ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮೆದುಳಿಗೆ ಇಳಿಯುತ್ತಿದೆಯೇ ಮಾಹಿತಿ?

ತಂತ್ರಜ್ಞಾನವು ಓದುಗರಿಗೆ ಅಗಾಧ ಪ್ರಮಾಣದಲ್ಲಿ ಮಾಹಿತಿಯನ್ನು ಒದಗಿಸುತ್ತಿರುವ ಸಂದರ್ಭದಲ್ಲೇ ಗುಣಾತ್ಮಕ ಸಂಶೋಧನೆಗಳ ಕೊರತೆಯನ್ನು ಎದುರಿಸುತ್ತಿದ್ದೇವೆ
Last Updated 4 ಜುಲೈ 2022, 19:30 IST
ಅಕ್ಷರ ಗಾತ್ರ

ಇದು, ಎರಡು ದಶಕಗಳ ಹಿಂದಿನ ಮಾತು- ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟುವಿನ ಸಂಪಾದಕ ಜೇಮ್ಸ್ ಮರ್‍ರೆ ಕುರಿತು ನಾನು ಪಾಠ ಮಾಡಬೇಕಿತ್ತು. ಬೃಹತ್ ಗಾತ್ರದ ಆ ನಿಘಂಟುವಿನ ಯಾವ ಪುಟದಲ್ಲೂ ಅದರ ಸಂಪಾದಕ ಮರ್‍ರೆ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಕೊನೆಗೆ ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ, ಹಲವಾರು ಪರಾಮರ್ಶನ ಪುಸ್ತಕಗಳನ್ನು ಪರಿಶೀಲಿಸಿ ವಿವರಗಳನ್ನು ಹೆಕ್ಕಿ ತೆಗೆದಾಗ ಸಿಕ್ಕ ಮಾಹಿತಿ ಅರ್ಧಪುಟದಷ್ಟಿತ್ತು.

ಇಂಟರ್‌ನೆಟ್ ಹೆಚ್ಚು ಬಳಕೆಯಲ್ಲಿ ಇಲ್ಲದ ಕಾಲ ದಲ್ಲಿ ಮಾಹಿತಿಯ ಶೋಧ ಹೆಚ್ಚು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಆ ಎರಡು ದಿನಗಳ ಅನೇಕ ಪುಸ್ತಕಗಳ ಓದುವಿಕೆಯು ಹಲವು ವಿಷಯಗಳನ್ನು ತಿಳಿದುಕೊಳ್ಳಲು ನೆರವಾಯಿತು. ಇಂದು ಪರಿಸ್ಥಿತಿ ಹಿಂದಿನಂತಿಲ್ಲ- ಇಂಟರ್‌ನೆಟ್ ಬಳಕೆ ವ್ಯಾಪಕವಾಗಿದ್ದು ಜಾಲತಾಣದಲ್ಲಿ ಜೇಮ್ಸ್ ಮರ್‍ರೆ ಹೆಸರು ಟೈಪಿಸಿದ ಕ್ಷಣಾರ್ಧದಲ್ಲಿ ಹತ್ತಾರು ಪುಟಗಳ ಮಾಹಿತಿಯು ಕಂಪ್ಯೂಟರ್ ಪರದೆ ಮೇಲೆ ತೆರೆದು
ಕೊಳ್ಳುತ್ತದೆ.

ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಇಂದು ಸಂಶೋ ಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಸ್ಕಿ-ಹಬ್ ಹೆಸರಿನ ಜಾಲತಾಣವು ಸಂಶೋಧನಾ ಲೇಖನವೊಂದು ಪ್ರಕಟವಾದ ಕೆಲವೇ ದಿನಗಳಲ್ಲಿ ಓದುಗರ ಕೈಸೇರುವಂತೆ ಮಾಹಿತಿ ಪಡೆಯುವಿಕೆಯನ್ನು ಸರಳಗೊಳಿಸಿದೆ.

ಮಾಹಿತಿಯು ಸುಲಭವಾಗಿ ಮತ್ತು ಹೆಚ್ಚಿನ ಪರಿ
ಶ್ರಮವಿಲ್ಲದೆ ದೊರೆಯುತ್ತಿರುವುದರಿಂದ ಇಂದು ಬರ ವಣಿಗೆಯಲ್ಲಿ ‘ಕತ್ತರಿಸು ಮತ್ತು ಅಂಟಿಸು’ (ಕಟ್ ಆ್ಯಂಡ್ ಪೇಸ್ಟ್) ಸಂಸ್ಕೃತಿಯು ಮುನ್ನೆಲೆಗೆ ಬಂದಿದೆ. ಹೆಚ್ಚಿನ ಬರಹಗಾರರು ತಮ್ಮ ಅಧ್ಯಯನದ ವಿಷಯದಲ್ಲಿ ಪ್ರಕಟವಾದ ವಿವಿಧ ಲೇಖನಗಳನ್ನು ಸಂಗ್ರಹಿಸಿ ಪ್ರತೀ ಲೇಖನದಿಂದ ಒಂದಿಷ್ಟು ಮಾಹಿತಿಯನ್ನು ಪಡೆದುಕೊಂಡು ಹೀಗೆ ಕಲೆಹಾಕಿದ ಮಾಹಿತಿಗೆ ಹೊಸ ಲೇಖನದ ಸ್ವರೂಪ ನೀಡುತ್ತಿದ್ದಾರೆ. ಬರಹಗಾರರ ಈ ನಕಲು ಸಂಸ್ಕೃತಿಗೆ ತಡೆ ಹಾಕಲು ಪ್ರಕಾಶಕರು ನಕಲು ಅಥವಾ ಕೃತಿಚೌರ್ಯವನ್ನು ಪತ್ತೆ ಹಚ್ಚಲು ತಂತ್ರಾಂಶಗಳನ್ನು ಉಪಯೋಗಿಸುತ್ತಿದ್ದಾರೆ. ಇಲ್ಲಿ ಜಾಣ ಬರಹಗಾರ ಮೂಲ ಲೇಖನದ ವಾಕ್ಯದಲ್ಲಿನ ಒಂದೆರಡು ಶಬ್ದ ಗಳನ್ನು ಕೈಬಿಡುವುದರಿಂದಲೊ ಅಥವಾ ಹೊಸ ಶಬ್ದಗಳ ಸೇರ್ಪಡೆಯಿಂದಲೊ ತಂತ್ರಾಂಶದ ನಕಲು ಶೋಧದ ಕಾರ್ಯವನ್ನೇ ಕಷ್ಟಸಾಧ್ಯಗೊಳಿಸುತ್ತಿದ್ದಾನೆ.

ಪ್ರಾಯೋಗಿಕ ತರಗತಿಗಳಿಗೆ ಹಾಜರಾದರೆ ಸಾಕು ಥಿಯರಿಗೆ ಸಂಬಂಧಿಸಿದ ಸಾಮಗ್ರಿಯನ್ನು ತರಗತಿಗೆ ಹಾಜರಾಗದೇ ತಂತ್ರಜ್ಞಾನದ ನೆರವಿನಿಂದ ಕಲೆ ಹಾಕಬಹುದು ಎನ್ನುವ ಆತ್ಮವಿಶ್ವಾಸವನ್ನು ವಿದ್ಯಾರ್ಥಿ ಗಳಲ್ಲಿ ನಾವು ಕಾಣುತ್ತಿದ್ದೇವೆ. ಇದರಿಂದ ಕಲಿಕೆ ಎನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿ ಜೊತೆಯಾಗಿ ಪಾಲ್ಗೊಳ್ಳುವ ಚಟುವಟಿಕೆ ಎನ್ನುವ ಮಾತು ಸವಕಲಾಗಿ ಈಗ ಕಲಿಕೆಯು ಏಕಮುಖವಾದ ಕ್ರಿಯೆಯಾಗಿ ಬದಲಾಗುತ್ತಿದೆ.

ತಂತ್ರಜ್ಞಾನವು ಅಗಾಧ ಪ್ರಮಾಣದಲ್ಲಿ ಓದುಗರಿಗೆ ಮಾಹಿತಿಯು ಸುಲಭವಾಗಿ ದೊರೆಯಲು ನೆರವಾಗುತ್ತಿರುವ ಸಂದರ್ಭದಲ್ಲೇ ಗುಣಾತ್ಮಕ ಸಂಶೋಧನೆಗಳಾಗುತ್ತಿಲ್ಲ ಎಂದು ಚರ್ಚಿಸುವ ವಿಲಕ್ಷಣ ಸನ್ನಿವೇಶದಲ್ಲಿ ನಾವಿದ್ದೇವೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ರಾಷ್ಟ್ರೀಯ ವೈದ್ಯಕೀಯ ಆಯೋಗ, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಈ ಉನ್ನತ ಶಿಕ್ಷಣ ಸಮಿತಿಗಳು ಶಿಕ್ಷಕರು ಉದ್ಯೋಗ ಬಡ್ತಿ ಮತ್ತು ವೇತನ ಬಡ್ತಿಗಾಗಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ಶಿಕ್ಷಕರ ಈ ಅಗತ್ಯವನ್ನು ಮನಗಂಡು ಅನೇಕ ಸಂಶೋಧನಾ ನಿಯತಕಾಲಿಕಗಳು ಲೇಖನಗಳನ್ನು ಪ್ರಕಟಿಸಲು ನಿರ್ದಿಷ್ಟ ಮೊತ್ತದ ಶುಲ್ಕವನ್ನು ನಿಗದಿಪಡಿಸಿವೆ. ಕೆಲವೊಮ್ಮೆ ತುರ್ತುಪರಿಸ್ಥಿತಿಗೆ ಅನುಗುಣವಾಗಿ ಶಿಕ್ಷಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಿ, ತಮ್ಮ ಸಂಶೋಧನಾ ಲೇಖನಗಳು ಶೀಘ್ರ ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯನ್ನು ನಿಯಂತ್ರಿಸಲು ನಿರ್ದಿಷ್ಟ ನಿಯತಕಾಲಿಕಗಳಲ್ಲೇ ಲೇಖನಗಳನ್ನು ಪ್ರಕಟಿಸಬೇಕೆನ್ನುವ ನಿಯಮವನ್ನು ಯುಜಿಸಿ ಜಾರಿಗೆ ತಂದಿದೆ.

ವೇತನ ಬಡ್ತಿ, ಉದ್ಯೋಗ ಬಡ್ತಿ, ಹುದ್ದೆಯ ನೇಮಕಾತಿಯ ನಿಯಮಗಳ ಚೌಕಟ್ಟಿಗೆ ಒಳಪಡಲು ಇಲ್ಲಿ ಬಹುಪಾಲು ಸಂಶೋಧನೆಗಳು ನಡೆಯುತ್ತಿವೆಯೇ ವಿನಾ ರಾಷ್ಟ್ರದ ಪ್ರಗತಿಗೆ ನೆರವಾಗಬಲ್ಲ ನಿಜವಾದ ಅರ್ಥದ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ, ಸಂಶೋಧಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿಲ್ಲ.

ಇನ್ನು ಸಾಹಿತ್ಯ ಕೃತಿಗಳನ್ನೂ ಡಿಜಿಟಲೀಕರಣಗೊಳಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಚಾಲನೆ ದೊರೆತಿದೆ. ಏಕಕಾಲಕ್ಕೆ ಸಾಹಿತ್ಯ ಕೃತಿಯೊಂದು ಡಿಜಿಟಲೀಕರಣದ ರೂಪದಲ್ಲಿ ಹಲವು ಓದುಗರಿಗೆ ಲಭ್ಯವಾಗುವ ಈ ಸೌಲಭ್ಯವನ್ನು ಓದುಗರ ವಲಯ ಒಕ್ಕೊರಲಿನಿಂದ ಸ್ವಾಗತಿಸುತ್ತಿಲ್ಲ. ಈ ಮೂಲಕ ಓದುವ ಸಾಹಿತ್ಯ ಕೃತಿಯೊಂದು ಪುಸ್ತಕ ಓದಿದಂತೆ ಸರಾಗವಾಗಿ ಮನಸ್ಸಿಗೆ ಇಳಿಯಲಾರದು ಎನ್ನುವ ಸಮಸ್ಯೆ ಅನೇಕ ಓದುಗರದು.

ಈ ನಡುವೆ ಮಾಹಿತಿಯ ಸುಲಭ ಪ್ರಾಪ್ತಿ ಕೃತಿಚೌರ್ಯವನ್ನು ಸುಗಮವಾಗಿಸಿರುವುದರಿಂದ ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳ ಅರಿವಿನ ವ್ಯಾಪ್ತಿ ವಿಸ್ತರಿಸುತ್ತಿಲ್ಲ ಎನ್ನುವ ಆರೋಪ ಶೈಕ್ಷಣಿಕ ವಲಯದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT