ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಹುತದ ಗಂಟೆ ಎಚ್ಚರಿಸುತ್ತಿದೆ

ಅತಿವೃಷ್ಟಿ ಮತ್ತು ಅನಾವೃಷ್ಟಿಯು ಸರ್ಕಾರಗಳ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸುತ್ತಿವೆ
Last Updated 23 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಜಗತ್ತಿನ ಅರ್ಧ ಭಾಗದ ದೇಶಗಳಲ್ಲಿ ಪದೇ ಪದೇ ತೀವ್ರ ನೆರೆ ಕಾಣಿಸಿಕೊಳ್ಳುತ್ತಿದೆ. ಇನ್ನರ್ಧ ಭಾಗದ ದೇಶಗಳಲ್ಲಿ ಭೀಕರ ಬರ ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಬ್ರೆಜಿಲ್, ಆಸ್ಟ್ರೇಲಿಯಾ, ಅಮೆರಿಕ, ಚೀನಾ, ಆಫ್ರಿಕಾ, ಭಾರತದಲ್ಲಿ ಹಾಗೂ ಆಗ್ನೇಯ ಏಷ್ಯಾ ಭಾಗದಲ್ಲಿ ಅರಣ್ಯಗಳು ಹೊತ್ತಿ ಉರಿಯುತ್ತಿವೆ. ಹರಿದ್ವರ್ಣ ಕಾಡುಗಳೇ ಬೆಂಕಿಗೆ ಆಹುತಿಯಾಗುತ್ತಿರುವುದು ಜಗತ್ತಿನ ಬಹುದೊಡ್ಡ ಅನಾಹುತದ ಮುನ್ಸೂಚನೆಯಾಗಿದೆ. ಇದು ಹೀಗೇ ಮುಂದುವರಿದರೆ ಜಗತ್ತಿನ ಜೀವಸಂಕುಲವು ಆಮ್ಲಜನಕದ ಕೊರತೆಯಿಂದ ನರಳುವುದಂತೂ ಶತಃಸಿದ್ಧ. ಅಂತಹ ಸ್ಥಿತಿ ಈಗಾಗಲೇ ಪ್ರಾರಂಭವಾಗಿದ್ದು, ಜಗತ್ತಿನ ಅಪರೂಪದ ಕೆಲವು ಜೀವಸಂಕುಲ ಮತ್ತು ಸಸ್ಯಸಂಕುಲ ಜಗತ್ತಿನಿಂದ ಮಾಯವಾಗಿವೆ. ಮನುಷ್ಯ ಕೂಡ ವಾಯುಮಾಲಿನ್ಯ, ಜಲಮಾಲಿನ್ಯದ ಜೊತೆಗೆ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತೊಂದರೆಗೆ ಸಿಲುಕಿದ್ದಾನೆ.

ಕರ್ನಾಟಕವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಈ ವರ್ಷದ ಮುಂಗಾರು ಮಳೆ ಅಕ್ಟೋಬರ್ ತಿಂಗಳಾದರೂ ಇನ್ನೂ ಮುಗಿದಿಲ್ಲ. ರಾಜ್ಯದ ಉತ್ತರ ಭಾಗ ಮತ್ತು ಪಶ್ಚಿಮ ಭಾಗ ಈಗಾಗಲೇಮೂರು ಬಾರಿ ಜಲಪ್ರಳಯದಿಂದ ತತ್ತರಿಸಿಹೋಗಿವೆ. ಇಂತಹ ಜಲಪ್ರಳಯವನ್ನು ರಾಜ್ಯದ ಜನ ಹಿಂದೆಂದೂ ಕಂಡಿರಲಿಲ್ಲ. ಎಲ್ಲಾ ನದಿಗಳು ಅನೇಕ ಸಲ ತೀವ್ರ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿದು ಜನರ ಬದುಕನ್ನು ಮೂರಾಬಟ್ಟೆ ಮಾಡಿವೆ. ಈ ಜಲಪ್ರಳಯ ಸೃಷ್ಟಿಸಿದ ಹಾನಿ ಸರಿಪಡಿಸಲು ಮತ್ತು ಸಂತ್ರಸ್ತರ ಬವಣೆ ನಿವಾರಿಸಲು ರಾಜ್ಯ ಸರ್ಕಾರವು ಅಪಾರ ಸಂಪನ್ಮೂಲ ಕ್ರೋಡೀಕರಿಸಬೇಕಿದೆ. ಇಂತಹ ಸ್ಥಿತಿಯನ್ನು ದೇಶದ ಉತ್ತರ ಮತ್ತು ಈಶಾನ್ಯ ರಾಜ್ಯಗಳಲ್ಲೂ ಕಾಣಬಹುದು. ಪಶ್ಚಿಮ ಘಟ್ಟಗಳಂತೂ ಹೈರಾಣಾಗಿ ಹೋಗಿವೆ. ಸಾಲದ್ದಕ್ಕೆ ಈಗ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಧಾರಾಕಾರ ಮಳೆ ಸುರಿಯುತ್ತಿದೆ.

ಇಷ್ಟಕ್ಕೂ ಇಷ್ಟೊಂದು ಮಳೆ ಏಕೆ ಸುರಿಯುತ್ತಿದೆ ಎನ್ನುವುದನ್ನು ನಿಖರವಾಗಿ ಹೇಳಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಜೂನ್‌ ತಿಂಗಳ ಕೊನೆಯಲ್ಲಿ ಪ್ರಾರಂಭವಾದ ಮಳೆ ಇನ್ನೂ ನಿಂತಿಲ್ಲ. ಈ ನೈರುತ್ಯ ಮುಂಗಾರು ಮಳೆಯಿಂದ ಗುಜರಾತಿನಿಂದ ಕೇರಳದವರೆಗೆ; ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳು; ಬಿಹಾರ, ಉತ್ತರಪ್ರದೇಶವೂ ತತ್ತರಿಸಿಹೋಗಿವೆ. ಇಂತಹ ಮಳೆಯನ್ನು ಪಶ್ಚಿಮ ಘಟ್ಟಗಳ ಉದ್ದಕ್ಕೂ ಎಂದೂ ಯಾರೂ ಕಂಡಿರಲಿಲ್ಲ. ಗೋದಾವರಿಯಿಂದ ಕೃಷ್ಣಾ, ಕಾವೇರಿ ಮತ್ತು ಅವುಗಳ ಉಪನದಿಗಳೆಲ್ಲ ಉಕ್ಕಿ ಹರಿದು, ನದಿ ದಡಗಳೇ ಅಲ್ಲ ಇಡೀ ಘಟ್ಟ ಪ್ರದೇಶ ಮತ್ತು ಬಯಲುಸೀಮೆ ಪ್ರದೇಶಗಳು ಜಲಾಶಯಗಳಾಗಿ ಪರಿವರ್ತನೆಗೊಂಡಿವೆ. ಸಾವಿರಾರು ಮನೆಗಳು ಕುಸಿದುಬಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿ, ಸಾವಿರಾರು ಸಾಕುಪ್ರಾಣಿಗಳು ಕೊಚ್ಚಿಹೋಗಿವೆ. ಎಲ್ಲ ಜಲಾಶಯಗಳೂ ಪದೇಪದೇ ತುಂಬಿ ಹರಿಯುತ್ತಿವೆ. ಮಳೆನೀರು, ಉಕ್ಕಿಬರುತ್ತಲೇ ಇದೆ. ಈ ಜಲಪ್ರಳಯ ಮತ್ತು ಅದರ ಫಲ
ವಾದ ಪ್ರವಾಹವು ಮನುಷ್ಯನ ನಿಯಂತ್ರಣಕ್ಕೆ ದಕ್ಕುತ್ತಿಲ್ಲ.

ಆದರೆ, ಇಷ್ಟು ಪ್ರಮಾಣದಲ್ಲಿ ಮಳೆ ಬೀಳಲು ಕಾರಣಗಳೇನು? ಮಾನವನು ನಿಸರ್ಗದ ಮೇಲೆ ನಡೆಸುತ್ತಿರುವ ಅಟ್ಟಹಾಸವೇ? ಜಾಗತಿಕ ತಾಪಮಾನ ಏರಿಕೆಯೇ? ಇಲ್ಲ ಇನ್ನೇನಾದರೂ ಕಾರಣಗಳು ಇವೆಯೇ ಎನ್ನುವುದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಒಂದು ಸಂಶೋಧನೆಯಂತೆ, 1931ರಿಂದ 2015ರವರೆಗೆ ಪಶ್ಚಿಮ ಘಟ್ಟದ ಉತ್ತರ ಭಾಗಗಳಲ್ಲಿ ಸರಾಸರಿ ಮಳೆ ಪ್ರತೀ ದಶಕಕ್ಕೆ ಎರಡು ಪಟ್ಟು ಜಾಸ್ತಿಯಾಗಿದ್ದರೆ, ದಕ್ಷಿಣ ಭಾಗದ ಘಟ್ಟದಲ್ಲಿ ಮೂರು ಪಟ್ಟು ಕಡಿಮೆಯಾಗಿದೆ ಎನ್ನಲಾಗಿದೆ. ಇದಕ್ಕೆ ಕಾರಣ, ಸಮುದ್ರದ ಮೇಲಿನ ಜೆಟ್‍ಸ್ಟ್ರೀಮ್. ಅಂದರೆ, ಉಷ್ಣ ತಾಪಮಾನವು ಉತ್ತರ ಭಾಗಕ್ಕೆ ವೇಗವಾಗಿ ಚಲಿಸುತ್ತಿರುವುದು. ಇದರಿಂದ ಅರಬ್ಬಿ ಸಮುದ್ರದ ಮೇಲಿನ ತಾಪಮಾನ ಹೆಚ್ಚಿ ಉತ್ತರದ ಕಡೆಗೆ ಚಲಿಸುತ್ತಿದೆ. ಇದರ ಜೊತೆಗೆ ಇತರ ನೈಸರ್ಗಿಕ ಪ್ರಕ್ರಿಯೆಗಳು ಕಾರಣವಾಗಿರುವುದಾಗಿ ಸಂಶೋಧನೆಗಳು ಹೇಳುತ್ತವೆ. ಜೆಟ್‍ಸ್ಟ್ರೀಮ್‍ನ ಕೆಳಮಟ್ಟದ ಮಧ್ಯಬಿಂದು 550 ಕಿ.ಮೀ.ಗಳ ಉತ್ತರಕ್ಕೆ ಸ್ಥಳಾಂತರಗೊಂಡಿರುವುದು ತಿಳಿದುಬರುತ್ತದೆ. ಇದು ಒಟ್ಟಾರೆ ಜಗತ್ತಿನಾದ್ಯಂತ ನಡೆಯುತ್ತಿರುವ ಜಾಗತಿಕ ತಾಪಮಾನ ಏರಿಕೆಯ ಒಂದು ಸಣ್ಣಉದಾಹರಣೆ ಮಾತ್ರ.

ಪ್ರತಿವರ್ಷ ರೈತರು ಮುಂಗಾರು ಮಳೆಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಕಾರಣ ಶೇ 90ರಷ್ಟು ಮಳೆ ಮುಂಗಾರಿನಿಂದಲೇ ಬರುತ್ತಿದ್ದು ದೇಶದ ಶೇ 75ರಷ್ಟು ಒಣ ಬೇಸಾಯ ಇದನ್ನೇ ಆಧರಿಸಿದೆ. ಇನ್ನು ಶೇ 25ರಷ್ಟು ನೀರಾವರಿ ಕೃಷಿ ಕೂಡ ಮುಂಗಾರು ಮಳೆಯಿಂದ ತುಂಬಿಕೊಳ್ಳುವ ಜಲಾಶಯಗಳನ್ನು ಆಧರಿಸಿದೆ. ದೇಶದ ಪಶ್ಚಿಮ ಕಡಲ ತೀರದಗುಂಟ 1,600 ಕಿ.ಮೀ. ಉದ್ದದ ಪಶ್ಚಿಮ ಘಟ್ಟಗಳು ಮೊದಲಿಗೆ ಮುಂಗಾರು ಮಳೆಯನ್ನು ಆಸ್ವಾದಿಸುತ್ತವೆ. ಇದಕ್ಕೆ ಕಾರಣ ಎತ್ತರವಾದ ಘಟ್ಟಗಳು ಮತ್ತು ದಟ್ಟ ಅರಣ್ಯಗಳು. ಇತ್ತೀಚಿನ ಸಂಶೋಧನೆಯಂತೆ, ಕಳೆದ 85 ವರ್ಷಗಳಲ್ಲಿ ಘಟ್ಟ ಪ್ರದೇಶದಲ್ಲಿ ಮಳೆಯ ಮಾದರಿ ಬದಲಾಗುತ್ತಿರುವುದು ಕಂಡುಬಂದಿದೆ. ಉತ್ತರ ಭಾಗದಲ್ಲಿ ಹೆಚ್ಚೆಚ್ಚು ಮಳೆ ಬಂದರೆ ದಕ್ಷಿಣ ಭಾಗದಲ್ಲಿ ಮಳೆ ಕಡಿಮೆಯಾಗುತ್ತಿದೆ.

ಉತ್ತರ ಅರಬ್ಬಿ ಸಮುದ್ರವು ಹೆಚ್ಚು ತಾಪಮಾನದಿಂದ ಬಿಸಿಯಾಗುತ್ತಿದ್ದಂತೆ ಸಮುದ್ರದ ಮೇಲೆ ಮೋಡಗಳು ಹೆಚ್ಚೆಚ್ಚು ಉದ್ಭವಿಸುತ್ತವೆ. ಅವು ರೈಲು ಬೋಗಿಗಳ ರೀತಿ ಪೂರ್ವಕ್ಕೆ ಸಾಗುವಾಗ ಪಶ್ಚಿಮ ಘಟ್ಟಗಳು ಗೋಡೆ ರೀತಿಯಲ್ಲಿ ಅಡ್ಡ ನಿಲ್ಲುತ್ತವೆ. ಆಗ ಮೋಡಗಳು ಮುಂದೆ ಸಾಗದೆ ಘಟ್ಟಗಳ ತಪ್ಪಲಲ್ಲಿ ಆಲಯ ಕಟ್ಟಿಕೊಂಡು, ಒಂದೇ ರೀತಿ ಧಾರಾಕಾರ ಮಳೆಯನ್ನು ಸುರಿಸುತ್ತವೆ. ಇದು ಒಂದು ರೀತಿಯಲ್ಲಿ ಸಮುದ್ರದಿಂದ ಎದ್ದು ಬರುವ ಚಂಡಮಾರುತ ಎನ್ನಬಹುದು. ಚಂಡಮಾರುತದಲ್ಲಿ ಮಳೆ– ಬಿರುಗಾಳಿ ಒಟ್ಟುಗೂಡಿ ಸಮುದ್ರದಿಂದ ಎದ್ದು ಬರುತ್ತವೆ. ಆದರೆ ಇಲ್ಲಿ ಮೋಡಗಳು ನಿರಂತರವಾಗಿ ಮಳೆಯನ್ನು ತಂದು ಘಟ್ಟಗಳ ಮೇಲೆ ಸುರಿಯುತ್ತವೆ. ಇದರ ಜೊತೆಗೆ ಮಧ್ಯೆಮಧ್ಯೆ ಜಲಸ್ಫೋಟಗಳೂ ಆಗುತ್ತವೆ. ಈ ಪ್ರಕ್ರಿಯೆ ದಿನಗಟ್ಟಲೇ ನಡೆಯುವುದರಿಂದ ವಿಪರೀತವಾದ ಮಳೆನೀರು ನದಿಗಳ ಮೂಲಕ ಉಕ್ಕಿಹರಿಯುತ್ತದೆ.

ಜನರು ನಿಸರ್ಗದ ಮೇಲೆ ನಡೆಸಿದ ಪ್ರಹಾರವು ಅನಾಹುತವಾಗಿ ಮಾರ್ಪಡುತ್ತದೆ. ಒಂದು ಕಾಲದಲ್ಲಿ ಜನಸಂಖ್ಯೆ ಕಡಿಮೆಯಿದ್ದು ಜನರು ನಿಸರ್ಗದ ಜೊತೆಗೆ ಬದುಕುತ್ತಾ, ಹಳ್ಳಕೊಳ್ಳ, ಕೆರೆ ಕುಂಟೆ ಕಲ್ಯಾಣಿಗಳನ್ನು ಜತನವಾಗಿ ಕಾಪಾಡಿಕೊಂಡಿದ್ದರು. ಮರಗಿಡಗಳನ್ನು ಬೆಳೆಸಿ ಸುತ್ತಲಿನ ಪ್ರದೇಶ ಸವಕಳಿಯಾಗದಂತೆ ನೋಡಿಕೊಳ್ಳುತ್ತಿದ್ದರು. ಅಂತರ್ಜಲವು ಭೂಮಿಯನ್ನು ತಂಪಾಗಿಟ್ಟು ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿತ್ತು.

ಜನಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಕೊಳವೆಬಾವಿಗಳನ್ನು ತೋಡಿ ಅಂತರ್ಜಲವನ್ನು ಪಾತಾಳಕ್ಕೆ ತಳ್ಳಲಾಯಿತು. ಕೆರೆಕುಂಟೆಗಳನ್ನು ಒತ್ತುವರಿ ಮಾಡಿಕೊಂಡು ತಿಪ್ಪೆಗುಂಡಿಗಳನ್ನಾಗಿ ಮಾಡಲಾಯಿತು. ಜಾನುವಾರುಗಳನ್ನು ಕಂಬಗಳಿಗೆ ಕಟ್ಟಿಹಾಕಿದಂತೆ, ಅಣೆಕಟ್ಟುಗಳನ್ನು ಕಟ್ಟಿ, ಸರಾಗವಾಗಿ ಹರಿಯುತ್ತಿದ್ದ ನದಿಗಳನ್ನು ಕಟ್ಟಿಹಾಕಲಾಯಿತು. ಈಗ ಒಂದು ದೊಡ್ಡ ಮಳೆ ಬಂದರೆ ಅದು ನಿಲ್ಲದೆ ಎಲ್ಲವನ್ನೂ ಕೊಚ್ಚಿಕೊಂಡು ಮುಂದೆ ಸಾಗಲೇಬೇಕಿದೆ. ಇನ್ನು ಕರ್ನಾಟಕದ ಪಶ್ಚಿಮ ಘಟ್ಟಗಳ ವಿಷಯಕ್ಕೆ ಬಂದರೆ, ಇಂತಹ ಪರಿಸ್ಥಿತಿ ಮುಂದೆಯೂ ಮರುಕಳಿಸುತ್ತಲೇ ಇರುತ್ತದೆ. ಏಕೆಂದರೆ, ಮನುಷ್ಯನು ನಿಸರ್ಗದ ಮೇಲೆ ಮಾಡಿರುವ ಅನಾಹುತದ ಗಂಟೆಯನ್ನು ಹಿಂದಕ್ಕೆ ತಿರುಗಿಸಲಾರ.

ಲೇಖಕ: ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT