ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಬದುಕಿನ ಅವಶ್ಯಕತೆಯ ಎಚ್ಚರ

Last Updated 21 ಮಾರ್ಚ್ 2020, 1:54 IST
ಅಕ್ಷರ ಗಾತ್ರ

ಸರಿಹೊತ್ತಿನ ಅವಶ್ಯಕತೆಗಳಿಗೆ ಗಾಢವಾಗಿ ಸ್ಪಂದಿಸಿದವರಿಗಿಂತ ಹೆಚ್ಚು ಮಹತ್ವವು ಭವಿಷ್ಯವನ್ನು ಅರ್ಥೈಸಿಕೊಂಡು ವಿವರಿಸಿದವರಿಗೆ ಇರುತ್ತದೆ. ತನ್ನ ಕಾಲಮಾನವನ್ನು ದಾಟಿ ಗಾಂಧೀಜಿಗೆ ಉಳಿಯುವ ಪ್ರಸ್ತುತತೆ ಈ ಬಗೆಯದು. ‘ಹಿಂದ್ ಸ್ವರಾಜ್’ನಲ್ಲಿ ಗಾಂಧೀಜಿ ‘ಇಂಗ್ಲಿಷರಿಲ್ಲದ ಇಂಗ್ಲಿಷ್ ಸ್ಥಾನ’ದ ಅಪಾಯವನ್ನು ಹೇಳಿದ್ದರು. ಇಲ್ಲಿ ಅವರ ಪ್ರಕಾರ ‘ಇಂಗ್ಲಿಷ್’ ಎನ್ನುವುದು ಒಂದು ಭಾಷೆಯಲ್ಲ; ಆಧುನಿಕ ಜಗತ್ತನ್ನು ರೂಪಿಸಿದ ಯಂತ್ರ ನಾಗರಿಕತೆ.

ಅರವಿಂದ ಚೊಕ್ಕಾಡಿ

ಯಂತ್ರದ ಬಳಕೆಯೇ ಇಲ್ಲದ ಬದುಕು ಅಸಾಧ್ಯ. ಶಿಲಾಯುಗದ ಮನುಷ್ಯ, ಬೆಂಕಿ ಮತ್ತು ಚಕ್ರವನ್ನು ಕಂಡುಹಿಡಿದಲ್ಲಿಗೆ ಯಂತ್ರನಾಗರಿಕತೆ ಪ್ರಾರಂಭವಾಗಿ ಆಯಿತು. ಸರ್ವೇ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತಿಂಗಳಿಗೆ ಸರಾಸರಿ ಹತ್ತು ಸಾವಿರ ರೂಪಾಯಿ ಸಂಪಾದಿಸುವ ಸಮಯದಲ್ಲಿ ಇನ್ನೊಬ್ಬ ಐದು ಲಕ್ಷ ರೂಪಾಯಿ ಗಳಿಸಲು ಸಾಧ್ಯವಾಗುವ ಸ್ಥಿತಿಯೇ ಯಂತ್ರನಾಗರಿಕತೆ. ನಿಜವಾಗಿ, ಸರ್ವೇ ಸಾಧಾರಣವಾಗಿ ಒಬ್ಬ ಹತ್ತು ಸಾವಿರ ರೂಪಾಯಿ ಸಂಪಾದಿಸುವಾಗ ಹೆಚ್ಚು ಕಷ್ಟದ ಕೆಲಸ ಮಾಡುವವನು ಗರಿಷ್ಠ ಐವತ್ತು ಸಾವಿರ ರೂಪಾಯಿ ಸಂಪಾದಿಸಬಹುದು. ಈ ಮಿತಿಯನ್ನು ದಾಟಿ ಮುಂದೆ ಹೋಗಲು ಸಾಧ್ಯವಾಗುವುದು ಪರಿಣಾಮಕಾರಿ ಯಂತ್ರಗಳು ರೂಪಿಸುವ ನಾಗರಿಕತೆಯಲ್ಲಿ.

ಆ ನಾಗರಿಕತೆಯು ಪ್ರಕೃತಿಯನ್ನು ಮಿತಿಮೀರಿ ಶೋಷಿಸುತ್ತಾ ಹೋಗುತ್ತದೆ. ಪಂಚಭೂತಗಳ ಮೇಲೆ ಹೆಚ್ಚು ಹೊಡೆತವನ್ನು ಹಾಕುತ್ತಾ ಹೋದ ಹಾಗೆ ಪ್ರಕೃತಿಯೇ ಆ ನಾಗರಿಕತೆಗೆ ವಿರುದ್ಧವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಪಶ್ಚಿಮದ ಅರ್ಥಶಾಸ್ತ್ರಜ್ಞ ಥಾಮಸ್ ರಾಬರ್ಟ್ ಮಾಲ್ತಸ್ ಭಿನ್ನವಾದ ರೀತಿಯಲ್ಲಿ ಹೇಳಿದ್ದಾರೆ. ಮಾಲ್ತಸ್ ಅವರ ಚಿಂತನೆಗಳು ಜನಸಂಖ್ಯೆಯ ಬಗೆಗೆ ಇವೆ. ಸಕಾರಾತ್ಮಕ ವಿಧಾನದಿಂದ ಜನಸಂಖ್ಯೆಯನ್ನು ನಿಯಂತ್ರಿಸದೇ ಇದ್ದರೆ ಪ್ರಕೃತಿ ತಾನೇ ಜನಸಂಖ್ಯೆಯನ್ನು ನಿಯಂತ್ರಿಸುತ್ತದೆ. ರೋಗರುಜಿನಗಳನ್ನು ತರುವುದು ಪ್ರಕೃತಿಯ ಒಂದು ಮಹತ್ವದ ಕ್ರಮವಾಗಿರುತ್ತದೆ ಎಂದು ಹೇಳಿದ್ದಾರೆ.

ಮಾಲ್ತಸ್ ಅವರ ಸಿದ್ಧಾಂತದ ಪ್ರಮುಖ ಸಮಸ್ಯೆ, ಅವರು ಆಹಾರೋತ್ಪಾದನೆ ಮತ್ತು ಜನಸಂಖ್ಯೆಗೆ ಮಾತ್ರವೇ ತುಲನೆಯನ್ನು ಮಾಡುತ್ತಾ ಹೋಗುವುದು. ಆದರೆ ಆಹಾರೋತ್ಪಾದನೆಯನ್ನು ಮೀರಿದ ಸಮಸ್ಯೆಗಳಿವೆ. ಜಗತ್ತಿನ ಜನಸಂಖ್ಯೆಯ ಏರಿಕೆಯು ಯಂತ್ರನಾಗರಿಕತೆಯ ಜೊತೆಯಲ್ಲೇ ಏರಿದಾಗ ಮನುಷ್ಯರ ಅವಶ್ಯಕತೆಗಳು ಏರಿಕೆಯಾಗುತ್ತವೆ. ಉದಾಹರಣೆಗೆ, ಕಾರು 1990ರ ದಶಕಕ್ಕೆ ವಿಲಾಸಿ ಸರಕು ಎನಿಸಿತ್ತು. ಆದರೆ ಇಂದು ಕಾರು ವಿಲಾಸಿ ಸರಕಲ್ಲ. ಮನುಷ್ಯರ ಸಾಮಾನ್ಯ ಅವಶ್ಯಕತೆ ಎನಿಸಿದೆ. ಅಂದರೆ ಕಾರಿನ ಉತ್ಪಾದನೆ ಆ ಪ್ರಮಾಣದಲ್ಲಿ ಸಹಜ ಏರಿಕೆಯಾಗುತ್ತದೆ. ಆಗ ಅದು ಹೊರಸೂಸುವ ಹೊಗೆ, ಹವಾನಿಯಂತ್ರಣಗಳಿಂದ ಬಿಡುಗಡೆಯಾಗುವ ಇಂಗಾಲ ಎಲ್ಲವೂ ಏರಿಕೆಯಾಗುತ್ತವೆ. ಪರಿಣಾಮವಾಗಿ ಪ್ರಕೃತಿಗೆ ಜಾಸ್ತಿ ಹೊಡೆತಗಳು ಬೀಳುತ್ತವೆ. ಈ ಅಂಶವನ್ನು ಮಾಲ್ತಸ್ ಗಮನಿಸಿಲ್ಲ. ಆದರೆ ಗಾಂಧೀಜಿ ಗಮನಿಸಿದ್ದರು ಮತ್ತು ಅದನ್ನು ವಿಶ್ವಾತ್ಮಕ ದೃಷ್ಟಿಕೋನದಲ್ಲೇ ಗ್ರಹಿಸಿದ್ದರು.

ದೇಶ ವಿಭಜನೆಯ ಸಂದರ್ಭದಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ‘ಇನ್ನು ಮುಂದೆ ಭಾರತದಲ್ಲಿ ರಕ್ತಪಾತವೇ ಗತಿ’ ಎಂದಾಗ ಗಾಂಧೀಜಿ, ‘ಭಾರತದಲ್ಲಿ ರಕ್ತಪಾತವಾದರೆ ಇಂಗ್ಲೆಂಡ್ ಹೇಗೆ ನೆಮ್ಮದಿಯಿಂದ ಇರಬಲ್ಲದು?’ ಎಂದು ಕೇಳಿದ್ದರು. ಭಾರತಕ್ಕೂ ಇಂಗ್ಲೆಂಡಿಗೂ ಇರುವ ರಾಜಕೀಯ ಮತ್ತು ಭೌಗೋಳಿಕ ಅಂತರವನ್ನು ತೊಡೆದುಹಾಕಿ ಗ್ರಹಿಸಬಲ್ಲ ಶಕ್ತಿ ಗಾಂಧೀಜಿಗೆ ಇತ್ತು. ಕೊರೊನಾ ವೈರಸ್, ಗಾಂಧೀಜಿಯ ಈ ಗ್ರಹಿಕೆಗೆ 73 ವರ್ಷಗಳ ನಂತರ ಒದಗಿಸಿದ ಸಾಕ್ಷಿಯಾಗಿ ನಮ್ಮ ಮುಂದಿದೆ. ಈ ಗ್ರಹಿಕೆ, ‘ಜಗತ್ತಿನ ಎಲ್ಲ ಜೀವಿಗಳನ್ನೂ ನಿನ್ನ ಆತ್ಮವೆಂದೇ ತಿಳಿ’ ಎಂದ ಉಪನಿಷತ್‌ನ ಋಷಿಗಳಿಗೆ ಇತ್ತು. ಮಹಾಭಾರತದ ಕರ್ತೃ ವ್ಯಾಸ ಅಥವಾ ವ್ಯಾಸರುಗಳಿಗೆ ಇತ್ತು. ಇದನ್ನು ಬಿಟ್ಟರೆ, ಇಡೀ ವಿಶ್ವವನ್ನು ತನ್ನೊಳಗೆ ಗ್ರಹಿಸಿ ವಿವರಿಸುವುದರಲ್ಲಿ, ಒಬ್ಬ ಋಷಿಯ ಹಾಗೆಯೇ ಬದುಕಿದ ಗಾಂಧೀಜಿಗೆ ಸರಿಸಾಟಿಯಾಗಿ ನಿಲ್ಲಬಲ್ಲವರು ಆಧುನಿಕ ಜಗತ್ತಿನಲ್ಲಿ ಯಾರೂ ಇಲ್ಲ.

‘ಹಿಂದ್ ಸ್ವರಾಜ್’ನಲ್ಲಿ ಗಾಂಧೀಜಿ ಆಧುನಿಕ ವೈದ್ಯರನ್ನು ವಿರೋಧಿಸಿದ್ದರು. ಮನುಷ್ಯರು ತಮ್ಮ ದೇಹದ ಬಗ್ಗೆ ತಾವೇ ಕಾಳಜಿ ವಹಿಸದಂತೆ ವೈದ್ಯರು ಮಾಡುತ್ತಾರೆ ಎನ್ನುವುದು ಗಾಂಧೀಜಿಯ ಆಕ್ಷೇಪಕ್ಕೆ ಕಾರಣ. ಅನೇಕ ಕಾರಣಗಳಿಗಾಗಿ ನಾವು ಆಧುನಿಕ ವೈದ್ಯರಿಗೆ ಋಣಿಯಾಗಿದ್ದೇವೆ. ಆದರೆ ಈ ಋಣದ ಅಗತ್ಯ ಉಂಟಾಗುವುದು ಬಾಳುವ ಶಕ್ತಿ ಇಲ್ಲದ ಭ್ರೂಣವನ್ನು ವೈದ್ಯಕೀಯ ನೆರವಿನಿಂದ ಜನಿಸುವಂತೆ ಮಾಡಿ, ವೈದ್ಯಕೀಯ ನೆರವಿನಿಂದಲೇ ಬಾಳಿಸಿದಾಗ. ತನ್ನ ಸಹಜ ವ್ಯವಸ್ಥೆಯಲ್ಲಿ ಬಾಳುವ ಶಕ್ತಿ ಇಲ್ಲದ ಭ್ರೂಣವನ್ನುಪ್ರಕೃತಿ ಗರ್ಭಪಾತವಾಗುವಂತೆ ಮಾಡುತ್ತದೆ. ಬಹುಶಃ ಆಧುನಿಕ ವೈದ್ಯರ ನೆರವಿಲ್ಲದೆ ಬಾಳಬಲ್ಲ ಮನುಷ್ಯರ ಸಂಖ್ಯೆ ಆಧುನಿಕ ಜಗತ್ತಿನಲ್ಲಿ ತುಂಬಾ ಕಡಿಮೆ. ಸರಾಸರಿ ಜೀವಿತಾವಧಿಯ ಏರಿಕೆಯು ಆಧುನಿಕ ವೈದ್ಯರ ಶ್ರಮದ ಫಲವೇ ಹೊರತು ಮನುಷ್ಯರ ಸಾಮರ್ಥ್ಯದ ಸಹಜ ಏರಿಕೆಯಲ್ಲ.

ಪ್ರಕೃತಿಯು ರೋಗರುಜಿನ ತಂದಾಗಲೂ ಪ್ರಾಕೃತಿಕವಾಗಿ ಸದೃಢವಾಗಿಲ್ಲದೆ ವೈದ್ಯರ ದಯೆಯಿಂದ ಬಾಳುವವರ ಮೇಲೆಯೇ ಕ್ರೂರ ದೃಷ್ಟಿ ಬೀರುತ್ತದೆ ವಿನಾ ಸದೃಢರ ಮೇಲಲ್ಲ. ಪ್ರಕೃತಿ ಹೀಗೆ ತನ್ನನ್ನು ಸಮತೋಲನಗೊಳಿಸಿಕೊಳ್ಳದೇ ಇದ್ದರೆ ಭೂಮಿಯ ಉಳಿವು ಕೂಡ ಸಾಧ್ಯವಿಲ್ಲ. ಆದ್ದರಿಂದಲೇ ಪ್ರಕೃತಿಗೆ ವಿರುದ್ಧವಾಗಿ ಪ್ರಭುತ್ವವನ್ನು ಸ್ಥಾಪಿಸುವ ಯಂತ್ರನಾಗರಿಕತೆಯ ತತ್ವಕ್ಕಿಂತ ಪ್ರಕೃತಿಯ ನಿಯಮಗಳೊಂದಿಗೆ ಬಾಳುವ ಗಾಂಧೀಜಿಯ ಸಂಸ್ಕೃತಿ ಮಹತ್ವದ್ದಾಗುತ್ತದೆ. ಗಾಂಧೀಜಿ ನೆಚ್ಚಿಕೊಂಡಿದ್ದದ್ದು ಮಣ್ಣಿನ ಚಿಕಿತ್ಸೆ ಮತ್ತು ಜಲ ಚಿಕಿತ್ಸೆಯನ್ನು. ಅವೆರಡೂ ಪ್ರಕೃತಿಯ ಸಹಜ ವ್ಯವಸ್ಥೆಗಳೇ ಆಗಿವೆ.

ಬಹುಮಟ್ಟಿಗೆ ಭಾರತದ ನಾಗರಿಕತೆಯ ವಿಕಾಸದಲ್ಲಿ ಯಂತ್ರನಾಗರಿಕತೆಗೆ ವಿರುದ್ಧವಾದ ಒಂದು ನಿಲುವು ಇದೆ. ಹಂಪಿಯಲ್ಲಿ ಏಳು ಸ್ವರಗಳನ್ನು ಕಲ್ಲಿನ ಕಂಬದಲ್ಲಿ ಹೊರಡಿಸಲು ಸಾಧ್ಯವಾಗುತ್ತದೆ ಎಂದಾದರೆ, ಅಲ್ಲಿ ಜ್ಞಾನದ ಕೊರತೆ ಇಲ್ಲ. ಅರಿವಳಿಕೆಯನ್ನು ಕೊಟ್ಟು ಸುಶ್ರುತ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಎಂದಾದರೆ, ಜ್ಞಾನದ ಕೊರತೆ ಇಲ್ಲ. ಆದರೆ ಜ್ಞಾನಕ್ಕೆ ಅವರು ಯಂತ್ರಗಳನ್ನು ಅಳವಡಿಸಲಿಲ್ಲ. ಬದಲು ಮಾನವಶಕ್ತಿಯನ್ನೇ ಬಳಸುತ್ತಿದ್ದರು. ಏಕೆಂದರೆ ಯಂತ್ರನಾಗರಿಕತೆಯು ಪ್ರಕೃತಿಯ ಮೇಲೆ ಪ್ರಭುತ್ವವನ್ನು ಸಾಧಿಸಲು ಹೊರಡುತ್ತದೆ. ಗಾಂಧೀಜಿ ಇದನ್ನು ಗ್ರಹಿಸಿರುವುದನ್ನು ‘ಹಿಂದ್ ಸ್ವರಾಜ್’ನಲ್ಲಿ ಕಾಣಬಹುದು. ‘ಭಾರತದಲ್ಲಿ ರಾಷ್ಟ್ರೀಯ ಏಕತೆಯ ಪ್ರಜ್ಞೆ ಬ್ರಿಟಿಷರು ಬರುವವರೆಗೆ ಇರಲಿಲ್ಲ’ ಎಂಬ ಮಾತಿಗೆ ಗಾಂಧೀಜಿ, ‘ಏಕಿರಲಿಲ್ಲ, ಬ್ರಿಟಿಷರು ಬರುವ ಸಾವಿರಾರು ವರ್ಷಗಳ ಮೊದಲೇ ಭಾರತೀಯ ಏಕತೆ ಇತ್ತು. ದೇಶದ ನಾನಾ ಭಾಗಗಳಲ್ಲಿರುವ ಧಾರ್ಮಿಕ ಕೇಂದ್ರಗಳೇ ನಮ್ಮಲ್ಲಿ ಏಕತೆಯನ್ನು ತಂದಿವೆ’ ಎಂದು ಉತ್ತರಿಸುತ್ತಾರೆ.

ಗಾಂಧೀಜಿ ಎತ್ತಿ ಹಿಡಿಯುವ ಧಾರ್ಮಿಕತೆಗೆ ಪ್ರಕೃತಿಯ ಸಹಜ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಶಕ್ತಿ ಇದೆ. ಋಗ್ವೇದದ ‘ಋತ’ದ ಪರಿಕಲ್ಪನೆಯು ಜೀವನದ ನಿರಂತರ ಹರಿವನ್ನು ಎಲ್ಲಿಯೂ ತಡೆಯಬಾರದು ಎಂದು ಹೇಳುತ್ತದೆ. ಸಹಜವಾದದ್ದರೊಂದಿಗೆ ಬದುಕಬೇಕೇ ವಿನಾ ಸಹಜವಾದದ್ದನ್ನು ತಡೆಯಬಾರದು ಎಂಬ ಗಾಂಧಿ ತತ್ವಗಳೂ ಇದನ್ನೇ ಹೇಳುತ್ತವೆ.

ಆದರೆ ಆರ್ಥಿಕತೆಯ ಬೆಳವಣಿಗೆ ಆಗಬೇಕಾದರೆ ಅಣೆಕಟ್ಟೆಗಳನ್ನು ನಿರ್ಮಿಸಬೇಕು. ಕೈಗಾರಿಕೆಗಳನ್ನು ಹೆಚ್ಚಿಸಬೇಕು. ಮಾರುಕಟ್ಟೆ ವಿಸ್ತರಿಸಬೇಕು. ಈ ಆಶಯಗಳು ಒಳ್ಳೆಯವೇ. ಆದರೆ ಅವು ಪ್ರಕೃತಿಗೆ ಕಿರುಕುಳವನ್ನು ಹೆಚ್ಚಿಸುತ್ತಾ ಹೋಗುತ್ತವೆ. ಇದನ್ನು ತಡೆಯಬೇಕೆಂದು ಜನರಿಗೆ ಗೊತ್ತಿದೆ. ಆದ್ದರಿಂದಲೇ ಪರಿಸರ ಸಮ್ಮೇಳನಗಳು, ಪಠ್ಯದಲ್ಲಿ ಪರಿಸರ ಜಾಗೃತಿ ಎಲ್ಲವನ್ನೂ ಮಾಡಲಾಗಿದೆ. ಆದರೆ ಅದನ್ನು ಜಾರಿಗೊಳಿಸುವ ಚೈತನ್ಯ ಜನರಿಗಿಲ್ಲ. ಏಕೆಂದರೆ ಆರ್ಥಿಕತೆಯ ಮೋಹಕ ಸೆಳೆತದಿಂದ ನಾವು ಬಿಡಿಸಿ ಕೊಳ್ಳಲಾರೆವು. ಕಾರು ಇರುವವನಿಗೆ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಲು ಮನಸ್ಸು ಬರುವುದಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವವನಿಗೆ ಅರ್ಧ ಕಿ.ಮೀ. ಕೂಡ ನಡೆದೇ ಚಲಿಸಲು ಮನಸ್ಸು ಬರುವುದಿಲ್ಲ. ಆದ್ದರಿಂದ ಪ್ರಕೃತಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬಲಿಯಾಗಬೇಕಾದ ಅನಿವಾರ್ಯ ಬರುತ್ತದೆ.

ಈ ಬಿಕ್ಕಟ್ಟಿನ ನಿವಾರಣೆ ಇರುವುದು ಜೀವನ ದೃಷ್ಟಿಯನ್ನು ಶ್ರೀಮಂತಗೊಳಿಸುವುದರಲ್ಲಿ. ಸರಳ ಬದುಕು ಮತ್ತು ಉದಾತ್ತ ಚಿಂತನೆಯ ತತ್ವವು ಪ್ರಕೃತಿಯು ಮನುಷ್ಯನ ಪರವಾಗಿಯೇ ನಿಲ್ಲುವಂತೆ ಮಾಡುತ್ತವೆ. ಆದರೆ ಅದು ಸಾಧ್ಯವೇ ಎನ್ನುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT