ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸದನ ಸಮಿತಿ ರಚನೆ– ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವ ‘ಅಸ್ತ್ರ’

Last Updated 11 ಡಿಸೆಂಬರ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಸರ್ಕಾರದಮೇಲೆ ಭ್ರಷ್ಟಾಚಾರ ಅಥವಾ ಹಗರಣದ ಗಂಭೀರ ಆರೋಪಗಳು ಕೇಳಿ ಬಂದಾಗ ಸದನ ಸಮಿತಿ ಅಥವಾ ವಿಚಾರಣಾ ಆಯೋಗಗಳನ್ನು ರಚಿಸಿ ಕೈತೊಳೆದುಕೊಳ್ಳುವ ‘ಸಂಪ್ರದಾಯ’ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಸದನ ಸಮಿತಿಯಾಗಲಿ, ವಿಚಾರಣಾ ಆಯೋಗಗಳು ನೀಡುವ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಂಡ ಉದಾಹರಣೆಗಳೇ ಇಲ್ಲ. ವಿವಿಧ ಕಾಮಗಾರಿಗಳಲ್ಲಿ ಶೇ 40 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದೆ. ಈ ಬಗ್ಗೆ ಜಂಟಿ ಸದನ ಸಮಿತಿ ರಚಿಸುವಂತೆಯೂ ಕಾಂಗ್ರೆಸ್‌ ಪಟ್ಟು ಹಿಡಿದಿದೆ.

ಈ ಹಿಂದೆ ಸರ್ಕಾರಗಳು ರಚಿಸಿದ ಸದನ ಸಮಿತಿಗಳು ಮತ್ತು ವಿಚಾರಣಾ ಆಯೋಗಗಳು ಸಲ್ಲಿಸಿದ ವರದಿ ಮತ್ತು ಕೈಗೊಂಡ ಕ್ರಮಗಳ ವಿವರ ಇಲ್ಲಿದೆ–

ಪ್ರಮುಖ ಸದನ ಸಮಿತಿಗಳು:

ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿ ಎಚ್‌.ಡಿ. ಕುಮಾರಸ್ವಾಮಿ(2006ರಲ್ಲಿ) ಮುಖ್ಯಮಂತ್ರಿಯಾಗಿದ್ದಾಗ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಜಂಟಿ ಸದನ ಸಮಿತಿ 2007ರಲ್ಲಿ ಮಧ್ಯಂತರ ವರದಿ ನೀಡಿತ್ತು. ದೊಡ್ಡ ಕಂಪೆನಿಗಳು, ಖಾಸಗಿಯವರು ಅಕ್ರಮವಾಗಿ ಭೂಮಿ ಒತ್ತುವರಿ ಮಾಡಿಕೊಂಡ ಬಗ್ಗೆ ವರದಿ ವಿವರಿಸಿತ್ತು. ಮರು ವಶಕ್ಕೆ ಪಡೆಯುವ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆಯಲೇ ಇಲ್ಲ.

ನೈಸ್‌ ಕಂಪನಿಎಕರೆಗೆ ₹ 10 ಸಾಂಕೇತಿಕ ದರ ಪಾವತಿಸಿ 32 ಸಾವಿರ ಎಕರೆ ಭೂಮಿ ಪಡೆದ ಆರೋಪದ ಕುರಿತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ.ಹೆಚ್ಚುವರಿ 11,660 ಎಕರೆ ಕೂಡಲೇ ವಾಪಸ್‌ ಪಡೆಯಬೇಕು. ಕಂಪನಿ ಅಕ್ರಮವಾಗಿ ವಸೂಲು ಮಾಡಿರುವ ₹1,350 ಕೋಟಿ ಮರು ವಸೂಲು ಮಾಡಬೇಕು ಎಂದು ವರದಿ ತಿಳಿಸಿತ್ತು. ಆದರೆ ಯಾವುದೇ ಕ್ರಮ ಜರುಗಿಸಿಲ್ಲ.

2004 ರಿಂದ 2014 ರವರೆಗೆ ವಿದ್ಯುತ್‌ ಖರೀದಿ ಪ್ರಮಾಣ ಮತ್ತು ವೆಚ್ಚವು ಹೆಚ್ಚಿದ ಬಗ್ಗೆ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಯಿತು.ವಿದ್ಯುತ್‌ ಖರೀದಿಯಲ್ಲಿ ಹೆಚ್ಚುವರಿ ಹಣ ಪಾವತಿಸಿದ್ದು, ಹೆಚ್ಚಿನ ತನಿಖೆ ಆಗಬೇಕು ಎಂದು ವರದಿ ಶಿಫಾರಸು ಮಾಡಿತ್ತು. ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆರೆ, ಕಟ್ಟೆ ಮತ್ತು ಕುಂಟೆಗಳ ಒತ್ತುವರಿ ದೂರುಗಳ ಪರಿಶೀಲನೆಗೆ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ರಚಿಸಲಾಯಿತು.10,785 ಎಕರೆ 35.76 ಗುಂಟೆ ಒತ್ತುವರಿ ಆಗಿದೆ.ಮಾರ್ಗಸೂಚಿ ದರ ಅಥವಾ ಮಾರುಕಟ್ಟೆ ಮೌಲ್ಯವನ್ನು ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿತು. ಕ್ರಮವನ್ನು ಜರುಗಿಸಿಲ್ಲ.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ ಹೆಗ್ಡೆ ಸಲ್ಲಿಸಿದ್ದ ವರದಿಯಲ್ಲಿ ಹೆಸರಿಸಲಾಗಿದ್ದ ಅಧಿಕಾರಿಗಳ ಪಾತ್ರದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು 2012ರಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಕೆ.ಜೈರಾಜ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು 517 ಅಧಿಕಾರಿ, ಸಿಬ್ಬಂದಿಗಳ ಬಗ್ಗೆ ಸವಿಸ್ತಾರ ವರದಿ ಕೊಟ್ಟಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ವರದಿಯ ಶಿಫಾರಸುಗಳನ್ನು ಅನುಷ್ಠಾನ ಮಾಡಲೇ ಇಲ್ಲ.

2011-12ನೇ ಸಾಲಿನಲ್ಲಿ ರಾಮನಗರ ಜಿಲ್ಲೆಯ ಮಾಗಡಿ ಲೋಕೋಪಯೋಗಿ ವಿಭಾಗದಲ್ಲಿ ದೊಡ್ಡ ಮೊತ್ತದ ಕಾಮಗಾರಿಯನ್ನು ₹19 ಲಕ್ಷಕ್ಕೆ ವಿಂಗಡಿಸಿ ಆಯ್ದ ಗುತ್ತಿಗೆದಾರರಿಗೆ ನೀಡಿದ್ದಲ್ಲದೇ, ಕಾಮಗಾರಿ ನಡೆಸದೇ ಬಿಲ್ ಪಾವತಿ ಮಾಡಲಾಗಿತ್ತು. ₹600 ಕೋಟಿ ಮೊತ್ತದ ಈ ಕಾಮಗಾರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಆಗಿನ ಶಾಸಕ ಡಾ.ಎಚ್.ಸಿ. ಮಹದೇವಪ್ಪ ಸದನದಲ್ಲಿ ಆರೋಪಿಸಿದ್ದರು. ಈ ಹಗರಣದ ತನಿಖೆಗಾಗಿ ಅಪ್ಪು ಪಟ್ಟಣಶೆಟ್ಟಿ ನೇತೃತ್ವದ ಸದನ ಸಮಿತಿ ರಚಿಸಲಾಗಿತ್ತು. ವರದಿ ಮಂಡನೆಯೂ ಆಗಿತ್ತು. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಮಹದೇವಪ್ಪ ಲೋಕೋಪಯೋಗಿ ಸಚಿವರಾದರು. ಹಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಸಿದ್ದರಾಮಯ್ಯ ಅವಧಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ‘ರಿಡೂ’ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿದ ಆರೋಪ ಕೇಳಿ ಬಂದಿತು.ಆಗ ಅವರು ತಮ್ಮ ಅವಧಿ ಅಲ್ಲದೆ, ನಾಲ್ಕು ಮುಖ್ಯಮಂತ್ರಿಗಳ ಅವಧಿಯಲ್ಲಿ ಆಗಿರುವ ಡಿನೋಟಿಫಿಕೇಷನ್‌ ಕುರಿತೂ ವಿಚಾರಣೆ ನಡೆಸಲುನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದರು. ವರದಿಯನ್ನು ಸದನದಲ್ಲಿ ಮಂಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT