ, ತನ್ನ ಕೃತ್ಯಗಳಿಗೆ ಉತ್ತರದಾಯಿ ಕೂಡ ಆಗಬಲ್ಲವ ಎಂಬುದಾಗಿ ಕಂಡುಕೊಂಡಿದ್ದರು. ಸಾಮಾಜಿಕ ಪ್ರಗತಿಯ ಕೇಂದ್ರಭಾಗದಲ್ಲಿ ಮಾನವ ಹಕ್ಕುಗಳನ್ನು ಇರಿಸಲಾಗಿತ್ತು. ಕಟ್ಟಕಡೆಯ ಮನುಷ್ಯನ ಮೇಲೆ ಗಮನ ನೀಡುವ ಈ ವ್ಯವಸ್ಥೆಯಡಿ, ಆತನ ಹೆಸರಿನಲ್ಲೇ ಸಮಾಜ ಮತ್ತು ಪ್ರಭುತ್ವವು ತಮ್ಮ ಧರ್ಮ ಪಾಲಿಸುತ್ತಿದ್ದವು.

ಮೊದಲ ಮಾದರಿಯ ವ್ಯಕ್ತಿವಾದವು ಮೂರು ಶತಮಾನಗಳ ಕಾಲ ತೀವ್ರಬಗೆಯ ಅನ್ವೇಷಣೆಗಳನ್ನು ಸಾಧ್ಯವಾಗಿಸಿತು. ಉದ್ಯಮಿಗಳು, ಸೃಜನಶೀಲ ಕಲಾವಿದರು, ಸಾರ್ವಜನಿಕ ಬುದ್ಧಿಜೀವಿಗಳು ಆಲೋಚನೆಗಳಿಗೆ, ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಿದರು. ಇದು ಹೆಚ್ಚಿನ ಜನರಿಗೆ ಹಿಂದೆಂದೂ ಇಲ್ಲದಷ್ಟು ಭೌತಿಕ ಸಂಪತ್ತನ್ನು ಸೃಷ್ಟಿಸಿತು– ಈ ಮಾತಿಗೆ ಪ್ರತಿವಾದಗಳು ಇವೆ.

ಎರಡನೆಯ ಮಾದರಿಯ ವ್ಯಕ್ತಿವಾದವು, ಹಲವು ದುರ್ಬಲ ಗುಂಪುಗಳ ಅಭಿವೃದ್ಧಿಗಾಗಿ, ಅವರಿಗೆ ಬೆಂಬಲವಾಗಿ ಪ್ರಭುತ್ವ ಮತ್ತು ಸಮಾಜ ಮಧ್ಯಪ್ರವೇಶ ಮಾಡುವುದಕ್ಕೆ ಪ್ರೇರಣೆಯಾಯಿತು. ವ್ಯಕ್ತಿಯ ಘನತೆಯನ್ನು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ
ವನ್ನು ಕಾಪಾಡಿಕೊಂಡೇ ಪ್ರತೀ ವ್ಯಕ್ತಿಗೂ ಸಾಮಾಜಿಕ ಸುರಕ್ಷಾ ಕ್ರಮಗಳನ್ನು ಕಲ್ಪಿಸಿಕೊಡುವ ಇದು ಪೂರ್ಣಪ್ರಮಾಣದಲ್ಲಿ ಜಾರಿಯಾಗದೇ ಇದ್ದರೂ ಬಹುದೊಡ್ಡ ಪ್ರಯೋಗವಂತೂ ಹೌದು. ಆದರೆ, ವ್ಯಕ್ತಿವಾದ ಹಾಗೂ ವ್ಯಕ್ತಿಗೆ ಪ್ರಾಧಾನ್ಯ ನೀಡುವ ವ್ಯವಸ್ಥೆಗೆ ಕಳೆದೊಂದು ದಶಕದಲ್ಲಿ ಗಂಭೀರ ಅಪಾಯಗಳು ಎದುರಾಗಿವೆ.

ಇದಕ್ಕೆ ಮೂರು ಪ್ರಮುಖ ಕಾರಣಗಳು ಇವೆ. ಆರ್ಥಿಕ ಕುಸಿತದ ಜೊತೆ ಭಯೋತ್ಪಾದನೆಯೂ ಸೇರಿಕೊಂಡಿದ್ದು ಮೊದಲ ಕಾರಣ. 2001ರಲ್ಲಿ ಅಮೆರಿಕದ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಪರಿಸ್ಥಿತಿ ಬದಲಾಯಿತು, ಇದು ವ್ಯಕ್ತಿವಾದಕ್ಕೆ ಎದುರಾದ ಅತಿದೊಡ್ಡ ಶಾಕ್‌ ಟ್ರೀಟ್ಮೆಂಟ್‌. ವ್ಯಕ್ತಿವಾದ ಹಾಗೂ ಉದಾರತಾವಾದದ ಗಟ್ಟಿ ನೆಲೆ ಅಮೆರಿಕ. ಆದರೆ ಅಲ್ಲಿನ ಜನ ಸಾರ್ವಜನಿಕ ಸುರಕ್ಷತೆಗಾಗಿ ಹಲವು ಸ್ವಾತಂತ್ರ್ಯಗಳನ್ನು ಮತ್ತು ಖಾಸಗಿತನವನ್ನು ಬಿಟ್ಟುಕೊಡಬೇಕಾಯಿತು. ಇದಾದ ನಂತರ ಎದುರಾಗಿದ್ದು 2008ರ ಆರ್ಥಿಕ ಕುಸಿತ. ಇದರ ಬೆನ್ನಿಗೇ ನಾವು ಜಾಗತೀಕರಣೋತ್ತರ ಯುಗವನ್ನು ಪ್ರವೇಶಿಸಿದೆವು. ಕಾಕತಾಳೀಯ ಎಂಬಂತೆ ಪ್ರಭುತ್ವದ ಅಧಿಕಾರವನ್ನು ಕೇಂದ್ರೀಕೃತವಾಗಿಸುವ ಸರ್ವಾಧಿಕಾರಿ ಆಡಳಿತಗಳೂ ಆ ಹೊತ್ತಿನಲ್ಲಿ ಪ್ರವರ್ಧಮಾನಕ್ಕೆ ಬಂದವು.

ವ್ಯಕ್ತಿಯೊಬ್ಬ ತನ್ನ ದೇಶದ ಬಗ್ಗೆ ಹೊಂದಿರುವ ಪ್ರೀತಿಯನ್ನು ಪ್ರಾಮಾಣಿಕ ಟೀಕೆಗಳ ಮೂಲಕವೂವ್ಯಕ್ತಪಡಿಸಬಹುದಾಗಿದ್ದ ಭಾವುಕ ದೇಶಭಕ್ತಿಯು ಹಲವು ದೇಶಗಳಲ್ಲಿ ಬಿರುಸಿನ ರಾಷ್ಟ್ರೀಯವಾದವಾಗಿ ಪರಿವರ್ತನೆ ಕಂಡಿತು. ಭಿನ್ನಮತಕ್ಕೆ ವಿರೋಧ ಎದುರಾಯಿತು. ಇದು ಸ್ವತಂತ್ರ ವ್ಯಕ್ತಿಯನ್ನು ರಾಜಕೀಯ ವೇದಿಕೆಯಿಂದ ಮತ್ತಷ್ಟು ಹೊರಗೆ ತಳ್ಳಿತು.

ಬೃಹತ್ ಸಾಮಾಜಿಕ ವೇದಿಕೆಗಳನ್ನು ಕಲ್ಪಿಸಿದ ಇಂಟರ್ನೆಟ್ ದೈತ್ಯರ ಉಗಮ ಎರಡನೆಯ ಕಾರಣ. ಆರಂಭದಲ್ಲಿ ಇವು ವ್ಯಕ್ತಿಪ್ರಾಧಾನ್ಯವನ್ನು ರಕ್ಷಿಸುವಂತೆ ಕಂಡುಬಂದವು. ಗ್ರಾಹಕನೇ ರಾಜನಾಗಿದ್ದ; ಕಾರ್ಮಿಕನಾಗಿದ್ದ ನೌಕರ ಸ್ವಯಂಉದ್ಯೋಗ ಕಂಡುಕೊಂಡು ಉದ್ಯಮಿಯಾಗಿದ್ದ; ಪೌರನು (ಸಿಟಿಜನ್) ನೆಟ್ಟಿಗ (ನೆಟಿಜನ್) ಆಗಿದ್ದ. ಆತ ಎಲ್ಲ ವಿಚಾರಗಳ ಬಗ್ಗೆಯೂ ತನ್ನ ಅಭಿಪ್ರಾಯ ವ್ಯಕ್ತಪಡಿಸಬಲ್ಲವನಾಗಿದ್ದ. ಆದರೆ ವ್ಯಕ್ತಿ ಹೊಂದಿರುವ ಆಯ್ಕೆಯು ಮರೀಚಿಕೆಯಂತಾಯಿತು. ಈಗ ಕಣ್ಗಾವಲು ಬಂಡವಾಳಶಾಹಿ ವ್ಯವಸ್ಥೆ ಎಂದು ಹೇಳುವುದರ ಆರಂಭ ಅದಾಗಿತ್ತು. ಇಲ್ಲಿ ಗುತ್ತಿಗೆ ಆಧಾರದಲ್ಲಿ ಕರೆದಾಗ ಬಂದು ಕೆಲಸ ಮಾಡುವವರಿಗೆ ಆದಾಯ ಕಡಿಮೆ, ಕೆಲಸ ಜಾಸ್ತಿ! ಗ್ರಾಹಕನು ಇಲ್ಲಿ ದತ್ತಾಂಶ ಮಾತ್ರ; ಕೃತಕ ಬುದ್ಧಿಮತ್ತೆಯನ್ನು ಬಳಸಿ ಆತನ ಸ್ವತಂತ್ರ ಆಲೋಚನೆಗಳನ್ನು ಕೂಡ ಬೇಕಾದಂತೆ ಬಾಗಿಸಬಹುದು. ಇದೇ ತಂತ್ರಜ್ಞಾನವು ಕಣ್ಗಾವಲು ವ್ಯವಸ್ಥೆಗೆ ಇನ್ನಷ್ಟು ಇಂಬು ನೀಡಿತು, ವ್ಯಕ್ತಿಯ ಹಕ್ಕುಗಳು ಮತ್ತು ಖಾಸಗಿತನವನ್ನು ಇನ್ನಷ್ಟು ಕಿರಿದಾಗಿಸಿತು. ಚುನಾವಣಾ ಪ್ರಜಾತಂತ್ರದಲ್ಲಿ ಅತ್ಯಮೂಲ್ಯವಾದ ವ್ಯಕ್ತಿಯ ಮತಗಳನ್ನು ಕೂಡ ತಿರುಚಬಹುದು!

ಮೂರನೆಯ ಕಾರಣ, ಜಗತ್ತಿನಲ್ಲಿ ಪರಸ್ಪರ ಅವಲಂಬನೆ ಇನ್ನಷ್ಟು ಹೆಚ್ಚಾಗಿರುವುದು. ಹವಾಮಾನ ಬದಲಾವಣೆ ಹಾಗೂ ವಾಯುಮಾಲಿನ್ಯಕ್ಕೆ ಗಡಿಗಳ ಹಂಗಿಲ್ಲ. ಆಫ್ರಿಕಾದ ಬ್ಯಾಕ್ಟೀರಿಯಾಗಳು ಅಮೆರಿಕದ ಜನರನ್ನು ಅನಾರೋಗ್ಯಕ್ಕೆ ಈಡುಮಾಡಬಲ್ಲವು.
ಇಂಡೊನೇಷ್ಯಾದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದರೆ ಏಷ್ಯಾದ ಜನ ಉಸಿರಾಡಲು ಕಷ್ಟಪಡಬೇಕಾಗುತ್ತದೆ. ನಾವು ಎಚ್ಚರಿಕೆಯಿಂದ ಇರದಿದ್ದರೆ, ಕೋವಿಡ್–19 ವ್ಯಕ್ತಿವಾದದ ಶವಪೆಟ್ಟಿಗೆಯ ಮೇಲಿನ ಅಂತಿಮ ಮೊಳೆ ಆಗಬಹುದು. ವೈಯಕ್ತಿಕ ಹಕ್ಕು, ಸೌಲಭ್ಯಗಳನ್ನು ನಾವು ತಕ್ಷಣವೇ ಬಿಟ್ಟುಕೊಡುವಂತೆ, ಪ್ರಭುತ್ವದ ಹಾಗೂ ನಮ್ಮ ಹತ್ತಿರದ ಗುಂಪುಗಳ ನಿರ್ದೇಶನಗಳನ್ನು ಒಪ್ಪಿಕೊಳ್ಳುವಂತೆ ಮಾಡಿದೆ ಈ ಕಾಯಿಲೆ. ಈ ಸ್ವಾತಂತ್ರ್ಯಗಳನ್ನುಬಳಸುವುದನ್ನು ಮುಂದುವರಿಸಿದರೆ ಆಗುವ ಅಪಾಯವನ್ನು ಗಮನಿಸಿ, ಅವುಗಳನ್ನು ಬಿಟ್ಟುಕೊಡುವ ತೀರ್ಮಾನ ಮಾಡಿದ್ದು ಸರಿಯಾಗಿಯೇ ಇದೆ.

ಆದರೆ, ವ್ಯಕ್ತಿವಾದದ ಒಳ್ಳೆಯ ಅಂಶಗಳನ್ನು ಕಳೆದುಕೊಳ್ಳದಿರುವ ಎಚ್ಚರಿಕೆಯೂ ನಮ್ಮಲ್ಲಿರಬೇಕು.‌ಕಾನೂನಿನ ಆಡಳಿತಕ್ಕೆ ಅಥವಾ ವಿಸ್ತೃತ ವ್ಯವಸ್ಥೆಗಳಿಗೆಉತ್ತರದಾಯಿ ಅಲ್ಲದ ದಬ್ಬಾಳಿಕೆಯ ಗುಂಪುಗಳ ಎದುರು ವ್ಯಕ್ತಿಯ ಅಸ್ಮಿತೆ ಮರೆಯಾಗದಂತೆಯೂ ನಾವು ನೋಡಿಕೊಳ್ಳಬೇಕು. ಸರ್ಕಾರದ ಆದೇಶವನ್ನು ಪಾಲಿಸುವುದು ಒಂದು ವಿಚಾರ; ತರ್ಕವಿಲ್ಲದ ಭೀತಿಗೆ ಬಲಿಯಾಗುವುದು ಇನ್ನೊಂದು ವಿಚಾರ. ಜನ ತಾವೇ ಕಾನೂನು ಕೈಗೆತ್ತಿಕೊಳ್ಳುವುದು ಹೆಚ್ಚುತ್ತಿರುವುದನ್ನುಈಗಾಗಲೇ ನೋಡುತ್ತಿದ್ದೇವೆ. ಭಯಭೀತರಾದ ಗ್ರಾಮಸ್ಥರು ಹೊರಗಿನವರಿಗೆ ಪ್ರವೇಶ ನಿರಾಕರಿಸುವುದು; ವೈದ್ಯರಿಗೆ ಪೇಟೆಯಲ್ಲಿರುವ ತಮ್ಮ ಮನೆಗಳಿಗೆ ಹಿಂದಿರುಗಲು ಅವಕಾಶ ನಿರಾಕರಿಸಿರುವುದು; ಯಾವ ಭೀತಿಯೂ ಇಲ್ಲದೆ ಪೊಲೀಸರು ಲಾಠಿ ಬೀಸುವುದು...

ಸಾಂಕ್ರಾಮಿಕವೊಂದಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯಿಸುವುದು ವ್ಯಕ್ತಿವಾದದ ಒಳ್ಳೆಯ ಅಂಶಗಳನ್ನು ಸದ್ಯದ ಭವಿಷ್ಯದಲ್ಲಿ ಕೊನೆಗೊಳಿಸಬಹುದು. ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವಿನ ಸಮತೋಲನವನ್ನುಪುನಃ ಸ್ಥಾಪಿಸಲು ಸಮಾಜವು ತಕ್ಷಣ ಕ್ರಿಯಾಶೀಲವಾಗಬೇಕು. ಯಾವ ಮನುಷ್ಯನೂ ದ್ವೀಪವಲ್ಲ; ಆದರೆ ಪ್ರತೀ ವ್ಯಕ್ತಿಗೂ ಇರುವ ಮೌಲ್ಯವನ್ನು ಕಡೆಗಣಿಸಲಾಗದು. ಎಲ್ಲ ಒಳ್ಳೆಯ ಸಮಾಜಗಳ ನೆಲೆಗಟ್ಟು ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT