ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಬಾಲ್ಯದಿಂದ ನಾವು ಕಲಿಯಬೇಕಾದ ಗುಣ

Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಆಲ್ಬರ್ಟ್ ಐನ್‌ಸ್ಟೀನ್ ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿ ಎಂದು ಹೆಸರು ಪಡೆದಿದ್ದ. ಅವನು ಓದುತ್ತಿದ್ದ ಆ ಶಾಲೆಯನ್ನು ಕ್ಯಾಥೋಲಿಕ್ ಕ್ರಿಶ್ಚಿಯನ್ನರು ನಡೆಸುತ್ತಿದ್ದರು. ಅಲ್ಲಿ ಓದುವವರು ಹೆಚ್ಚಿನವರು ಅವರೇ ಆಗಿದ್ದರು. ಐನ್‌ಸ್ಟೀನ್ ಯಹೂದಿಯರ ಮನೆಯಲ್ಲಿ ಹುಟ್ಟಿದ್ದ. ಶಾಲೆಯಲ್ಲಿ ಕ್ರಿಸ್ತನ ವಿಷಯವನ್ನು ಪ್ರಸ್ತಾಪಿಸುವಾಗ ಯಹೂದಿಗಳು ಅವನನ್ನು ಶಿಲುಬೆಗೇರಿಸಿದ್ದನ್ನು ಅಭಿನಯಿಸಿ ತೋರಿಸುತ್ತಿದ್ದರೆ ಐನ್‌ಸ್ಟೀನ್‌ನ ಕಣ್ಣುಗಳು ತೇವಗೊಂಡಿದ್ದವು. ಅವನ ಸ್ನೇಹಿತರು, ‘ನೀನಿವತ್ತು ಅಳುತ್ತಿದ್ದಿಯೆ, ಆದರೆ ಇದನ್ನು ಮಾಡಿದವರು ನಿಮ್ಮ ಯಹೂದ್ಯರೇ’ ಎಂದಿದ್ದರು.

ಬಾಲಕನಿಗೆ ಅರ್ಥವಾಗದ ಮಾತೆಂದರೆ ‘ನಿಮ್ಮವರು’ ಎನ್ನುವುದು. ಮನೆಯಲ್ಲಿ ತಂದೆ ತಾಯಿಯರು ನಮ್ಮ ಮತ ಪರಮ ಪವಿತ್ರ, ಬೇರೆಯವರದ್ದು ನಮ್ಮಷ್ಟು ಅಲ್ಲ ಎಂದು ಹೇಳಿಕೊಡುವುದು ಸಹಜವಾದ್ದರಿಂದ ಎಂದೋ ನಡೆದ ದುಷ್ಕೃತ್ಯಕ್ಕೆ ಇಂದಿನವರು ನರಳುತ್ತಾರೆ. ಐನ್‌ಸ್ಟೀನ್‌ನ ವಿಷಯದಲ್ಲಿ ಆದದ್ದು ಅದೇ. 

ಐನ್‌ಸ್ಟೀನ್ ಮನೆಗೆ ಬಂದವನೇ ತಾಯಿಯನ್ನು ಕೇಳಿದ, ‘ಅಮ್ಮಾ ಎಲ್ಲರೂ ಹೇಳುತ್ತಿದ್ದಾರೆ ನಮ್ಮವರು ಯೇಸು ಕ್ರಿಸ್ತನನ್ನು ಮೊಳೆ ಜಡಿದು ಕೊಂದರಂತೆ ನಿಜವೇ?’ ಎಂದು. ತಾಯಿಗೆ ಉತ್ತರಿಸಲಾಗಲಿಲ್ಲ, ಮಾತನ್ನು ಮರೆಸಲು ನೋಡುತ್ತಾಳೆ. ಆದರೆ ಬಾಲಕ ಐನ್‌ಸ್ಟೀನ್ ಬಿಕ್ಕುತ್ತಾ, ‘ನನಗೆ ಕಬ್ಬಿಣದ ಚೂರೊಂದು ಸುಮ್ಮನೆ ತಾಕಿದರೆ ಎಷ್ಟು ನೋವಾಗುತ್ತೆ. ಅಂಥಾ ದೊಡ್ಡ ಮೊಳೆಗಳನ್ನು ಕೈಕಾಲಿಗೆ ಬಡಿದಾಗ ಪಾಪ ಯೇಸುವಿಗೆ ಎಂಥಾ ನೋವಾಗಿದ್ದೀತು ಎಂದು ಹೇಳಿಕೊಂಡಿದ್ದ. ಶಾಲೆಯಲ್ಲಿ ನಡೆದ ಘಟನೆ ಅವನ ಮನಸ್ಸನ್ನು ಆಳವಾದ ನೋವಿಗೆ ನೂಕಿತ್ತು. ಅವನ ಮನಸ್ಸಿನಲ್ಲಿನ ಆರದ ಗಾಯಕ್ಕೆ ಮದ್ದೆರೆಯುವಂತೆ ತಾಯಿ ಕಣ್ಣಲ್ಲಿ ನೀರು ತುಂಬಿ, ‘ನಿನ್ನ ಮನಸ್ಸಿಗೆ ನೋವನ್ನಿಸಿತ್ತಲ್ಲ ಮಗೂ ಅದು ದೊಡ್ಡವರೆನ್ನಿಸಿಕೊಂಡ ಜನಕ್ಕೆ ಅನ್ನಿಸಿದ್ದರೆ ಯೇಸುವಿಗೆ ಮೊಳೆ ಹೊಡೆಯುತ್ತಿರಲಿಲ್ಲ. ಇತಿಹಾಸದಲ್ಲಿ ಒಂದು ಅಮಾನವೀಯ ಘಟನೆ ನಡೆಯುತ್ತಿರಲಿಲ್ಲ. ನೋವಿನ ಅರ್ಥ ಗೊತ್ತಾಗದವರು ಮಾತ್ರ ನೋವನ್ನು ಕೊಡುತ್ತಾರೆ’ ಎಂದಿದ್ದಳು. ಆಗ ಪುಟ್ಟ ಐನ್‌ಸ್ಟೀನ್ ಹೇಳಿದ್ದ, ‘ನಾನವತ್ತು ಅಲ್ಲಿ ಇರಬೇಕಿತ್ತು. ಅವರಿಗೆ ಸರಿಯಾಗಿ ಹೇಳುತ್ತಿದ್ದೆ’ ಎಂದು.  

ಸ್ವಲ್ಪ ದಿನಗಳ ಹಿಂದೆ ಬಾಲಮಂದಿರದ ಮಕ್ಕಳಿಗೆ ನಡೆದ ಕಥಾ ಕಮ್ಮಟದಲ್ಲಿ ಮಾತನಾಡಲು ಹೋಗಿದ್ದೆ. ನಾನು ಗಾಂಧಿಯಾಗಿದ್ದರೆ ಎನ್ನುವ ವಿಷಯ ಹಿಡಿದು ಐದರಿಂದ ಆರು ಸಾಲಲ್ಲಿ ಒಂದು ಕಥೆಯನ್ನು ಹೇಳಬೇಕು ಎನ್ನುವುದು ಅವತ್ತಿನ ಟಾಸ್ಕ್ ಆಗಿತ್ತು. ಹದಿಮೂರರ ಹುಡುಗಿ ಸಾತವ್ವ ಹೇಳಿದ ಕಥೆ, ‘ನಾನು ಕಾಡಿನಲ್ಲಿ ಹೋಗ್ತಾ ಇದ್ದೆ. ಮುಳ್ಳೊಂದು ನನ್ನ ಕಾಲಿಗೆ ನಟ್ಟಿತು. ನೋವಾಯಿತು. ಆ ಮುಳ್ಳನ್ನು ತೆಗೆದು ಅದಕ್ಕೆ ಹೇಳಿದೆ ನನಗೆ ಚುಚ್ಚಿ ನೋವು ಮಾಡಿದ ಹಾಗೆ ಇನ್ನೊಬ್ಬರಿಗೆ ಮಾಡಬೇಡ’ ಎಂದು. ಈ ಮಾತುಗಳನ್ನು ಕೇಳಿ ದಂಗಾದೆ. ನನ್ನ ಕಂಗಳು ತುಂಬಿಬಂದವು. ಮಕ್ಕಳ ತಿಳಿಮನಸ್ಸಿಗೆ ಮಾತ್ರ ನೋವು ಎಂದರೆ ಏನೆಂದು ಅರ್ಥವಾಗುತ್ತದೆ, ಮತ್ತು ಇನ್ನೊಬ್ಬರಿಗೆ ಆಗಬಹುದಾದ ನೋವಿನ ಅಂದಾಜೂ ಇರುತ್ತದೆ. ಅದಕ್ಕೆ ಅವರಲ್ಲಿ ಇನ್ನೊಬ್ಬರಿಗೆ ನೋವು ಕೊಡಬಾರದು ಎನ್ನುವ ತಿಳಿವಳಿಕೆ ಅಪ್ರಜ್ಞಾಪೂರ್ವಕವಾಗಿ ದಕ್ಕಿಬಿಡುತ್ತದೆೆ. ಬಾಲ್ಯವನ್ನು ಕಳೆದುಕೊಂಡ ನಾವು ಇದನ್ನು ರೂಢಿಸಿಕೊಂಡರೆ, ಮನುಷ್ಯರಾಗಿ ಬದುಕಲು ಇದಕ್ಕಿಂತ ದೊಡ್ಡ ಗುಣ ಯಾವುದೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT